ಕೋಲಾರ: ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ.21 ರಿಂದ ಆರಂಭಗೊಳ್ಳುತ್ತಿದ್ದು, ವಿದ್ಯಾರ್ಥಿಗಳಲ್ಲಿನ ಗೊಂದಲ ನಿವಾರಣೆಗೆ ಮುಂದಾಗಿರುವ ಶಾಲಾ ಶಿಕ್ಷಣ ಇಲಾಖೆ ನಡೆಸಿದ ಫೋನ್ ಇನ್ ಕಾರ್ಯಕ್ರಮದಲ್ಲಿ ಮಕ್ಕಳು, ಪೋಷಕರಿಮದ 500ಕ್ಕೂ ಹೆಚ್ಚು ಫೋನ್ ಕರೆಗಳು ಬಂದಿದ್ದು, 896 ಪ್ರಶ್ನೆಗಳಿಗೆ ಸಂಪನ್ಮೂಲ ವ್ಯಕ್ತಿಗಳು ಉತ್ತರ ನೀಡಿದ್ದಾರೆ ಮತ್ತು ಪರೀಕ್ಷೆ ವಿದ್ಯಾರ್ಥಿಸ್ನೇಹಿಯಾಗಿ ಇರಲಿದೆ ಎಂದು ಇಲಾಖೆಯ ಉಪನಿರ್ದೇಶಕ ಕೃಷ್ಣಮೂರ್ತಿ ಸ್ಪಷ್ಟಪಡಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಲ್ಲಿನ ಗೊಂದಲ ನಿವಾರಣೆಗಾಗಿ ನಡೆಸಲಾದ ಫೋನ್ ಇನ್ ಕಾರ್ಯಕ್ರಮದಲ್ಲಿ ಕೆಲವು ಮಕ್ಕಳ ಪ್ರಶ್ನೆಗಳಿಗೆ ಅವರೇ ಸ್ವತಃ ಉತ್ತರ ನೀಡಿ ಮಾತನಾಡಿ, ಮುಖ್ಯಶಿಕ್ಷಕರ ಸಭೆಗಳನ್ನು ನಡೆಸಿ ಪರೀಕ್ಷಾ ಸಿದ್ದತೆಗಳಿಗೆ ಮಾರ್ಗದರ್ಶನ ನೀಡಲಾಗಿದೆ ಆದರೂ ಕೆಲವು ಮಕ್ಕಳಲ್ಲಿ ಇರಬಹುದಾದ ಗೊಂದಲ ನಿವಾರಣೆಗೆ ಫೋನ್ ಇನ್ ಕಾರ್ಯಕ್ರಮದ ಮೂಲಕ ಪ್ರಯತ್ನಿಸಲಾಗಿದೆ ಎಂದರು.
ಪ್ರಶ್ನೆ ಕೇಳಿದ ವಿದ್ಯಾರ್ಥಿಗಳು ಪರೀಕ್ಷಾ ಸಿದ್ದತೆ, ಪರೀಕ್ಷಾ ವಿಧಾನ, ಪ್ರಶ್ನೆಪತ್ರಿಕೆ ಮಾದರಿ, ಸಿಸಿ ಕ್ಯಾಮರಾ ಅಳವಡಿಕೆ, ವೆಬ್ ಕಾಸ್ಟಿಂಗ್ ವ್ಯವಸ್ಥೆ, ಕೇಂದ್ರದಲ್ಲಿ ನಕಲು ತಡೆಯಲು ಇರುವ ಅಧಿಕಾರಿ,ಸಿಬ್ಬಂದಿಯಿಂದ ಒತ್ತಡ ಎದುರಾಗುವುದೇ ಸೇರಿದಂತೆ ಹಲವಾರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು.
