ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣ ವಿಧಾನಪರಿಷತ್ನಲ್ಲಿ ಪ್ರತಿಧ್ವನಿಸಿ, ನಿಯಮ 68 ರ ಅಡಿ ಚರ್ಚೆ ಆರಂಭಿಸಿದ ಬಿಜೆಪಿಯ ಸಿ.ಟಿ.ರವಿ, ಅಧಿಕಾರಿ ಚಂದ್ರಶೇಖರ್ ಸಾವು ಇದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ಆರೋಪಿಸಿದ್ದಾರೆ.
ಇವತ್ತು ಟ್ರೆಷರಿ ಬೆಂಚ್ ನಲ್ಲಿ ಇರುವವರು ಹಿಂದೆ ವಿರೋಧ ಪಕ್ಷದ ಸ್ಥಾನದಲ್ಲಿದ್ದರು. ಆಗ ಒಂದು ಆತ್ಮ ಹತ್ಯೆಯಾದಾಗ ಅದು ಸರ್ಕಾರವೇ ಮಾಡಿದ ಕೊಲೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ದೂರಿದ್ದರು.ಹಾಗಾದರೆ ವಾಲ್ಮೀಕಿ ಹಗರಣದಲ್ಲಿನ ಸಾವೂ ಕೂಡ ಸರ್ಕಾರಿ ಪ್ರಾಯೋಜಿತ ಕೊಲೆ ಎಂದೇ ಭಾವಿಸಬೇಕಾಗುತ್ತದೆ ಎಂದಿದ್ದಾರೆ.
2023-24 ನೇ ಸಾಲಿನಲ್ಲಿ ಅನುದಾನ ನೀಡಿ ಕ್ರಿಯಾ ಯೋಜನೆ ಕೂಡ ತಯಾರಾಗಿದೆ. 18,500 ಫಲಾನುಭವಿಗಳು ಅನುಮೋದನೆ ಪಡೆದುಕೊಂಡರು. ಆದರೆ ವರ್ಷದ ಕೊನೆ ತನಕವೂ ಕೂಡ ಫಲಾನುಭವಿಗಳಿಗೆ ಹಣ ಹೋಗಿಲ್ಲ. ಇದನ್ನು ನೋಡಿಯೇ ಗೊತ್ತಾಗುತ್ತದೆ ಇದು ಮೊದಲೇ ಪ್ಲ್ಯಾನ್ ಮಾಡಿ ಲೂಟಿ ಹೊಡೆದ ಹಣ. ಪ್ರೀ ಪ್ಲ್ಯಾನ್ ಮಾಡಿಕೊಂಡೇ ಇದೆಲ್ಲ ಹಣ ಲಪಟಾಯಿಸಿದ್ದಾರೆ. ಇದೆಲ್ಲ ಮಾಸ್ಟರ್ ಪ್ಲ್ಯಾನ್ ಮಾಡಿದ್ದು ಶಾಸಕ ನಾಗೇಂದ್ರ ಎಂದು ದೂರಿದರು.