ಕ್ರಿಕೆಟ್ ನಲ್ಲಿ ಒಂದು ರನ್ ಅನ್ನು ಸಹ ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ಹೇಳುವುದು ಇದಕ್ಕೇ. ಯಾವುದೋ ಸಂದರ್ಭದಲ್ಲಿ ಸಿಕ್ಕ ವ್ಯತಿರಿಕ್ತ ರನ್, ಚುರುಕಿನ ಫೀಲ್ಡಿಂಗ್ ನಿಂದ ಉಳಿಸಿದ ರನ್ ಗಳೆಲ್ಲವೂ ತಂಡದ ಜಯಾಪಜಯಗಳನ್ನು ನಿರ್ಧರಿಸಬಲ್ಲುವು. ರಕ್ಷಣಾತ್ಮಕ ಬ್ಯಾಟಿಂಗ್ನೊಂದಿಗೆ ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದ ಕೇರಳ ತಂಡ, ಮೊದಲ ಇನಿಂಗ್ಸ್ನಲ್ಲಿ 1 ರನ್ ಮುನ್ನಡೆಯಿಂದ ಬುಧವಾರ ಸೆಮಿಫೈನಲ್ ಪ್ರವೇಶಿಸಿದೆ.
ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೇರಳ ತಂಡ ಗೆಲ್ಲಲು 399 ರನ್ ಗಳ ಬೃಹತ್ ಗುರಿ ಪಡೆದಿತ್ತು. ಜಮ್ಮು ಕಾಶ್ಮೀರ ತಂಡ ಸೆಮಿಫೈನಲ್ ಪ್ರವೇಶಿಸಲು ಈ ಪಂದ್ಯವನ್ನು ಗೆಲ್ಲಲೇಬೇಕಾಗಿತ್ತು. ಅದೇ ಕೇರಳ ತಂಡಕ್ಕೆ ಡ್ರಾಗೊಳಿಸಿದರೂ ಪ್ರಥಮ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಸೆಮಿಫೈನಲ್ ಗೆ ಅರ್ಹತೆ ಪಡೆಯುವ ಅವಕಾಶ ಇತ್ತು. ಹೀಗಾಗಿ ಕೇರಳ ಪಂದ್ಯವನ್ನು ಡ್ರಾಗೊಳಿಸುವುದರತ್ತ ಗಮನ ಹರಿಸಿ ಅದರಲ್ಲಿ ಯಶಸ್ವಿಯಾಯಿತು.
4ನೇ ದಿನಾಂತ್ಯಕ್ಕೆ ದ್ವಿತೀಯ ಇನ್ನಿಂಗ್ಸ್ ನಲ್ಲಿ 2 ವಿಕೆಟ್ಗೆ 100 ರನ್ ಗಳಿಸಿದ್ದ ಕೇರಳ, ಐದನೇ ಹಾಗೂ ಅಂತಿಮ ದಿನವಾದ ಬುಧವಾರ, ದಿನದಾಟದ ಮುಕ್ತಾಯಕ್ಕೆ 126 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 295 ರನ್ ಗಳಿಸಿತು. ಹೀಗಾಗಿ ಪಂದ್ಯ ನೀರಸ ಡ್ರಾನಲ್ಲಿ ಕೊನೆಗೊಂಡಿತು. ಕೇರಳವನ್ನು ಆಲೌಟ್ ಮಾಡುವ ಜಮ್ಮು ಕಾಶ್ಮೀರದ ಯಾವ ಪ್ರಯತ್ನವೂ ಸಫಲವಾಗಲಿಲ್ಲ.
ಮೊದಲ ಇನಿಂಗ್ಸ್ನಲ್ಲಿ 1 ರನ್ ಮುನ್ನಡೆ ಹೊಂದಿದ್ದ ಆಧಾರದ ಮೇಲೆ ಉಪಾಂತ್ಯಕ್ಕೆ ಅರ್ಹತೆ ಪಡೆದ ಕೇರಳ, ಫೈನಲ್ ಪ್ರವೇಶಕ್ಕಾಗಿ, ಗುಜರಾತ್ ತಂಡವನ್ನು ಎದುರಿಸಲಿದೆ.