ಡಿಡಿಪಿಐ ಅವರು ಕೆಲವುಮಕ್ಕಳಿಗೆ ಉತ್ತರ ನೀಡಿ, ಕೇಂದ್ರದಲ್ಲಿ ಸಿಸಿ ಕ್ಯಾಮರಾ,ವೆಬ್ ಕಾಸ್ಟಿಂಗ್ ಇದೆ, ಜತೆಗೆ ನಕಲು ತಡೆಗೆ ಕ್ರಮವಹಿಸಿರುವುದು ನಿಜವಾದರೂ ಪರೀಕ್ಷೆ ಬರೆಯುವ ಮಕ್ಕಳಿಗೆ ಯಾವುದೇ ಮುಜುಗರವಾಗದಂತೆ ಕ್ರಮವಹಿಸಲಾಗಿದೆ, ಮಕ್ಕಳನ್ನು ಅನಗತ್ಯವಾಗಿ ತಪಾಸಣೆಗೆ ಒಳಪಡಿಸಿ ಆತಂಕ ಸೃಷ್ಟಿಸುವ ಕೆಲಸ ಮಾಡುವುದಿಲ್ಲ, ಪರೀಕ್ಷೆಗಳನ್ನು ವಿದ್ಯಾರ್ಥಿ ಸ್ನೇಹಿಯಾಗಿ ನಡೆಸುವುದಾಗಿ ತಿಳಿಸಿದರು.
ಮಕ್ಕಳು ಉತ್ತಮ ಅಂಕ ಗಳಿಸಲು ಸಹಕಾರಿಯಾಗುವಂತೆ ಈಗಾಗಲೇ ಇಲಾಖೆ ಅನೇಕ ಸಂಪನ್ಮೂಲ ಪುಸ್ತಕಗಳನ್ನು ಒದಗಿಸಿದೆ, ಅದನ್ನು ಚೆನ್ನಾಗಿ ಅಭ್ಯಾಸ ಮಾಡುವಂತೆ ತಿಳಿಸಲಾಗಿದೆ ಎಂದ ಅವರು, ಕೆಲವು ಮಕ್ಕಳ ಶೇ.100 ಸಾಧನೆಗೆ ಏನು ಮಾಡಬೇಕು ಎಂದು ಕೇಳಿದರು ಎಂದರು.
ಶೇ.100 ಸಾಧನೆಗೆ ಶಿಕ್ಷಕರು ಹೇಳುವ ಪಾಠದಜತೆಗೆ ಪಠ್ಯಪುಸ್ತಕ ಓದುವ ಅಭ್ಯಾಸ ಮಾಡಿ ಅದರಿಂದ ಅನ್ವಯಿಕ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಬಹುದಾಗಿದ್ದು, ಆಗ ಶೇ.100 ಸಾಧನೆ ಮಾಡಬಹುದು ಎಂದು ತಿಳಿಸಿದರು.ನಿರಂತರ ಪುನರ್ಮನನ ಮಾಡಿದರೆ ಎಲ್ಲಾ ಉತ್ತರಗಳು ನೆನಪಿನಲ್ಲಿರಲು ಸಾಧ್ಯ, ಎಂದ ಅವರು, ಪ್ರಶ್ನೆ ಪತ್ರಿಕೆ ಸುಲಭವಾಗಿರಲಿದೆ, ಶೇ.20 ರಷ್ಟು ಮಾತ್ರ ಕಠಿಣ ಪ್ರಶ್ನೆಗಳು ಇರುತ್ತವೆ, ಪುಸ್ತಕದಲ್ಲಿನ ಮಾಹಿತಿ ಹೊರತು ಪಡಿಸಿ ಬೇರಾವುದೇ ಪ್ರಶ್ನೆ ಕೇಳುವುದಿಲ್ಲ ಎಂದು ಸ್ವಷ್ಟಪಡಿಸಿದರು.
ಪರೀಕ್ಷಾ ನೋಡಲ್ ಅಧಿಕಾರಿ ಸಗೀರಾ ಅಂಜುಂ, ಫೋನ್ ಇನ್ ಕಾರ್ಯಕ್ರಮದಲ್ಲಿ ಮಕ್ಕಳು ಕೇಳಿದ ಪ್ರಶ್ನೆಗಳ ಕುರಿತು ಮಾಹಿತಿ ನೀಡಿ, ಪರೀಕ್ಷಾ ವಿಧಾನಕ್ಕೆ ಸಂಬಂಧಿಸಿದಂತೆ 54 ಹೆಚ್ಚು ಪ್ರಶ್ನೆಗಳು ಮಕ್ಕಳಿಂದ ಬಂತು ಆದರೆ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ 180 ಪ್ರಶ್ನೆಗಳನ್ನು ಮಕ್ಕಳು ಕೇಳಿದ್ದು ವಿಶೇಷವಾಗಿದೆ ಎಂದರು.ಉಳಿದಂತೆ ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ 110 ಪ್ರಶ್ನೆ, ಇಂಗ್ಲೀಷ್ ವಿಷಯಕ್ಕೆ 178 ಪ್ರಶ್ನೆ, ಹಿಂದಿಗೆ 79 ಪ್ರಶ್ನೆ, ಗಣಿತ ವಿಷಯಕ್ಕೆ ಸಂಬಂಧಿಸಿದಮತೆ 130, ವಿಜ್ಞಾನ ವಿಷಯಕ್ಕೆ 180 ಪ್ರಶ್ನೆ ಹಾಗೂ ಸಮಾಜವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ 140 ಹಾಗೂ ಪ್ರಥಮ ಭಾಷೆ ಉರ್ದು ವಿಷಯಕ್ಕೆ 25 ಪ್ರಶ್ನೆಗಳನ್ನು ಮಕ್ಕಳು ಕೇಳಿದರು ಎಂದು ವಿವರಿಸಿದರು.
