ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದುರ್ಬಲಗೊಳಿಸುವ ಯತ್ನ ನಡೆದಿದೆ. ಇ.ಡಿ.ಯವರ ಬೆದರಿಕೆಗಳಿಗೆ ನಾವು ಬೆದರುವುದಿಲ್ಲ. ಇಡಿ ತನಿಖೆ ನಡೆಸುವುದಕ್ಕೆ ನಮಗೆ ತಕರಾರಿಲ್ಲ. ಆದರೆ ನಮ್ಮ ಸರ್ಕಾರವನ್ನ ಗುರಿಯಾಗಿಸುವ ಕೆಲಸ ಮಾಡುತ್ತಿದೆ. ಕಾನೂನಿಗೆ ವಿರುದ್ಧವಾಗಿ ವಾಮಮಾರ್ಗವಾಗಿ ಇಡಿ ಕೆಲಸ ಮಾಡುತ್ತಿದೆ ಎಂದುಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಇ.ಡಿ ತನಿಖಾ ಸಂಸ್ಥೆ ಹಾಗೂ ಕೇಂದ್ರ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಎಂ, ಡಿಸಿಎಂ ಹಾಗೂ ಮಾಜಿ ಸಚಿವ ಬಿ. ನಾಗೇಂದ್ರ ಹೆಸರೇಳುವಂತೆ ಕಿರುಕುಳ ಆರೋಪಕ್ಕೆ ಸಂಬಂಧಪಟ್ಟಂತೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ನಾಯಕರು ಇಂದು ಬೆಳಿಗ್ಗೆ ಪ್ರತಿಭಟನೆ ನಡೆಸಿದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಪ್ರತಿಭಟನೆ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಇಡಿ ವಿರುದ್ಧ ವಾಗ್ದಾಳಿ ನಡೆಸಿದರು.
ಇ.ಡಿ. ಅಧಿಕಾರಿಗಳು ಸ್ವಯಂಪ್ರೇರಣೆಯಿಂದ ತನಿಖೆ ಮಾಡುತ್ತಿದ್ದಾರೆ. ಒಂದೇ ಕೇಸ್ನಲ್ಲಿ ಮೂರು ತನಿಖಾ ಸಂಸ್ಥೆ ವಿಚಾರಣೆ ಮಾಡುತ್ತಿವೆ. ವಾಲ್ಮೀಕಿ ನಿಗಮದಲ್ಲಿ ಅಕ್ರಮ ನಡೆದಿಲ್ಲ ಎಂದು ನಾವು ಹೇಳ್ತಿಲ್ಲ. ವಿಪಕ್ಷದವರು 187 ಕೋಟಿ ದುರುಪಯೋಗ ಆಗಿದೆ ಅಂತಿದ್ದಾರೆ. ನಿಗಮದ ಹಣ ವರ್ಗಾಣೆ ಆಗಿರುವುದು 89.63 ಕೋಟಿ ರೂ. ಪ್ರಕರಣ ಸಂಬಂಧ ಈಗಾಗಲೇ 12 ಆರೋಪಿಗಳ ಬಂಧನವಾಗಿದೆ. ಅಧಿಕಾರಿಗಳು ಈಗಾಗಲೇ ರೂ.34 ಕೋಟಿ ರಿಕವರಿ ಮಾಡಿದ್ದಾರೆ. ಶೇಕಡಾ 90ರಷ್ಟು ಎಸ್ಐಟಿ ಅಧಿಕಾರಿಗಳ ತನಿಖೆ ಮುಗಿದಿದೆ. ಬ್ಯಾಂಕ್ ಅಧಿಕಾರಿಗಳ ದೂರಿನ ಮೇರೆಗೆ ಸಿಬಿಐ ತನಿಖೆ ಮಾಡ್ತಿದೆ. ಆದ್ರೆ ಇಡಿ ತಂಡ ಸ್ವಯಂ ಪ್ರೇರಣೆಯಿಂದ ತನಿಖೆ ಮಾಡುತ್ತಿದೆ.
ಪ್ರಕರಣ ಸಂಬಂಧ ಅಧಿಕಾರಿ ಕಲ್ಲೇಶ್ರನ್ನು ವಿಚಾರಣೆ ಮಾಡಿದ್ದಾರೆ. ವಿಚಾರಣೆ ವೇಳೆ ಸಿಎಂ, ಡಿಸಿಎಂ, ಸಚಿವರ ಹೆಸರೇಳುವಂತೆ ಒತ್ತಡ ಹಾಕಿದ್ದಾರೆ ಎಂದು ಆರೋಪಿಸಿದರು.ಅಧಿಕಾರಿ ಕಲ್ಲೇಶ್ಗೆ ಬೆದರಿಸಿ, ಹೆದರಿಸಿ ಹೆಸರೇಳುವಂತೆ ಇಡಿ ಒತ್ತಡ ಹಾಕಿದೆ. ಜೀವಬೆದರಿಕೆ ಹಾಕಿ ಒತ್ತಡ ಹಾಕಿದ್ದಾರೆಂದು ಕಲ್ಲೇಶ್ ಆರೋಪಿಸಿದ್ದಾರೆ. ಕಾಂಗ್ರೆಸ್ ಗುರಿಯಾಗಿಸಿಕೊಂಡು ಬೆದರಿಸುವ ಯತ್ನ ಆಗ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ದುರ್ಬಲಗೊಳಿಸುವ ಯತ್ನ ನಡೆದಿದೆ. ಇಡಿಯವರ ಇಂತಹ ಬೆದರಿಕೆಗಳಿಗೆ ನಾವು ಬೆದರುವುದಿಲ್ಲ.
