ಚಾಮರಾಜನಗರ: ಸಮಾಜದಲ್ಲಿ ಪುರುಷ, ಮಹಿಳೆಯರ ನಡುವೆ ಇರುವ ಲಿಂಗ ಅಸಮಾನತೆಗೆ ಜಾತಿಪದ್ಧತಿಯೇ ಮೂಲಕಾರಣವಾಗಿದ್ದು, ಇದರ ನಿವಾರಣೆಗಾಗಿ ಕಾರಣ ಪರಿಣಾಮಗಳ ಚಿಂತನೆ ನಡೆಸಬೇಕಾಗಿದೆ ಎಂದು ಭೋಗಾಪುರ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ. ದೇವರಾಜು ಅವರು ತಿಳಿಸಿದರು.
ತಾಲ್ಲೂಕಿನ ಭೋಗಾಪುರದಲ್ಲಿರುವ ಸರ್ಕಾರಿ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜಿನ ಸಾವಿತ್ರಿಬಾಯಿಪುಲೆ ಸಭಾಂಗಣದಲ್ಲಿAದು ಚಾಮರಾಜನಗರದ ಅಜೀಂ ಪ್ರೇಮ್ಜಿ ಪ್ರತಿಷ್ಠಾನದ ಸಹಯೋಗದೊಂದಿಗೆ ‘ಮಹಿಳಾ ದಿನಾಚರಣೆ’ ಅಂಗವಾಗಿ ಆಯೋಜಿಸಲಾಗಿದ್ದ “ಲಿಂಗಸಮನ್ವತಾ ಮೇಳ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶ ಇಂದು ವಿಜ್ಞಾನ, ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದಿದೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದರೂ ಆಗಾಗ್ಗೆ ಮಹಿಳೆಯರ ಮೇಲೆ ದೌರ್ಜನ್ಯ, ದಬ್ಬಾಳಿಕೆಗಳು ನಿರಂತರವಾಗಿ ನಡೆಯುತ್ತಲೆ ಇವೆ. ಬಡತನ, ನಿರುದ್ಯೋಗ, ಮಹಿಳೆಯರ ಮೇಲಿನ ದೌರ್ಜನ್ಯದಂತಹ ಯಾವುದೇ ಸಮಸ್ಯೆಗೆ ಲಿಂಗ ಅಸಮಾನತೆ, ಜಾತಿಪದ್ದತಿ ಮೂಲವಾಗಿದೆ. ಪ್ರತಿದಿನ ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ. ಇದರ ನಿವಾರಣೆಗಾಗಿ ಲಿಂಗ ಅಸಮಾನತೆಯ ಕಾರಣ, ಪರಿಣಾಮಗಳನ್ನು ಚರ್ಚಿಸಿ, ಚಿಂತನೆಗೊಳಪಡಿಸಬೇಕಾಗಿದೆ ಎಂದು ಡಾ. ಪಿ. ದೇವರಾಜು ಅವರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ನಗರದ ಅಜೀಂ ಪ್ರೇಮ್ಜಿ ಪ್ರತಿಷ್ಠಾನದ ಜಿಲ್ಲಾ ಸಂಯೋಜಕರಾದ ಎನ್. ಸೌಮ್ಯ ಅವರು ಮಾತನಾಡಿ ಮಹಿಳೆಯರು ಕಾರ್ಯನಿರ್ವಹಿಸುವ ಸ್ಥಳದಲ್ಲಿ ಇಂದು ಹಲವು ಸಮಸ್ಯೆ ಹಾಗೂ ಒತ್ತಡದ ಪರಿಸ್ಥಿತಿ ಎದುರಿಸುತ್ತಿರುವುದು ಕಂಡುಬAದಿದೆ. ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಮುಂದಿರುವ ಹೆಣ್ಣುಮಕ್ಕಳು ಪಿಯುಸಿ ನಂತರ ಐಟಿ, ತಾಂತ್ರಿಕ ಕ್ಷೇತ್ರಗಳಿಗೆ ಮುನ್ನುಗ್ಗಬೇಕು. ಪಿಯುಸಿ ಬಳಿಕ ಪೋಷಕರು ಹೆಣ್ಣುಮಕ್ಕಳ ಮದುವೆ ಮಾಡದೇ ಉನ್ನತ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಬೇಕು. ಮಹಿಳೆಯರು ಸಹ ಉನ್ನತ ಶಿಕ್ಷಣದ ಜೊತೆಗೆ ಕೌಶಲ್ಯಾಧಾರಿತ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಮಹಿಳೆಯರಿಗೆ ಕುಟುಂಬ ನಿರ್ವಹಣೆ ಜೊತೆಗೆ ತಾಳ್ಮೆ, ಸಹನೆಯು ಅಗತ್ಯವಾಗಿದೆ ಎಂದರು.
