ಚಿಕ್ಕಬಳ್ಳಾಪುರ: ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮಯೋಚಿತವಾಗಿ ಹಾಗೂ ಸಂದರ್ಭೋಚಿತವಾಗಿ ಕೆಲಸ ಮಾಡದೆ ಅರ್ಜಿ ವಿಲೆವಾರಿ ಮಾಡಲು ವಿಳಂಬ ಧೋರಣೆ ತೋರುವುದು ಕೂಡ ಕರ್ತವ್ಯ ಲೋಪವಾಗಿದ್ದು, ಅಂತಹವರ ಮೇಲೂ ಕೂಡ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ ಅವರು ಅಧಿಕಾರಿಗಳಿಗೆ ತಿಳಿಸಿದರು.ಇಲ್ಲಿನ ಜಿಲ್ಲಾ ಪಂಚಾಯತ್ ನ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಚಿಕ್ಕಬಳ್ಳಾಪುರ, ಗೌರಿಬಿದನೂರು, ಮಂಚೇನಹಳ್ಳಿ ಹಾಗೂ ಗುಡಿಬಂಡೆ ತಾಲ್ಲೂಕುಗಳಿಗೆ ಸಂಬAಧಪಟ್ಟ ಲೋಕಾಯುಕ್ತದಲ್ಲಿ ದಾಖಲಾಗಿರುವ ದೂರು ಪ್ರಕರಣಗಳ ವಿಚಾರಣೆಯನ್ನು ನಡೆಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಕಳೆದ ಫೆಬ್ರವರಿ ಮಾಹೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಬಾಗೇಪಲ್ಲಿ, ಶಿಡ್ಲಘಟ್ಟ ಹಾಗೂ ಚೇಳೂರು ತಾಲ್ಲೂಕುಗಳಿಗೆ ಸಂಬಂಧಪಟ್ಟ ಪ್ರಕರಣಗಳನ್ನು ವಿಚಾರಣೆ ನಡೆಸಿ ಶೇ. 65 ರಷ್ಟು ಪ್ರಕರಣಗಳನ್ನು ಸ್ಥಳದಲ್ಲೆ ವಿಲೆವಾರಿ ಮಾಡಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿ ತನಿಖೆಗೆ ಬಾಕಿ ಇರುವ 73 ದೂರು ಪ್ರಕರಣಗಳಲ್ಲಿ ಇಂದು ವಿಚಾರಣೆ ನಡೆಸಲಾಗಿದೆ. ಬಹುತೇಕ ಪ್ರಕರಣಗಳು ಇತ್ಯರ್ಥವಾಗಿವೆ. ಕಂದಾಯ, ಗ್ರಾಮೀಣ ಮತ್ತು ಪಂಚಾಯತ್ ರಾಜ್ ಅಭಿವೃದ್ಧಿ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳೆ ಹೆಚ್ಚಿನ ಸಂಖ್ಯೆಯಲ್ಲಿವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉತ್ತಮ ಸ್ಪಂದನೆ ನೀಡಿದ್ದು, ವಿಚಾರಣೆಯು ಶಾಂತಿಯುತವಾಗಿ ಜರುಗಿತು. ಇತ್ಯರ್ಥಗೊಂಡ ಪ್ರಕರಣಗಳಲ್ಲಿ ದೂರುದಾರರು ನೆಮ್ಮದಿಯ ಮಾತುಗಳನ್ನಾಡಿ ಧನ್ಯವಾದಗಳನ್ನು ತಿಳಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.ಸರ್ಕಾರದ ಯಾವುದೇ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರಿಗೆ ಸಾರ್ವಜನಿಕರಿಂದ ಯಾವುದೇ ದೂರು ಅಥವಾ ಅರ್ಜಿ ಬಂದಲ್ಲಿ ಅದನ್ನು ಮೊದಲು ಪರಿಶೀಲಿಸಿ ತಮ್ಮ ವ್ಯಾಪ್ತಿಗೆ ಬರುತ್ತದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಂಡು, ಒಂದು ವೇಳೆ ತಮ್ಮ ವ್ಯಾಪ್ತಿಗೆ ಬರುತ್ತದೆ ಎನ್ನುವುದಾದರೆ ಆ ದೂರು, ಅರ್ಜಿಗೆ ಸಂದರ್ಭೋಚಿತವಾಗಿ, ಸಮಯೋಚಿತವಾಗಿ ಆದಷ್ಟು ಶೀಘ್ರವಾಗಿ ಕಾನೂನಾತ್ಮಕವಾಗಿ ಪರಿಹಾರ ದೊರಕಿಸಿಕೊಡಬೇಕು. ಒಂದು ವೇಳೆ ಆ ದೂರು ಅಥವಾ ಅರ್ಜಿ ತಮ್ಮ ವ್ಯಾಪ್ತಿಗೆ ಬರದಿದ್ದಲ್ಲಿ ಸಂಬAಧಿಸಿದ ದೂರುದಾರ ಅಥವಾ ಅರ್ಜಿದಾರರನ್ನು ಕರೆಯಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು. ದೂರು ಅರ್ಜಿಯನ್ನು ಶೀಘ್ರ ವಿಲೇವಾರಿ ಮಾಡಿ ಮುಕ್ತಿ ದೊರಕಿಸಿಕೊಡಬೇಕೆ ಹೊರತು ಅನವಶ್ಯಕವಾಗಿ ಕಾಲಹರಣ ಮಾಡಬಾರದು. ಸಂವಿಧಾನವು ಸರ್ಕಾರದ ಮೂಲಕ ನೀಡಿರುವ ಹುದ್ದೆ, ಸ್ಥಾನಮಾನ, ಅವಕಾಶ ಹಕ್ಕುಗಳನ್ನು ಸಾರ್ವಜನಿಕರ ಸೇವೆ ಅಥವಾ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಬಳಸಬೇಕು. ಇದು ಸಂವಿಧಾನ ನೀಡಿರುವ ಕರ್ತವ್ಯವಾಗಿದ್ದು, ಅದನ್ನು ನ್ಯಾಯಯುತ ರೀತಿ ಮಾರ್ಗದಲ್ಲಿ ಕಾರ್ಯಗತಗೊಳಿಸಲು ಹಿಂಜರಿಯುವುದು ಬೇಡ. ಯಾವುದೇ ಸಾರ್ವಜನಿಕರು ವೃಥಾ ದುರುದ್ದೇಶಪೂರಿತವಾಗಿ ದೂರು ಅಥವಾ ಅರ್ಜಿ ನೀಡುವುದಿಲ್ಲ. ಸಾರ್ವಜನಿಕರೂ ಈ ವಿಚಾರದಲ್ಲಿ ಅತ್ಯಂತ ಹೊಣೆಗಾರಿಕೆ ಮತ್ತು ಬದ್ಧತೆಯಿಂದ ನಡೆದುಕೊಳ್ಳಬೇಕು. ಸಾರ್ವಜನಿಕರು ಯಾವುದೇ ಅಧಿಕಾರಿ ಅಥವಾ ನೌಕರರ ವಿರುದ್ಧದ ದೂರು ಅರ್ಜಿಯನ್ನು ಸಕಾರಾತ್ಮಕವಾಗಿ ನೀಡಬೇಕೇ ಹೊರತು ದುರುದ್ದೇಶಪೂರಿತವಾಗಿ ಅಲ್ಲ. ಅಧಿಕಾರಿ ಮತ್ತು ನೌಕರರು ಸಾರ್ವಜನಿಕರ ಸಮಸ್ಯೆ, ಕುಂದುಕೊರತೆ ದೂರು ಅರ್ಜಿಗಳನ್ನು ಪರಿಶೀಲಿಸದೆ ಏಕಾಏಕಿ ನಕಾರಾತ್ಮಕ ಮನೋಧೋರಣೆಯಿಂದ ನೋಡಬಾರದು. ನ್ಯಾಯಾಲಯಗಳಿಗೆ ಹೋಗುವವರೆಲ್ಲಾ ಜಗಳ ಮಾಡುವವರಲ್ಲ. ಬದಲಿಗೆ, ತಮ್ಮ ಹಕ್ಕು ಬಾಧ್ಯತೆಗಳನ್ನು ಕಾನೂನಾತ್ಮಕವಾಗಿ ಸ್ಥಾಪಿಸಿಕೊಳ್ಳಲು, ಪರಿಹರಿಸಿಕೊಳ್ಳಲು ಬಂದವರಾಗಿರುತ್ತಾರೆ ಎಂಬ ಸಾಮಾನ್ಯ ವಿಷಯವನ್ನು ಸೂಕ್ಷ್ಮವಾಗಿ ಗ್ರಹಿಸಬೇಕು. ಕೆಲಸವನ್ನು ನಿಷ್ಠೆ,ಪ್ರಾಮಾಣಿಕತೆಯಿಂದ ಮಾಡುತ್ತೇನೆಂಬ ಸಂಕಲ್ಪ ಮತ್ತು ಶಪಥ ಮಾಡಬೇಕೆಂದು ಸಲಹೆ ನೀಡಿದರು.ಅರ್ಹರಿಗೆ ಸರ್ಕಾರಿ ಸೇವೆಗಳು ದೊರಕಬೇಕು. ಕಾನೂನಿನಡಿ ಉತ್ಪತ್ತಿಯಾಗುವ ಹಕ್ಕುಗಳ ರಕ್ಷಣೆಯಾಗಬೇಕು. ಕಾನುನಿನಡಿ ಉತ್ಪತ್ತಿಯಾಗುವ ಸೌಲತ್ತುಗಳು ಯಾವುದೇ ಒತ್ತಡಗಳಿಗೆ, ಪ್ರಲೋಬನೆಗಳಿಗೆ ಒಳಗಾಗದೆ ವಸ್ತುನಿಷ್ಠವಾಗಿ ಅರ್ಹರಿಗೆ ತಲುಪಬೇಕು. ಆಗ ನಾವು ಸರ್ಕಾರಿ ನೌಕರಿಯ ಸೇವೆಗೆ ಸೇರಿದ್ದಕ್ಕೆ ಸಾರ್ಥಕವಾಗುತ್ತದೆ. ಯಾವುದೇ ನಿರೀಕ್ಷೆ ಇಲ್ಲದೆ, ಎಲ್ಲಾ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲರ ಮನೋಭಾವನೆ ಬದಲಾವಣೆ ಆಗಬೇಕು ಎಂದು ಉಪಲೋಕಾಯುಕ್ತರು ಆಡಳಿತ ವರ್ಗಕ್ಕೆ ನೀತಿ ಪಾಠ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಿರಣ್ ಎಂ ಪಾಟೀಲ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಿಲ್ಪ, ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅತಿಕ್ ಪಾಷಾ,ಲೋಕಾಯುಕ್ತದ ಎಸ್.ಪಿ. ಆಂಟೋನಿ ಜಾನ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ದೂರುದಾರರು ಹಾಜರಿದ್ದರು.



