ಸುತ್ತೂರು: ಒತ್ತಡ ನಿವಾರಣೆಗೆ ಶಿಬಿರಗಳು ಪೂರಕವಾಗಲಿ ಎಂದು ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಎಸ್. ಕಾತ್ಯಾಯಿನಿದೇವಿಯವರು ಸುತ್ತೂರು ಶ್ರೀಕ್ಷೇತ್ರದಲ್ಲಿ ಶಿಕ್ಷಕರ ಶಿಬಿರವನ್ನು ಏಪ್ರಿಲ್ 4 ರಂದು ಉದ್ಘಾಟಿಸಿ ಮಾತನಾಡುತ್ತಾ ತಿಳಿಸಿದರು. ಒತ್ತಡದ ಬದುಕು ಸಮಾಜದ ಎಲ್ಲಾ ವರ್ಗದ ಜನರ ಮೇಲೆ ಪರಿಣಾಮ ಬೀರಿ ಅನೇಕ ರೋಗಗಳಿಗೆ ಮೂಲವಾಗಿದೆ. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ನಕಾರಾತ್ಮಕ ಆಲೋಚನೆಗಳನ್ನು ದೂರಮಾಡಿ ಧನಾತ್ಮಕ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು. ಈ ಶಿಬಿರದಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳು ಇದಕ್ಕೆ ಪೂರಕವಾಗಿದೆ. ಶ್ರೀಮಠದ ದೈವಿಕ ಪರಿಸರದಲ್ಲಿ ಪಡೆಯುವ ಅನುಭವವೇ ಅನನ್ಯವಾದುದು ಎಂದು ಹೇಳಿದರು. ಮೈಸೂರಿನ ಆಂದೋಲನ ಪತ್ರಿಕೆಯ ಶ್ರೀಮತಿ ರಶ್ಮಿ ಕೋಟಿಯವರು ಶಿಕ್ಷಣ ಸಂಸ್ಥೆಯ ಗುಣಮಟ್ಟವನ್ನು ಅಳೆಯುವುದು ಅಲ್ಲಿನ ಶಿಕ್ಷಕರಿಂದ. ಶಿಕ್ಷಣ ಪರೀಕ್ಷೆಗೆ ಸೀಮಿತವಲ್ಲ. ಮಕ್ಕಳಿಗೆ ಬದುಕಿನ ಎಲ್ಲ ಸವಾಲುಗಳನ್ನು ಎದುರಿಸುವ, ಗೆಲುವು ಮತ್ತು ಸೋಲನ್ನು ಸಮಚ್ಚಿತ್ತದಿಂದ ಸ್ವೀಕರಿಸುವ, ಆತ್ಮವಿಶ್ವಾಸ ತುಂಬುವ ಶಕ್ತಿಯಾಗಬೇಕು. ಇದರಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾದದ್ದು. ಭಿನ್ನ ಸಾಮರ್ಥ್ಯದಿಂದ ಕೂಡಿರುವ ವಿದ್ಯಾರ್ಥಿಗಳ ಮನಸ್ಥಿತಿಗೆ ಅನುಗುಣವಾಗಿ ಬೋಧಿಸುವ ಕಲೆಯನ್ನು ಶಿಕ್ಷಕರು ರೂಢಿಸಿಕೊಳ್ಳಬೇಕು, ಆಗ ಮಾತ್ರ ಶಿಕ್ಷಕ ವೃತ್ತಿ ಆತ್ಮ ತೃಪ್ತಿ ನೀಡುತ್ತದೆ ಎಂದು ನುಡಿದರು. ಬಸವನಬಾಗೇವಾಡಿಯ ಅಕ್ಕನಾಗಮ್ಮ ಪ್ರೌಢಶಾಲೆಯ ಶಿಕ್ಷಕರಾದ ಶ್ರೀ ಅಶೋಕ ಹಂಚಲಿಯವರು ನಮ್ಮ ರಾಷ್ಟ್ರದ ಭವಿಷ್ಯ ಶಾಲಾ ಕೊಠಡಿಗಳಲ್ಲಿ ನಿರ್ಮಾಣವಾಗುತ್ತದೆ. ಮಕ್ಕಳಲ್ಲಿ ದೇಶಭಕ್ತಿ, ಕರುಣೆ, ಅನುಕಂಪ, ಪ್ರೀತಿ ಮೊದಲಾದ ಮೌಲ್ಯಗಳನ್ನು ತುಂಬಬೇಕು. ಭಾರತದ ಸಂಸ್ಕೃತಿ ಪ್ರಪಂಚದಲ್ಲಿಯೇ ಶ್ರೇಷ್ಠವಾಗಿದ್ದು, ಮಕ್ಕಳು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ವೇದ, ಉಪನಿಷತ್ತು, ವಚನ ಸಾಹಿತ್ಯದಲ್ಲಿ ಅಪಾರ ಜ್ಞಾನವಿದ್ದು, ಅವುಗಳನ್ನು ಅಭ್ಯಾಸಿಸಬೇಕು. ಪ್ರಸ್ತುತ ಸಮಾಜದಲ್ಲಿ ಹೆಚ್ಚು ಬುದ್ದಿವಂತ ಮಕ್ಕಳಿದ್ದಾರೆ. ಆದರೆ ಹೃದಯವಂತರ ಸಂಖ್ಯೆ ಕಡಿಮೆಯಾಗಿದೆ. ಆ ನಿಟ್ಟಿನಲ್ಲಿ ಮಕ್ಕಳ ಹೃದಯದಲ್ಲಿ ಉತ್ತಮ ಅಂಶಗಳನ್ನು ಬಿತ್ತಿ ವಿಶಾಲ ಮನೋಭಾವ ಬೆಳೆಸಬೇಕು. ಭಾರತೀಯ ಸಂಸ್ಕೃತಿಯು ಆಧ್ಯಾತ್ಮಿಕ ನೆಲಗಟ್ಟಿನಲ್ಲಿ ಪ್ರಪಂಚಕ್ಕೆ ದಾರಿ ತೋರುವ ಬೆಳಕಾಗಿದೆ ಎಂದು ತಿಳಿಸಿದರು.