ಲಿಂಗ ಸಮಾನತೆ ಮತ್ತು ಸಾಂವಿಧಾನಿಕ ಪ್ರಾತಿನಿಧ್ಯ ಕುರಿತು ಉಪನ್ಯಾಸ ನೀಡಿದ ಯಳಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ವೇತ ಅವರು ಮಾತನಾಡಿ ಹೆಣ್ಣೆಂದರೇ ಪ್ರಕೃತಿ, ಪ್ರಕೃತಿಗೆ ಎಲ್ಲವನ್ನು ಸಹಿಸುವ ತಾಳ್ಮೆ ಇದೆ. ಹಾಗೆಯೇ ಮಹಿಳೆಯರು ಎಲ್ಲವನ್ನು ಸಹಿಸಿಕೊಳ್ಳುವ ಶಕ್ತಿ, ಸಾಮರ್ಥ್ಯ ಹೊಂದಿದ್ದಾರೆ. ಪ್ರತಿ ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇರುವಂತೆ ಮಹಿಳೆಯರ ಯಶಸ್ಸಿನ ಹಿಂದೆ ಸಾಕಷ್ಟು ಪುರುಷರು ಇದ್ದಾರೆ. ಪ್ರಕೃತಿದತ್ತವಾಗಿ ಇಬ್ಬರೂ ಸಮಾನರು. ಇಬ್ಬರು ಪರಸ್ಪರ ಅರಿವು, ಗೌರವ, ಹೊಂದಾಣಿಕೆಯಿAದ ನಡೆದುಕೊಳ್ಳಬೇಕು. ಅವಕಾಶಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಮಹಿಳೆಗೆ ನೀಡಬೇಕಾಗಿದೆ ಎಂದರು.
ಹಿಂದಿನ ಕಾಲದ ಸಾಂಪ್ರಾದಾಯಿಕ ಪುರುಷಪ್ರಧಾನ ಸಮಾಜದಲ್ಲಿ ಹೆಣ್ಣು ಎಂದರೆ ತಾತ್ಸಾರ ಮನೋಭಾವವಿತ್ತು. ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆ ಅಂದು ಅಬಲೆಯಾಗಿದ್ದಳು. ದೇಶ ಸ್ವಾತಂತ್ರ್ಯಗೊಂಡು ಸಂವಿಧಾನ ಜಾರಿ ಬಳಿಕ ಮಹಿಳೆಯರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಸೇರಿದಂತೆ ಎಲ್ಲಾ ರಂಗದಲ್ಲಿಯೂ ತನ್ನದೇ ಛಾಪು ಮೂಡಿಸಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಡಿ ಹತ್ತು-ಹಲವು ಹಕ್ಕುಗಳನ್ನು ಅಡಕಗೊಳಿಸಿ ಮಹಿಳೆಯರಿಗೆ ಕಾನೂನಾತ್ಮಕ ರಕ್ಷಣೆ ನೀಡಿದ್ದಾರೆ. ಮೌಢ್ಯತೆ, ಕಂದಾಚಾರಗಳಿಗೆ ಸಿಲುಕಿದ್ದ ಮಹಿಳೆಯರು ಇಂದು ಮುಖ್ಯವಾಹಿನಿಗೆ ಬಂದಿದ್ದಾರೆ. ಪ್ರಜ್ಞಾವಂತ ನಾಗರಿಕರು ಲಿಂಗ ಸಮಾನತೆ ಬಗ್ಗೆ ಧನಾತ್ಮಕ ಚಿಂತನೆ ನಡೆಸಬೇಕಾಗಿದೆ ಎಂದು ಸಹಾಯಕ ಪ್ರಾಧ್ಯಾಪಕರಾದ ಶ್ವೇತ ಅವರು ಹೇಳಿದರು.
ಕಾಲೇಜಿನ ಉಪನ್ಯಾಸಕರಾದ ನಂಜುಂಡಯ್ಯ, ರಮೇಶ್ ಬಾಬು, ರಂಗಸ್ವಾಮಿ ಹಾಗೂ ಭೋಗಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾನಸ ಅವರು ಕಾರ್ಯಕ್ರಮದಲ್ಲಿ ಮಹಿಳಾ ದಿನಾಚರಣೆಯ ಅಗತ್ಯ ಹಾಗೂ ಮಹತ್ವದ ಕುರಿತು ಮಾತನಾಡಿದರು. ಕಾಲೇಜಿನ ಅಧ್ಯಾಪಕ ವೃಂದ, ಅಜೀಂ ಪ್ರೇಮ್ಜಿ ಪ್ರತಿಷ್ಠಾನದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಲಿಂಗ ಅಸಮಾನತೆಗೆ ಜಾತಿ ಪದ್ಧತಿಯೇ ಮೂಲ ಕಾರಣ: ಡಾ.ಪಿ.ದೇವರಾಜು