ಮಕ್ಕಳು ಅತಿ ಹೆಚ್ಚು ಅಂಕ ಗಳಿಸಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಸಗೀರಾ ಅಂಜುಂ, ಪಠ್ಯಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಿ, ಪ್ರತಿಅಧ್ಯಾಯದ ಅಭ್ಯಾಸದಲ್ಲಿನ ಪ್ರಶ್ನೆಗಳಿಗೆ ಉತ್ತರಿಸಿ, ಇಲಾಖೆ ನೀಡಿರುವ ಪಾಸಿಂಗ್ ಪ್ಯಾಕೇಜ್, ಜಿಲ್ಲಾಡಳಿತ ನೀಡಿರುವ ಪರೀಕ್ಷಾ ದೀವಿಗೆಯನ್ನು ಓದಿ, ಐದು ಸೆಟ್ ಮಾದರಿ ಪ್ರಶ್ನೆಪತ್ರಿಕೆ ನೀಡಿದ್ದು ಪ್ರಶ್ನೆಗಳಿಗೆ ನೀವೇ ಉತ್ತರ ಬರೆದು ಅಭ್ಯಾಸ ಮಾಡಿ ಎಂದು ಸಲಹೆ ನೀಡಿದರು.
ಕನ್ನಡ,ಇಂಗ್ಲೀಷ್, ಹಿಂದಿಯಲ್ಲಿ ಮಕ್ಕಳು ವ್ಯಾಕರಣದ ಕುರಿತು ಹೆಚ್ಚು ಪ್ರಶ್ನೆ ಕೇಳಿದರೆ, ಗಣಿತದಲ್ಲಿ 4 ಅಂಕಗಳ ಪ್ರಶ್ನೆ,ಗ್ರಾಪ್ ಲೆಕ್ಕಗಳ ಕುರಿತು ಪ್ರಶ್ನೆ ಕೇಳಿದರು.ಫೋನ್ ಇನ್ ಕಾರ್ಯಕ್ರಮದಲ್ಲಿ ಶಿಕ್ಷಣಾಧಿ
ಕಾರಿ ವೀಣಾ ವಿಷಯ ಪರಿವೀಕ್ಷಕರಾದ ಶಂಕರೇಗೌಡ, ಸಮೀವುಲ್ಲಾ, ಸಂಪನ್ಮೂಲ ಶಿಕ್ಷಕರಾದ ಬಿ.ಕೆ.ನಾಗರಾಜ್, ವೇಣುಗೋಪಾಲ್, ರಾಜಣ್ಣ, ಬಿ.ಎ.ಕವಿತಾ, ರಮಾ, ಕೃಷ್ಣಮೂರ್ತಿ, ಪ್ರಭಾ, ಎಸ್.ಭಾಗ್ಯ, ಬಸವರಾಜ್, ಶ್ರೀನಿವಾಸಗೌಡ, ನರಸಿಂಹಪ್ರಸಾದ್, ಅಮರೇಶಬಾಬು,ಗಂಗಾಧರಮೂರ್ತಿ, ರಾಜರೆಡ್ಡಿ, ವಜಿಹ್ ಸುಲ್ತಾನಾ, ಫರೀದಾ ಬೇಗಂ ಮತ್ತಿತರರು ಹಾಜರಿದ್ದು, ಮಕ್ಕಳ ದೂರವಾಣಿ ಕರೆ ಸ್ವೀಕರಿಸಿ ಅವರ ಪ್ರಶ್ನೆಗಳಿಗೆ ಉತ್ತರ ನೀಡಿ ಗೊಂದಲ ಪರಿಹರಿಸಿದರು.