ಮೈಸೂರಿನ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತರಾದ ಶ್ರೀ ರಮೇಶ ನರಸಯ್ಯರವರು ಶಿಕ್ಷಕ ವೃತ್ತಿ ಎಲ್ಲಾ ವೃತ್ತಿಗಳ ಮಾತೃ. ಇದು ಮುಂದಿನ ಪೀಳಿಗೆಗೆ ಹಾಗೂ ಸಮಾಜಕ್ಕೆ ಮಾರ್ಗದರ್ಶಕವಾಗಿದೆ. ಶಿಕ್ಷಕರು ತಮ್ಮ ವೃತ್ತಿಗೆ ನ್ಯಾಯ ಒದಗಿಸಲು ಉಲ್ಲಾಸದಿಂದ ಇರಬೇಕು. ಆರೋಗ್ಯಯುತವಾದ ಜೀವನಕ್ಕೆ ಮತ್ತು ಸಾಧನೆ ಮಾಡಲು, ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿರಲು ಜೀವನದಲ್ಲಿ ಉಲ್ಲಾಸ ವಿರಬೇಕು, ಇದಕ್ಕಾಗಿ ಶಿಕ್ಷಕರಲ್ಲಿ ಕಲಿಕಾಸಕ್ತಿ ಇರಬೇಕು. ಅತಿಯಾದ ಸ್ಪರ್ಧೆ ಹಾಗೂ ಒತ್ತಡ ಕಲಿಕಾಸಕ್ತಿಯನ್ನು ಕಡಿಮೆ ಮಾಡುತ್ತದೆ, ಅದಕ್ಕಾಗಿ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ಸಕಾರಾತ್ಮಕ ಆಲೋಚನೆಗಳಿಂದ ಜೀವನ ಉಲ್ಲಾಸ ಪಡೆಯಬೇಕು ಎಂದು ಹೇಳಿದರು.
ಶಿಬಿರಾರ್ಥಿಗಳು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಯೋಗಾಭ್ಯಾಸ, ಸಾಯಂಕಾಲ ದೇಸಿ ಆಟಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಸಂಜೆಯ ಪ್ರಾರ್ಥನೆಯ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಶಿಬಿರದಲ್ಲಿ 160 ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.ಶ್ರೀಮತಿ ಪ್ರತಿಮಾ ಎಂ.ಆರ್. ಪ್ರಾರ್ಥಿಸಿದರು. ಶ್ರೀಮತಿ ದೇವಿಕಾ ಎಂ. ಸ್ವಾಗತಿಸಿದರು. ಶ್ರೀ ಚೇತನ್ ಕುಮಾರ್ ಎಸ್.ವಿ. ವಂದಿಸಿದರು. ಶ್ರೀ ಚೇತನ್ ಕುಮಾರ್ ಹೆಚ್.ಎಂ. ಕಾರ್ಯಕ್ರಮ ನಿರೂಪಿಸಿದರು. ಸುತ್ತೂರು ಶ್ರೀಕ್ಷೇತ್ರದಲ್ಲಿ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್ಎಸ್ ಮಹಾವಿದ್ಯಾಪೀಠಗಳ ಸಂಯುಕ್ತ ಆಶ್ರಯದಲ್ಲಿ ಶಿಕ್ಷಕರಿಗೆ ಏಪ್ರಿಲ್ 4 ರಂದು ಆಯೋಜಿಸಿರುವ ಶಿಬಿರವನ್ನು ಬೆಂಗಳೂರಿನ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಎಸ್. ಕಾತ್ಯಾಯಿನಿದೇವಿಯವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಶ್ರೀ ಎಂ. ಶಿವಮಾದಪ್ಪ, ಶ್ರೀ ಜಿ.ಎಲ್. ತ್ರಿಪುರಾಂತಕ, ಶ್ರೀಮತಿ ರಶ್ಮಿ ಕೋಟಿ, ಶ್ರೀ ಅಶೋಕ ಹಂಚಲಿ ಹಾಗೂ ಶ್ರೀ ರೇಣುಕಸ್ವಾಮಿಯವರಿದ್ದಾರೆ.ಸುತ್ತೂರು ಶ್ರೀಕ್ಷೇತ್ರದಲ್ಲಿ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್ಎಸ್ ಮಹಾವಿದ್ಯಾಪೀಠಗಳ ಸಂಯುಕ್ತ ಆಶ್ರಯದಲ್ಲಿ ಶಿಕ್ಷಕರಿಗೆ ಆಯೋಜಿಸಿರುವ ಶಿಬಿರದಲ್ಲಿ ಏಪ್ರಿಲ್ 4 ರಂದು ಸಾಯಂಕಾಲ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಪ್ರಾರ್ಥನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
ಒತ್ತಡ ನಿವಾರಣೆಗೆ ಶಿಬಿರಗಳು ಪೂರಕವಾಗಿವೆ: ಎಸ್. ಕಾತ್ಯಾಯಿನಿದೇವಿ ಅಭಿಪ್ರಾಯ



