ಈ ಹಿಂದೆ “ಸ್ವಾರ್ಥ ರತ್ನ” ಸೇರಿದಂತೆ ಎರಡು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದ ಆದರ್ಶ ಗುಂಡುರಾಜ್ ಅಭಿನಯದ “ಕ್ಯಾಲೆಂಡರ್” ಚಿತ್ರದ ಟ್ರೇಲರ್ ಯುಗಾದಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಚಿತ್ರ ಏಪ್ರಿಲ್ 3 ರಂದು ಬಿಡುಗಡೆಯಾಗಲಿದೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಯುಗಾದಿ ಎಂದರೆ ಹೊಸವರ್ಷ ಆರಂಭ. ಈ ಸಂದರ್ಭದಲ್ಲಿ “ಕ್ಯಾಲೆಂಡರ್” ಚಿತ್ರದ ಟ್ರೇಲರ್ ಬಿಡುಗಡೆಯಾಗುತ್ತಿರುವುದು ವಿಶೇಷ. ಇದೊಂದು ಮಹಿಳಾ ಪ್ರಧಾನ ಚಿತ್ರ. ಕುಟುಂಬ ಸಮೇತ ನೋಡಲೇ ಬೇಕಾದ ಚಿತ್ರವೂ ಹೌದು. ನನ್ನದು ಈ ಚಿತ್ರದಲ್ಲಿ ವೈದ್ಯನ ಪಾತ್ರ. ಬಹು ತಾರಾಗಣದ ಈ ಚಿತ್ರದಲ್ಲಿ ನಿವಿಷ್ಕ ಪಾಟೀಲ್ ಹಾಗೂ ಸುಶ್ಮಿತ ನಾಯಕಿಯರಾಗಿ ನಟಿಸಿದ್ದಾರೆ.ಕನಸಿನ ರಾಣಿ ಮಾಲಾಶ್ರೀ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಮೇಶ್ ಇಂದಿರಾ, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು, ಸುಚೇಂದ್ರ ಪ್ರಸಾದ್, ಚಂದ್ರಪ್ರಭ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸುನಾದ್ ಗೌತಮ್ ಸಂಗೀತ ನೀಡಿದ್ದಾರೆ. ರಮೇಶ್ ಕೊಯಿರಾ ಛಾಯಾಗ್ರಹಣ, ಕೆ.ಜಿ.ಎಫ್ ಖ್ಯಾತಿಯ ವಿಕ್ರಂ ಮೋರ್ ಸಾಹಸ ನಿರ್ದೇಶನ, ಭಜರಂಗಿ ಮೋಹನ್ ನೃತ್ಯ ನಿರ್ದೇಶನ, ಸುರೇಶ್ ಆರ್ಮುಗಂ ಸಂಕಲನ ಹಾಗೂ ಮಹಾಂತೇಶ್ ಆರ್ ಅವರ ಸಹ ನಿರ್ದೇಶನವಿರುವ ಈ ಚಿತ್ರಕ್ಕೆ ಕಥೆ ನಾನೇ ಬರೆದಿದ್ದು, ನವೀನ್ ಶಕ್ತಿ ನಿರ್ದೇಶನ ಮಾಡಿದ್ದಾರೆ. ಏಪ್ರಿಲ್ ಮೂರರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದ್ದು, ಹೆಸರಾಂತ ವಿ.ಕೆ.ಫಿಲಂಸ್ ವಿತರಣೆ ಮಾಡುತ್ತಿದೆ. ಹಿಂದಿಯಲ್ಲೂ ನಮ್ಮ ಚಿತ್ರ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಮುಂಬೈನಲ್ಲೂ ಸಹ ಈ ಚಿತ್ರದ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು ಎಂದು ನಿರ್ಮಾಪಕ ಹಾಗೂ ನಾಯಕ ಆದರ್ಶ್ ಗುಂಡುರಾಜ್ ಹೇಳಿದರು.
ನಾನು ಮೂಲತಃ ರಂಗಭೂಮಿಯವವನು. 5000ಕ್ಕೂ ಅಧಿಕ ಬೀದಿ ನಾಟಕಗಳನ್ನು ಮಾಡಿದ್ದೇನೆ. ನಿರ್ದೇಶಕನಾಗಿ ಇದು ಮೊದಲ ಚಿತ್ರ. “ಕ್ಯಾಲೆಂಡರ್” ನಲ್ಲಿ ಎಲ್ಲರ ಮನಸ್ಸಿಗೂ ಹತ್ತಿರವಾಗುವ ಚಿತ್ರವಾಗಲಿದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದರು ನಿರ್ದೇಶಕ ನವೀನ್ ಶಕ್ತಿ.
ನಾಯಕಿಯರಾದ ಸುಶ್ಮಿತ ಹಾಗೂ ಸಹ ನಿರ್ಮಾಪಕ ಮತ್ತು ನಟ ಶಿವಪ್ರದೀಪ್ ಅವರು ಸಹ “ಕ್ಯಾಲೆಂಡರ್” ಚಿತ್ರದ ಕುರಿತು ಮಾತನಾಡಿದರು.
ಯುಗಾದಿ ಹಬ್ಬಕ್ಕೆ “ಕ್ಯಾಲೆಂಡರ್” ಟ್ರೇಲರ್ ಬಿಡುಗಡೆ



