ಬೆಳಗಾವಿ: ಇಂದು ವಿಧಾನಸಭೆಗೆ ಪ್ರಶ್ನೋತ್ತರ ಕಲಾಪಕ್ಕೆ ತಡವಾಗಿ ಬಂದ ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಅವರನ್ನು ವಿಧಾನಸಭಾಧ್ಯಕ್ಷರು ಏಕೆ ತಡ ಎಂದು ಪ್ರಶ್ನೆ ಮಾಡಿದರು.
ಈ ಸಂದರ್ಭದಲ್ಲಿ ಉತ್ತರಿಸಿದ ಶಾಸಕ ಪ್ರಕಾಶ್ ಕೋಳಿವಾಡ, ನಿನ್ನೆ ಬಿದ್ದು ಕಾಲು ಗಾಯವಾಗಿ ಎಕ್ಸ್ ರೇ ತೆಗೆಸಲು ಹೋಗಿ ತಡವಾಯ್ತು ಎಂದರು.ಹೇಗೆ ಬಿದ್ದಿದ್ದು ಎಂದು ಕೇಳಿದ ಸ್ಪೀಕರ್ ಅವರಿಗೆ ಸುವರ್ಣ ಸೌಧದಲ್ಲಿ ಮೆಟ್ಟಿಲು ಇಳಿಯುವಾಗ ಬಿದ್ದಿದ್ದು ಎಂದ ಉತ್ತರಿಸಿದರು. ಈ ವೇಳೆ ಉಳಿದ ಸದಸ್ಯರು ಹೇಗೆ ಬಿದ್ದಿದ್ದು ಎಂದು ಛೇಡಿಸಿದರು.
ಅವರು ಬಿದ್ದು ಗಾಯವಾದರೂ ಎಕ್ಸ್ ರೇ ತೆಗೆಸಿಕೊಂಡು ಮತ್ತೆ ಸದನಕ್ಕೆ ಬಂದಿದ್ದಾರೆ, ಅವರನ್ನು ಅಭಿನಂದಿಸುತ್ತೇನೆ, ಮುಂದೆ ಬೀಳದ ಹಾಗೆ ನೋಡಿಕೊಳ್ಳಿ ಎಂದ ಸ್ಪೀಕರ್ ಸಲಹೆ ಮಾಡಿದರು.ಅವರಿಗೆ ಹೇಗೆ ಬಿದ್ದಿದ್ದು ಅಂತಾ ಕಾರಣ ಕೇಳಬೇಡಿ ಎಂದು ಸ್ಪೀಕರ್ ಅವರನ್ನು ಉದ್ದೇಶಿಸಿ ಶಾಸಕ ಅರವಿಂದ ಬೆಲ್ಲದ್ ತಿಳಿಸಿದರು.
ನಿನ್ನೆ ಸುವರ್ಣ ಸೌಧದಲ್ಲೇ ಹಗಲು ಹೊತ್ತಿನಲ್ಲೇ ಬಿದ್ದಿದ್ದು, ಎಲ್ಲರೂ ನಿಮ್ಮ ಹಾಗೆಯೇ ಎಂದು ತಿಳಿದುಕೊಂಡರೆ ಹೇಗೆ ಎಂದು ಬೆಲ್ಲದ್ಗೆ ಪ್ರಕಾಶ್ ಕೋಳಿವಾಡ ತಿರುಗೇಟು ನೀಡಿದರು.