ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿಯಡಿ (ಎನ್ಇಪಿ) ಈ ವರ್ಷದಿಂದ ೨ ಹಂತಗಳಲ್ಲಿ ೧೦ನೇ ತರಗತಿಯ ಪರೀಕ್ಷೆ ನಡೆಸಲು ಆರಂಭಿಸಿರುವ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ಇ), ಅದಕ್ಕೆ ಸಂಬಂಧಿಸಿದ ನಿರ್ದೇಶನಗಳನ್ನು ಜಾರಿ ಮಾಡಿದೆ. ಅದರ ಪ್ರಕಾರ ವಿದ್ಯಾರ್ಥಿಗಳು ಮೊದಲ ಹಂತದ ಪರೀಕ್ಷೆಗೆ ಹಾಜರಾಗುವುದನ್ನು ಕಡ್ಡಾಯಗೊಳಿಸಲಾಗಿದೆ.
ಮೊದಲ ಹಂತದಲ್ಲಿ ಎಲ್ಲಾ ವಿಷಯಗಳಲ್ಲಿ ಉತ್ತೀರ್ಣರಾದವರಿಗೆ ವಿಜ್ಞಾನ, ಗಣಿತ, ಸಮಾಜವಿಜ್ಞಾನ ಮತ್ತು ಭಾಷೆಗಳ ಪೈಕಿ ೩ ವಿಷಯಗಳಲ್ಲಿ ೨ನೇ ಹಂತದಲ್ಲೂ ಪರೀಕ್ಷೆ ಬರೆದು ಅಂಕಗಳನ್ನು ಸುಧಾರಿಸಿಕೊಳ್ಳುವ ಅವಕಾಶವಿದೆ. ಒಂದೊಮ್ಮೆ ಪ್ರಥಮ ಹಂತದಲ್ಲಿ ಕನಿಷ್ಠ ೩ ಪರೀಕ್ಷೆಗಳನ್ನು ಬರೆಯದಿದ್ದರೆ ಆ ವಿದ್ಯಾರ್ಥಿಗಳು ೨ನೇ ಹಂತದ ಪರೀಕ್ಷೆಗೆ ಅನರ್ಹರಾಗುತ್ತಾರೆ ಹಾಗೂ ಮುಂದಿನ ವರ್ಷವೇ ಪರೀಕ್ಷೆಗೆ ಕೂರಬೇಕಾಗುವುದು ಎಂದು ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್ ತಿಳಿಸಿದ್ದಾರೆ. ಜತೆಗೆ, ಒಮ್ಮೆ ೧೦ನೇ ತರಗತಿ ಉತ್ತೀರ್ಣರಾದವರು ಮತ್ತೆ ಹೆಚ್ಚುವರಿ ವಿಷಯದ ಪರೀಕ್ಷೆ ಬರೆಯುವ ಅನುಕೂಲವಿಲ್ಲವೆಂದೂ ಅವರು ಸ್ಪಷ್ಟಪಡಿಸಿದ್ದಾರೆ. ಮಂಗಳವಾರದಿಂದ ೧೦ ಮತ್ತು ೧೨ನೇ ತರಗತಿಗಳಿಗೆ ಪರೀಕ್ಷೆ ಶುರುವಾಗಲಿದ್ದು, ಭಾರತೀಯ ಮತ್ತು ವಿದೇಶಿ ವಿದ್ಯಾರ್ಥಿಗಳು ಸೇರಿ ಒಟ್ಟು ೪೬ ಲಕ್ಷ ಮಂದಿ ಪರೀಕ್ಷೆ ಬರೆಯಲಿದ್ದಾರೆ.



