ದಾವಣಗೆರೆ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಗೊಳಿಸಿದೆ. ಅಲ್ಲದೇ ಅಧಿಕ ಬಡ್ಡಿ ಪಡೆಯುವುದನ್ನ ತಡೆಯುವ ವಿಧೇಯಕಕ್ಕೆ ತಿದ್ದುಪಡಿ ತರಲು ತಯಾರಿ ನಡೆಸಿದೆ. ಹೀಗಿದ್ದರೂ ಮೈಕ್ರೋ ಫೈನಾನ್ಸ್ ಸಿಬ್ಬಂದಿಯಿಂದ ಕಿರುಕುಳ ಮುಂದುವರಿದಿದೆ.ಕಿರುಕುಳದಿಂದ ಬೇಸತ್ತ ಏಳೆಂಟು ಕುಟುಂಬಗಳು ಊರು ಬಿಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಶಿವಗಂಗನಾಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹಲವು ಕುಟುಂಬಗಳಿಗೆ ಸಾಲದ ಕಂತು ಪಾವತಿಸುವಂತೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಪದೇ ಪದೇ ಕಿರುಕುಳ ನೀಡುತ್ತಾ ಬಂದಿದ್ದಾರೆ. ನಿಮಗೆ ಸಿಬಿಲ್ ಸ್ಕೋರ್ ಬರದಿದ್ದರೆ ಎಲ್ಲೂ ನಯಾ ಪೈಸೆ ಸಾಲ ಹುಟ್ಟಲ್ಲ ಎಂದು ಹೆದರಿಸಿದ್ದಾರೆ. ಕೆಲವರನ್ನ ಪೊಲೀಸ್ ಠಾಣೆಗೆ ಕರೆಸಿ ಬೆದರಿಸುವಂತೆ ಮಾಡಿದ್ದಾರೆ. ಯಾರ ಕೈ-ಕಾಲು ಹಿಡಿದಾದರೂ ಸಾಲ ತಂದುಕೊಡು ಅಂತ ಮಾನಸಿಕ ಹಿಂಸೆ ನೀಡಿದ್ದಾರೆ. ಇದರಿಂದ ಬೇಸತ್ತ ಶಿವಗಂಗನಾಳ ಗ್ರಾಮದ ಕುಟುಂಬಗಳು ಮನೆಗೆ ಬೀಗ ಹಾಕಿಕೊಂಡು ಊರು ಬಿಟ್ಟಿವೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೈಕ್ರೋ ಫೈನಾನ್ಸ್ನಿಂದ ಸಾಲ ಪಡೆದ ಕುಟುಂಬಳದ್ದೂ ಇದೇ ಪರಿಸ್ಥಿತಿ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.