ಮೈಸೂರು: ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನ ಕಾಮಗಾರಿ ಆರಂಭವಾಗಿ ಸುಮಾರು 13 ವರ್ಷಗಳೇ ಕಳೆದಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಹಿಂದಿನ ಸರ್ಕಾರಗಳು ಹಣ ಬಿಡುಗಡೆ ಮಾಡದೇ ನಿರ್ಲಕ್ಷ್ಯ ತೋರಿವೆ. ಹೀಗಾಗಿ ನೂತನ ಸಿಎಂ ಸಿದ್ದರಾಮಯ್ಯ ಕೂಡಲೇ ಕಾಮಗಾರಿ ಪುನರಾರಂಭಿಸುವ ಮೂಲಕ ಬರುವ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ವೇಳೆಗೆ ಲೋಕಾರ್ಪಣೆಗೊಳಿಸಬೇಕು ಎಂದು ದಲಿತ ವೆಲ್ಫೇರ್ ಟ್ರಸ್ಟ್ ಆಗ್ರಹಿಸಿದೆ.
ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ಶಾಂತರಾಜು ಮಾತನಾಡಿ, 2008ರಲ್ಲಿ ಭವನಕ್ಕೆ ಭೂ ಮಂಜೂರಾತಿ ದೊರೆತು ಕಾಮಗಾರಿ ಪ್ರಾರಂಭವಾಗಿ ಶೇ.90ರಷ್ಟು ಮುಗಿದಿದ್ದರೂ ನಂತರನಿರ್ಲಕ್ಷ್ಯ ತೋರಿದ ಕಾರಣ ಪಾಳು ಭವನದಂತಾಗಿದೆ. ಹೀಗಾಗಿ ನಿಯೋಗವೊಂದುನೂತನ ಸಿಎಂ ಅವರನ್ನು ಭೇಟಿ ಮಾಡಿ ಭವನವನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದೆ.
ಈ ವೇಳೆ ಸಕಾರಾತ್ಮಕ ಸ್ಪಂದನೆದೊರೆತಿದೆ ಎಂದರು. ಕಾಂಗ್ರೆಸ್ ಪರ ದಲಿತರನ್ನು ಒಗ್ಗೂಡಿಸಿದ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಈವರೆಗೂ ಸಚಿವರನ್ನಾಗಿ ಮಾಡದಿರುವುದು ಸರಿಯಲ್ಲ. ಇವರು ಲೋಕೋಪಯೋಗಿ ಸಚಿವರಾಗಿದ್ದ ವೇಳೆ ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ. ರಸ್ತೆಗಳ ನಿರ್ಮಾಣದ ಮೂಲಕ ಜನತೆಯ ಗಮನ ಸೆಳೆದಿದ್ದಾರೆ. ಹೀಗಾಗಿ ಕೂಡಲೇ ಅವರನ್ನು ಸಂಪುಟಕ್ಕೆ ಸೇರಿಸಿ ಕೊಳ್ಳಬೇಕೆಂದು ಮನವಿ ಮಾಡಿದರು. ಮುಖಂಡರಾದ ಚಿಕ್ಕಂದಾನಿ, ಸಿದ್ದಸ್ವಾಮಿ, ಜಯಕುಮಾರ್, ಶಿವಪ್ಪ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
Leave a Review