ಪೆಲೆಕೆಲೆ: ವಿಶ್ವ ಚಾಂಪಿಯನ್ ಭಾರತ ತಂಡವು ಶನಿವಾರ ಶ್ರೀಲಂಕಾ ತಂಡದ ಎದುರಿನ ಟಿ೨೦ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.
ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಹೊಸ ನಾಯಕ ಸೂರ್ಯಕುಮಾರ್ ಯಾದವ್ ಅವರ ಜೋಡಿಗೆ ಇದು ’ಚೊಚ್ಚಲ’ ಸರಣಿಯಾಗಿದೆ. ಮೂರು ಟಿ೨೦ ಪಂದ್ಯಗಳು ಈ ಸರಣಿಯಲ್ಲಿ ನಡೆಯಲಿದೆ.
ಎರಡು ಬಾರಿ ವಿಶ್ವ ಚಾಂಪಿಯನ್ ಗಂಭೀರ್ ಅವರು ಈಚೆಗೆ ಐಪಿಎಲ್ನಲ್ಲಿ ಮೆಂಟರ್ ಆಗಿದ್ದ ಕೋಲ್ಕತ್ತ ನೈಟ್ ರೈಡರ್ಸ್ ತಂಡವೂ ಚಾಂಪಿಯನ್ ಆಗಿತ್ತು. ಇದೀಗ ರಾಷ್ಟ್ರೀಯ ತಂಡದ ಕೋಚ್ ಆಗಿ ಹೊಸ ಇನಿಂಗ್ಸ್ ಆರಂಭಿಸುತ್ತಿದ್ದಾರೆ.ಟಿ೨೦ ಮಾದರಿಯ ಉತ್ತಮ ಬ್ಯಾಟರ್ ಆಗಿರುವ ಸೂರ್ಯ, ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್ ಹಾಗೂ ಶಿವಂ ದುಬೆ ಅವರು ತಂಡದಲ್ಲಿದ್ದಾರೆ.
ಆಲ್ರೌಂಡರ್ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಅವರ ಬಲವೂ ತಂಡಕ್ಕೆ ಇದೆ. ಸ್ಪಿನ್ನರ್ ರವಿ ಬಿಷ್ಣೋಯಿ, ವೇಗಿ ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ಅವರು ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ನಾಯಕತ್ವ ವಹಿಸಿದ್ದ ಶುಭಮನ್ ಗಿಲ್ ಇಲ್ಲಿ ಉಪನಾಯಕರಾಗಿದ್ದಾರೆ. ಈ ಹಿಂದೆ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ಮತ್ತು ಬ್ಯಾಟರ್ ವಿರಾಟ್ ಕೊಹ್ಲಿ ಅವರು ಅಂತರರಾಷ್ಟ್ರೀಯ ಟಿ೨೦ ಮಾದರಿಯಿಂದ ನಿರ್ಗಮಿಸಿದ್ದಾರೆ.
ಚರಿತ ಅಸಲಂಕಾ ನಾಯಕತ್ವದ ಶ್ರೀಲಂಕಾ ತಂಡದಲ್ಲಿ ಅನುಭವಿ ಆಟಗಾರರ ಕೊರತೆ ಇದೆ. ಹಂಗಾಮಿ ಕೋಚ್ ಸನತ್ ಜಯಸೂರ್ಯ ಅವರ ಮುಂದೆ ಈ ತಂಡಕ್ಕೆ ಮಾರ್ಗದರ್ಶನ ನೀಡುವ ಸವಾಲು ಇದೆ. ಟಿ೨೦ ವಿಶ್ವಕಪ್ ಟೂರ್ನಿಯಲ್ಲಿ ತಂಡವು ಕಳಪೆ ಪ್ರದರ್ಶನ ನೀಡಿತ್ತು. ಆದ್ದರಿಂದ ಆಗಿನ ತರಬೇತಿ ಸಲಹೆಗಾರ ಮಹೇಲ ಜಯವರ್ಧನೆ ರಾಜೀನಾಮೆ ನೀಡಿದ್ದರು. ತವರಿನಂಗಳದಲ್ಲಿ ಗೆಲುವಿನ ಆರಂಭ ಮಾಡುವ ಛಲದಲ್ಲಿ ಲಂಕಾ ತಂಡವಿದೆ.