ಚಿಕ್ಕಮಗಳೂರು: ಮನೆಯಲ್ಲಿ ಮದುವೆ ಮಾಡಲಿಲ್ಲ, ಮದುವೆಗೆ ಹೆಣ್ಣು ಸಿಗಲಿಲ್ಲ ಅಂತ ಮನನೊಂದು ಕುರಿಗಾಯಿ ಯುವಕ ತೆಂಗಿನಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಯಗಟಿ ಸಮೀಪದ ಬೋರಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನ ಕುಮಾರ್(26) ಎಂದು ಗುರುತಿಸಲಾಗಿದೆ. ಮೃತ ಕುಮಾರ್ ಮೂಲತಃ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬ್ರಹ್ಮಸಂದ್ರ ಮೂಲದ ಯುವಕ. ಮೃತ ಕುಮಾರ್ ಪೋಷಕರಿಗೆ ಮೂವರು ಗಂಡು ಮಕ್ಕಳು. ಯಾರಿಗೂ ಮದುವೆಯಾಗಿರಲಿಲ್ಲ. ಮೃತ ಕುಮಾರ್ ಪೋಷಕರ ಬಳಿ ಮದುವೆ ಮಾಡುವಂತೆ ಕೇಳುತ್ತಿದ್ದ. ಆದರೆ, ಪೋಷಕರು ನಿನ್ನ ಅಣ್ಣಂದಿರಿಗೆ ಮದುವೆಗೆ ಆಗಿಲ್ಲ. ಹುಡುಗಿ ಸಿಗುತ್ತಿಲ್ಲ. ಅವರಿಗೆ ಆದ ಮೇಲೆ ನಿನಗೆ ಮಾಡುತ್ತೇವೆ. ಇಲ್ಲ ಅವನ ಜೊತೆಯೇ ಒಟ್ಟಿಗೆ ಮದುವೆ ಮಾಡುತ್ತೇವೆ ಎಂದಿದ್ದರು.
ಅದೇ ಬೇಜಾರಿನಲ್ಲಿ ಕುಮಾರ್ ಮದ್ಯ ಸೇವಿಸುತ್ತಿದ್ದ, ಬಳಿಕ ಮನನೊಂದು ತೆಂಗಿನಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಯಗಟಿ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.



