ನೆಲಮಂಗಲ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು ತಾಲ್ಲೂಕಿನ ಸರ್ಕಾರಿ ನೌಕರರು ನಾಮಪತ್ರ ಸಲ್ಲಿಕೆಗೆ ಮುಂದಾಗಿದ್ದಾರೆ.ಒಟ್ಟು 29 ಮಂದಿ ಪದಾಧಿಕಾರಿಗಳಿರುವ ತಾಲ್ಲೂಕು ಘಟಕಕ್ಕೆ ಸಂಘದ ಸದಸ್ಯತ್ವವನ್ನು ಪಡೆದಿರುವ ಸದಸ್ಯರು ಚುನಾವಣೆ ಪ್ರಕ್ರಿಯೆ ಮೂಲಕ ನಾಮಪತ್ರಸಲ್ಲಿಸಲು ಅ.18ಕೊನೆಯದಿನವಾಗಿದ್ದು ಅ.19 ರಂದು ನಾಮಪತ್ರ ಪರಿಶೀಲನೆ ಮಾಡಲಾಗುತ್ತದೆ.
ಅ.21 ನಾಮಪತ್ರ ಹಿಂಪಡೆಯಲು ಕೊನೆಯದಿನವಾಗಿದೆ. ಅ.28 ರಂದು ಬೆಳ್ಳಗ್ಗೆ 9 ಗಂಟೆಯಿಂದ ಸಂಜೆ 4ಗಂಟೆವರೆಗೆ ನಗರದ ಭಿನ್ನಮಂಗಲದಲ್ಲಿರುವ ಸಂಘದ ಕಚೇರಿಯಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಅದೇದಿನ ಮತದಾನದ ಬಳಿಕ ಮತ ಎಣಿಕೆ ಬಳಿಕ ಫಲಿತಾಂಶ ಪ್ರಕಟಣೆಯಾಗಲಿದೆ ಎಂದು ಚುನಾವಣಾಧಿಕಾರಿ ದೇವಕಿ ಹಾಗೂ ಸಹಾಯಕ ಚುನಾವಣಾಧಿಕಾರಿ ಎನ್.ಎಲ್.ನಾರಾಯಣ್ ತಿಳಿಸಿದರು.
ತಾಲ್ಲೂಕಿನಲ್ಲಿ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿರುವ ನೌಕರರು ಸೇರಿ ಒಟ್ಟಾರೆ ಸಾವಿರಾರು ಮಂದಿ ನೌಕರರಿದ್ದಾರೆ. ಮತದಾರರ ಸಂಖ್ಯೆ ಅನುಗುಣವಾಗಿ 29 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. ತಾಲ್ಲೂಕು ಘಟಕದಲ್ಲಿ ಒಟ್ಟು 1445 ಮತದಾರರಿದ್ದು ಸರ್ಕಾರಿ ಪ್ರಾಥಮಿಕ ಶಾಲೆಯ 701 ಹಾಗೂ ಪ್ರೌಡ ಶಾಲೆಗಳ 132 ಶಿಕ್ಷಕರು ಮತದಾನದ ಹಕ್ಕುಪಡೆದುಕೊಂಡು ಶಿಕ್ಷಣ ಇಲಾಖೆಯಲ್ಲಿ ಸಿಂಹ ಪಾಲನ್ನು ಹೊಂದಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯ 169ಮತದಾರರನ್ನು ಹೊಂದಿದ್ದು ಎರಡನೆ ಸ್ಥಾನವನ್ನು ಪಡೆದುಕೊಂಡಿದೆ ಎಂದರು.
ಸರ್ವೇ ಇಲಾಖೆಯ ಭೂಮಾಪಕರಾದ ರಾಜಮ್ಮ ನಾಮಪತ್ರ ಸಲ್ಲಿಸಿ ಮಾತನಾಡಿ, ಸರ್ಕಾರಿ ನೌಕರರು ತಮ್ಮ ಸೇವಾವಧಿಯಲ್ಲಿ ಸಾಕಷ್ಟು ಸವಾಲುಗಳು ಮತ್ತು ಸಮಸ್ಯೆಗಳನ್ನು ಎದುರಿಸುತಿದ್ದಾರೆ ಅವರ ಸಮಸ್ಯೆಗಳನ್ನು ನೀಗಿಸುವ ಸಲುವಾಗಿ ಹಾಗೂ ಸರ್ಕಾರದಿಂದ ನೌಕರರಿಗೆ ದೊರಬೇಕಾದ ಸವಲತ್ತುಗಳನ್ನು ಕೊಡಿಸಿಕೊಡಲು ಮತ್ತು ಹಿರಿಯ ಅಧಿಕಾರಿಗಳು ಮತ್ತು ನೌಕರರ ನಡುವೆ ಸೇತುವೆಯಾಗುವುದರೊಂದಿಗೆ ಅವರುಗಳ ಧ್ವನಿಯಾಗಿ ನೌಕರರ ಹಿತ ಮತ್ತು ಶ್ರೇಯಸ್ಸನ್ನು ಕಾಪಾಡುವ ಸದುದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ. ನೌಕರರು ನನ್ನ ಬೆಂಬಲಿಸುತ್ತಾರೆಂಬ ಆಶಾಭಾವನೆ ವ್ಯಕ್ತಪಡಿಸಿದರು.
11 ನಾಮಪತ್ರ: ಇದೂವರೆಗೂ ತಾಲ್ಲೂಕು ಪದಾಧಿಕಾರಿಗಳ ಸ್ಥಾನಕ್ಕೆ ಕೆ.ಎನ್.ನಾಗೇಶ್, ಹೆಚ್.ರಾಮಾಂಜುನಪ್ಪ, ಎಸ್.ಎಂ.ರೇಣುಕಾಸ್ವಾಮಿ. ಎಂ.ಉಮಾಶಂಕರ್, ಎಲ್.ಗೋಪಿನಾಥ್, ಎಂಎಸ್. ರುದ್ರ ಮೂರ್ತಿ, ಆರ್.ಪುಷ್ಪಾವತಿ, ಎಂ.ಗುರುಮೂರ್ತಿ, ಎನ್.ಎಂ.ಶಂಕರ್, ಭೂಮಪಕರಾದ ರಾಜಮ್ಮ, ಎಂ.ಆರ್.ಮಲ್ಲಿಕಾರ್ಜುನ ಅವರುಗಳು ನಾಮಪತ್ರ ಸಲ್ಲಿಸಿದ್ದಾರೆ.