ಬೆಂಗಳೂರು: ವಿಶ್ವ ವಿಖ್ಯಾತ ಐತಿಹಾಸಿಕ ಬೆಂಗಳೂರು ಕರಗಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ರಾತ್ರಿ 12ಕ್ಕೆ ಕರಗ ಮಹೋತ್ಸವಕ್ಕೆ ವಿಜೃಂಭಣೆಯಿಂದ ವಿದ್ಯುಕ್ತ ಚಾಲನೆ ದೊರೆಯಲಿದೆ. ಜಿಬಿಎ, ಮುಜರಾಯಿ ಇಲಾಖೆ, ಪೊಲೀಸ್ ಇಲಾಖೆ, ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತದ ಜೊತೆಗೆ ಕರಗ ಉತ್ಸವ ಸಮಿತಿ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದೆ. ಸಿಎಂ, ಡಿಸಿಎಂ ಕೂಡ ಕರಗದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. 15 ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ಸಾಧ್ಯತೆಯಿದೆ.ಮೈಸೂರಿನ ಜನರಿಗೆ ಮೈಸೂರು ದಸರಾ ಹೇಗೋ ಬೆಂಗಳೂರಿನ ಜನರಿಗೆ ಬೆಂಗಳೂರು ಕರಗ ವರ್ಲ್ಡ್ ಫೇಮಸ್. ಚೈತ್ರ ಹುಣ್ಣಿಮೆಯ ಈ ದಿನ ಸಾವಿರಾರು ವರ್ಷಗಳ ಇತಿಹಾಸ, ಐತಿಹಾಸಿಕ ಹಾಗೂ ಧಾರ್ಮಿಕ ಸಾಂಪ್ರದಾಯಿಕ ಹಿನ್ನೆಲೆ ಇರುವ ಬೆಂಗಳೂರಿನ ಕರಗ ಇಂದು ಅದ್ಧೂರಿಯಾಗಿ ಜರುಗಲಿದೆ. ಮಾರ್ಚ್ 24ರಿಂದ ಆರಂಭವಾಗಿರುವ ಕರಗ ಉತ್ಸವದಲ್ಲಿ ಇಂದು ಕರಗ ಶಕ್ತ್ಯೋತ್ಸವದ ಸಂಭ್ರಮ. ಮಲ್ಲಿಗೆ ಹೂವಿನಿಂದ ಅಲಂಕರಿಸಿದ ಕರಗವನ್ನ 16ನೇ ಬಾರಿಗೆ ಕರಗದ ಪೂಜಾರಿ ಜ್ಞಾನೇಂದ್ರ ಹೊರಲಿದ್ದಾರೆ.
ಇಂದು ರಾತ್ರಿ ಸರಿಸುಮಾರು 12ರ ಬಳಿಕ ಆರಂಭವಾಗುವ ಕರಗ ಉತ್ಸವ ಬೆಳಿಗ್ಗೆವರೆಗೆ ನಡೆಯಲಿದೆ.
ಸಂಜೆ ಕಬ್ಬನ್ ಪಾರ್ಕ್ನಲ್ಲಿರುವ ಕರಗದಗುಂಟೆಯಲ್ಲಿ ಪೂಜೆ ಮಾಡಲಿದ್ದು, ಬಳಿಕ ಅಲ್ಲಿಂದ ಬಂದ ನಂತರ ಕರ್ಪೂರ ಸೇವೆ ನಡೆಯಲಿದೆ. ಸಾವಿರಾರು ಕೆ.ಜಿ ಕರ್ಪೂರ ಸೇವೆಯನ್ನ ಭಕ್ತರು ಮಾಡುತ್ತಾರೆ. ನಂತರ ಬಳೆ ಶಾಸ್ತ್ರ ನಡೆಯಲಿದೆ. ಅದಾದ ಮೇಲೆ ತಾಯಿಯನ್ನು ಆಹ್ವಾನ ಮಾಡಿಕೊಂಡು ಹೂವಿನ ಕರಗದ ದರ್ಶನ ಭಕ್ತರಿಗೆ ತಡರಾತ್ರಿ ಸಿಗಲಿದೆ.
ಐತಿಹಾಸಿಕ ಬೆಂಗಳೂರು ಕರಗಕ್ಕೆ ಕ್ಷಣಗಣನೆ