ಇಡಿ ತನಿಖೆ ನಡೆಸುವುದಕ್ಕೆ ನಮಗೆ ತಕರಾರಿಲ್ಲ. ಆದರೆ ನಮ್ಮ ಸರ್ಕಾರವನ್ನ ಗುರಿಯಾಗಿಸುವ ಕೆಲಸ ಮಾಡುತ್ತಿದೆ. ಕಾನೂನಿಗೆ ವಿರುದ್ಧವಾಗಿ ವಾಮಮಾರ್ಗವಾಗಿ ಇಡಿ ಕೆಲಸ ಮಾಡುತ್ತಿದೆ. ಇಡಿ, ಕೇಂದ್ರದ ವಿರುದ್ಧ ಕಾನೂನು ಪ್ರಕಾರ ಹೋರಾಟ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಬಿಜೆಪಿಯವರ ಕಾಲದಲ್ಲಿ ಹಲವು ಹಗರಣ ನಡೆದಿವೆ. ಆದರೆ ಇದರ ಬಗ್ಗೆ ಅವರು ಮಾತನಾಡುತ್ತಿಲ್ಲ. ಈ ಹಿಂದೆ ತನಿಖಾ ಸಂಸ್ಥೆಗಳನ್ನು ಚೋರ್ ಎನ್ನುತ್ತಿದ್ರು. ರವಿ, ಗಣಪತಿ, ಪರೇಶ್ ಮೇಹ್ತಾ ಪ್ರಕರಣವನ್ನ ಸರ್ಕಾರ ಸಿಬಿಐಗೆ ನೀಡಿತ್ತು. ನಮ್ಮದು ತನಿಖೆಗೆ ತಕರಾರಿಲ್ಲ. ಆದರೆ ಕಾನೂನು ಬಾಹಿರ ಹಾಗೂ ಯಾರನ್ನೂ ಗುರಿ ಇಟ್ಟು ಮಾಡಬಾರದು. “ಸದನದಲ್ಲೂ ಈ ವಿಚಾರ ಪ್ರಸ್ತಾಪ ಮಾಡುತ್ತೇವೆ” ಎಂದರು.
ಇದೇ ವೇಳೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಸರ್ಕಾರದ ಎಲ್ಲಾ ಮಂತ್ರಿಗಳು ಶಾಸಕರು ದೊಡ್ಡ ಪ್ರತಿಭಟನೆ ಮಾಡುತ್ತಿದ್ದೇವೆ. ವಾಲ್ಮೀಕಿ ಹಗರಣ ಬೆಳಕಿಗೆ ಬಂದಿದೆ. ತಪ್ಪಾಗಿದೆ ಎಂದು ನಮಗೆ ಮನವರಿಕೆಯಾಗಿದೆ. ಅಧಿಕಾರಿಗಳು ದುರ್ಬಳಕೆ ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ. ವಾಲ್ಮೀಕಿ ನಿಗಮದ ಅಕ್ರಮ ಗೊತ್ತಾದ ತಕ್ಷಣ ಎಸ್ಐಟಿ ಅಧಿಕಾರಿಗಳ ಮೂಲಕ ನಾವು ಹಗರಣದ ತನಿಖೆ ಮಾಡಿಸುತ್ತಿದ್ದೇವೆ. ಈಗಾಗಲೇ 50ರಷ್ಟು ಹಣ ರಿಕವರಿ ಮಾಡಿದ್ದಾರೆ. ಎಸ್ಐಟಿ ತನಿಖೆ ಮಧ್ಯೆಯೇ ಇಡಿ ಪ್ರವೇಶಿಸಿ ವಿಚಾರಣೆ ಮಾಡ್ತಿದೆ. ಇಡಿ ವಿಚಾರಣೆ ವೇಳೆ ಅಧಿಕಾರಿ ಕಲ್ಲೇಶ್ಗೆ ಕಿರುಕುಳ ನೀಡಿದ್ದಾರೆ. ಸಚಿವರು, ಸಿಎಂ, ಡಿಸಿಎಂ ಹೆಸರೇಳಬೇಕೆಂದು ಕಿರುಕುಳ ನೀಡಿದ್ದಾರೆ. ಇಡಿ, ಕೇಂದ್ರ ಸರ್ಕಾರದ ವಿರುದ್ಧ ನಮ್ಮ ಹೋರಾಟ. ಕಿರುಕುಳ ನೀಡಿದ ಇಡಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ತನಿಖೆಯಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಲ್ಲ ಎಂದು ಡಿಸಿಎಂ ಆಕ್ರೋಶ ಹೊರ ಹಾಕಿದ್ದಾರೆ.



