ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಸಂಜು ಸ್ಯಾಮ್ಸನ್ ಬಲಗೈಯ ತೋರು ಬೆರಳು ಮುರಿತಕ್ಕೊಳಗಾಗಿರುವುದರಿಂದ ವೈದ್ಯರ ಸಲಹೆ ಮೇರೆಗೆ ಸುಮಾರು ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಭಾನುವಾರ ಜೊಫ್ರಾ ಆರ್ಚರ್ ಬಾರಿಸಿದ ಚೆಂಡು ಸ್ಯಾಮ್ಸನ್ ಕೈಗೆ ತಗುಲಿ ಗಾಯವಾಗಿತ್ತು.
ಇದರಿಂದಾಗಿ ಮುಂಬರಲಿರುವ ಕೇರಳದ ರಣಜಿ ಕ್ವಾರ್ಟರ್ಫೈನಲ್ಸ್ ಪಂದ್ಯಗಳಿಗೂ ಸ್ಯಾಮ್ಸನ್ ಅಲಭ್ಯರಾಗಿದ್ದಾರೆ. ಹೀಗಾಗಿ ಫೆಬ್ರವರಿ 8 ರಿಂದ ಶುರುವಾಗಲಿರುವ ರಣಜಿ ಕ್ವಾರ್ಟರ್ಫೈನಲ್ಸ್ನಲ್ಲಿ ಕೇರಳ ತಂಡ ಪುಣೆಯನ್ನು ಎದುರಿಸಲಿದೆ.ಸಂಜು ಸ್ಯಾಮ್ಸನ್ ತಮ್ಮ ತವರಾದ ತಿರುವನಂತಪುರಕ್ಕೆ ಮರಳಿದ್ದಾರೆ. ಅದಾದ ಬಳಿಕ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಓಅಂ) ಪುನಶ್ಚೇತನ ಶಿಬಿರಕ್ಕೆ ತೆರಳಲಿರುವ ಅವರು ವೈದ್ಯರ ತಂಡ ನಿರಾಕ್ಷೇಪಣಾ ಪತ್ರ ನೀಡಿದ ಬಳಿಕವೇ ಅವರನ್ನು ರಾಷ್ಟ್ರೀಯ ತಂಡಕ್ಕೆ ಪರಿಗಣಿಸಲಾಗುವುದು. ಸ್ಯಾಮ್ಸನ್ ಅಲಭ್ಯತೆ ಕುರಿತು ಮಾಹಿತಿ ನೀಡಿರುವ ಬಿಸಿಸಿಐ ಅಧಿಕಾರಿಗಳು ಸ್ಯಾಮ್ಸನ್ ಇನ್ನು ಐಪಿಎಲ್ ರಾಜಸ್ಥಾನ ರಾಯಲ್ಸ್ಗೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಜಯ್ ಹಜಾರೆ ಟ್ರೋಫಿಯಿಂದ ಅವರು ದೂರ ಉಳಿದಿದ್ದು ದೊಡ್ಡ ಮಟ್ಟಿನ ವಿವಾದವಾಗಿತ್ತು. ಇದೀಗ ರಣಜಿ ಕ್ವಾರ್ಟರ್ ಫೈನಲ್ ನಲ್ಲಿ ಆಡಲು ಸಿದ್ಧರಾಗಿದ್ದ ಅವರಿಗೆ ಗಾಯದ ಸಮಸ್ಯೆಯಿಂದಾಗಿ ದೂರ ಉಳಿಯಬೇಕಾಗಿ ಬಂದಿದೆ.ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಮುಗಿದು ಇನ್ನೇನು ಏಕದಿನ ಸರಣಿ ಶುರುವಾಗಲು 3 ದಿನಗಳಷ್ಟೇ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಇದೀಗ ಸೂರ್ಯ ಕುಮಾರ್ ಯಾದವ್, ಸಂಜು ಸ್ಯಾಮ್ಸನ್ ಸೇರಿ ಒಟ್ಟು 10 ಆಟಗಾರರು ತಂಡವನ್ನು ತೊರೆದಿದ್ದಾರೆ. ನಾಯಕ ರೋಹಿತ್ ಶರ್ಮಾ ಸೇರಿಕೊಂಡಂತೆ 7 ಮಂದಿ ತಂಡವನ್ನು ಕೂಡಿ ಕೊಂಡಿದ್ದಾರೆ.