ರತ್ನಮ್ಮ ಮೂವೀಸ್ ಲಾಂಛನದಲ್ಲಿ ಪಿ.ಮೂರ್ತಿ ನಿರ್ಮಿಸಿರುವ, ಒರಟ ಶ್ರೀ ನಿರ್ದೇಶನದ ಹಾಗೂ ರಿಯಾಲಿಟಿ ಶೋ ಮೂಲಕ ನಾಡಿನ ಜನರ ಗಮನ ಸೆಳೆದಿದ್ದ ಸುನಾಮಿ ಕಿಟ್ಟಿ ನಾಯಕನಾಗಿ ನಟಿಸಿರುವ “ಕೋರ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಫೆಬ್ರವರಿ 7 ರಂದು ಪ್ಯಾನ್ ಇಂಡಿಯಾ ಚಿತ್ರವಾಗಿ ತೆರೆ ಕಾಣುತ್ತಿರುವ ಈ ಚಿತ್ರದ ಕನ್ನಡ ಟ್ರೇಲರ್ ಅನ್ನು ಮಹರ್ಷಿ ಆನಂದ ಗುರೂಜಿ ಹಾಗೂ ಪಾಲನಹಳ್ಳಿ ಗುರೂಜಿ ಅವರು ಬಿಡುಗಡೆ ಮಾಡಿದರು.
ತಮಿಳು ಟ್ರೇಲರ್, ನಿರ್ದೇಶಕರಾದ ಆರ್ ಚಂದ್ರು ಹಾಗೂ ಬಹದ್ದೂರ್ ಚೇತನ್ ಕುಮಾರ್ ಅವರಿಂದ ಅನಾವರಣವಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಅಧ್ಯಕ್ಷ ಉಮೇಶ್ ಬಣಕಾರ್, ನಟ ಕಾಕ್ರೋಜ್ ಸುಧೀ, ಒರಟ ಪ್ರಶಾಂತ್, ನಿರ್ಮಾಪಕ ಸಂಜಯ್ ಗೌಡ, ತುಕಾಲಿ ಸಂತೋಷ್ ಸೇರಿದಂತೆ ಸಾಕಷ್ಟು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಕೊರಗಜ್ಜನ ಆಶೀರ್ವಾದದಿಂದ ಆರಂಭವಾದ ಚಿತ್ರ “ಕೋರ” ಎಂದು ಮಾತನಾಡಿದ ನಿರ್ಮಾಪಕ ಪಿ.ಮೂರ್ತಿ, ಇದೊಂದು ನಮ್ಮ ನೆಲದ ಕಥೆ. ಆದಿವಾಸಿ ಬುಡಕಟ್ಟು ಜನಾಂಗ ಹಾಗೂ ರಾಕ್ಷಸನೊಬ್ಬನ ಕುರಿತಾದ ಕಥೆಯೂ ಹೌದು. ಹೆಚ್ಚಿನ ಭಾಗದ ಚಿತ್ರೀಕರಣ ಕಾಡಿನಲ್ಲೇ ನಡೆದಿದೆ. ಸಕಲೇಶಪುರ, ಶೃಂಗೇರಿ, ಉಡುಪಿ, ಮಂಗಳೂರು ಮುಂತಾದ ಕಡೆ ಚಿತ್ರೀಕರಣವಾಗಿದೆ. ನಿರ್ದೇಶಕ ಒರಟ ಶ್ರೀ ಒಂದೊಳ್ಳೆ ಕಥೆ ಮಾಡಿದ್ದಾರೆ.
ಸುನಾಮಿ ಕಿಟ್ಟಿ ಚೆನ್ನಾಗಿ ನಟಿಸಿದ್ದಾರೆ. ನಾನು ಕೂಡ ಕಠೋರ ಎಂಬ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಉತ್ತಮವಾಗಿ ಮೂಡಿಬಂದಿರುವ ಈ ಚಿತ್ರ ಫೆಬ್ರವರಿ 7 ರಂದು ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ಬಿಡುಗಡೆ ಯಾಗಲಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು. ನನ್ನನ್ನು ನಾಯಕನನ್ನಾಗಿ ಮಾಡಿದ ಪಿ.ಮೂರ್ತಿ ಅವರಿಗೆ ಹಾಗೂ ನನಗೆ ಅಭಿನಯ ಹೇಳಿಕೊಟ್ಟು ಚಿತ್ರದಲ್ಲಿ ನಟಿಸಲು ಸಿದ್ದತೆ ಮಾಡಿಸಿದ ನಿರ್ದೇಶಕರಾಗಿ ಶ್ರೀ ಅವರಿಗೆ ಧನ್ಯವಾದ. ನಮ್ಮ ತಂಡದ ಶ್ರಮದಿಂದ “ಕೋರ” ಒಂದೊಳ್ಳೆ ಚಿತ್ರವಾಗಿ ನಿಮ್ಮ ಮುಂದೆ ಬರುತ್ತಿದೆ ನೋಡಿ ಹಾರೈಸಿ ಎಂದು ನಾಯಕ ಸುನಾಮಿ ಕಿಟ್ಟಿ ಹೇಳಿದರು.
ಸಹ ನಿರ್ಮಾಪಕ ಚೆಲುವರಾಜು, ನಾಯಕಿ ಚರಿಷ್ಮಾ, ನಟರಾದ ಎಂ.ಕೆ.ಮಠ, ಮುನಿ, ನೀನಾಸಂ ಅಶ್ವಥ್, ಯತಿ ರಾಜ್, ನಟಿ ಸೌಜನ್ಯ, ಸಂಗೀತ ನಿರ್ದೇಶಕ ಹೇಮಂತ್ ಕುಮಾರ್, ಛಾಯಾಗ್ರಾಹಕ ಸೆಲ್ವಂ, ಸಾಹಿತಿ ರೇವಣ್ಣ ನಾಯಕ್, ಸಂಕಲನಕಾರ ಕೆ.ಗಿರೀಶ್ ಕುಮಾರ್ ಹಾಗೂ ತಮಿಳು ವಿತರಕರಾದ ಶಾನ್ ಹಾಗೂ ತೆಲುಗು ವಿತರಕ ಬಾಲಾಜಿ “ಕೋರ” ಚಿತ್ರದ ಕುರಿತು ಮಾತನಾಡಿದರು.