ತುಮಕೂರು: ಮದ್ಯ ಮತ್ತು ಮಾದಕ ವಸ್ತುಗಳು ಸಮಾಜ ಹಾಗೂ ಯುವ ಜನಾಂಗದ ಮೇಲೆ ಬಹಳ ಕೆಟ್ಟ ಪರಿಣಾಮವನ್ನು ಬೀರುತ್ತಿರುವ ಈ ಕಾಲದಲ್ಲಿ, ತುಮಕೂರು ಜಿಲ್ಲೆಯ ಶ್ರೀ ಸಿದ್ಧಗಂಗಾಮಠದ ಆವರಣದಲ್ಲಿ ಹಮ್ಮಿಕೊಳ್ಳಲಾದ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು ವತಿಯಿಂದ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಜಾಗೃತಿ ಮೂಡಿಸಲು ನಿರ್ಮಿಸಲಾದ ಜನ ಜಾಗೃತಿ ವಸ್ತುಪ್ರದರ್ಶನ ಮಳಿಗೆಯು, ವಸ್ತು ಪ್ರದರ್ಶನ ವೀಕ್ಷಣೆಗೆ ಬರುವ ಪ್ರತಿಯೊಬ್ಬರಿಗೂ ಜಾಗೃತಿಯ ಕೇಂದ್ರವಾಗಿದೆ.
“ಮಾನವೀಯ ಮೌಲ್ಯಗಳನ್ನು ನಾವು ಉಳಿಸಿ, ಬೆಳೆಸಬೇಕು. ನಮ್ಮ ಮಕ್ಕಳಲ್ಲಿ ಇವನ್ನು ಬೆಳೆಸೋಣ. ಮದ್ಯಮತ್ತು ಮಾದಕ ವಸ್ತು ಸೇವನೆಯಿಂದ ದೂರವಿರೋಣ, ಇವುಗಳ ವಿರುದ್ದ
ಜಾಗೃತಿ ಮೂಡಿಸೋಣ” ಎಂಬ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯಅವರ ಸಂದೇಶ ಸೇರಿದಂತೆ ಪೂಜ್ಯ ಶ್ರೀಗಳಾದ ಶಿವಕುಮಾರಸ್ವಾಮೀಜಿ ಮತ್ತುಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧಿ, ಕವಿಗಳಾದ ಕಾಳಿದಾಸ, ಸರ್ವಜ್ಞ, ಸಾಂಸ್ಕೃತಿಕ ನಾಯಕ ಬಸವಣ್ಣ ಹಾಗೂ ಯೋಗ ಗುರು ರಾಮದೇವ್ ಅವರ ಮದ್ಯ ಮತ್ತು ಮಾದಕ ವಸ್ತುಗಳ ಕುರಿತು ಅವರುಗಳ ಚಿತ್ರದೊಂದಿಗಿರುವ ಜನ ಜಾಗೃತಿ ಸಂದೇಶಗಳು ಮಳಿಗೆಯನ್ನು ಮತ್ತಷ್ಟು ಆಕರ್ಷಣೀಯವಾಗಿ ಮಾಡಿದೆ.
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ, ಈ ಜನ ಜಾಗೃತಿ ಮಳಿಗೆಯನ್ನು ತುಮಕೂರು ನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಅವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ಮಹೇಶ್, ಶ್ರೀ ಸಿದ್ಧಗಂಗಾಮಠದ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.