ಭಾರತದ ಸಾಮಾಜಿಕ ಮತ್ತು ರಾಜಕೀಯ ಚಿಂತನೆಯ ಇತಿಹಾಸದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಎಂಬ ಹೆಸರು ಒಂದು ವ್ಯಕ್ತಿಯ ಮಿತಿಯನ್ನು ಮೀರಿ ಒಂದು ಪ್ರಬಲ ಬೌದ್ಧಿಕ ಚಳವಳಿಯ ರೂಪದಲ್ಲಿ ಮೂಡಿ ಬರುತ್ತದೆ. ಅವರನ್ನು ಕೇವಲ ಸಂವಿಧಾನ ಶಿಲ್ಪಿ ಎಂದು ಸೀಮಿತಗೊಳಿಸುವುದು ಅವರ ಬಹುಆಯಾಮಿಕ ವ್ಯಕ್ತಿತ್ವಕ್ಕೆ ನ್ಯಾಯ ಮಾಡುವುದಿಲ್ಲ. ಡಾ. ಅಂಬೇಡ್ಕರ್ ಜೀವನವನ್ನು ಸಮಗ್ರವಾಗಿ ಅವಲೋಕಿಸಿದಾಗ, ಅವರ ಚಿಂತನೆಯ ಬೇರುಗಳು ಭಾರತೀಯ ಮಣ್ಣಿನಲ್ಲೇ ಆಳವಾಗಿ ನೆಲೆಸಿದ್ದವು ಎಂಬುದು ಸ್ಪಷ್ಟವಾಗುತ್ತದೆ. ಸಾಮಾಜಿಕ ಅನ್ಯಾಯದ ವಿರುದ್ಧ ಅವರ ಹೋರಾಟ ಎಷ್ಟು ತೀವ್ರವಾಗಿತ್ತೋ, ಅಷ್ಟೇ ಪ್ರಮಾಣದಲ್ಲಿ ಭಾರತದ ಏಕತೆ, ಸಂಘಟಿತ ಸಮಾಜ ಮತ್ತು ರಾಷ್ಟçದ ಭವಿಷ್ಯದ ಬಗ್ಗೆ ಅವರ ದೃಷ್ಟಿ ಗಂಭೀರವಾಗಿತ್ತು.
ಡಾ.ಅಂಬೇಡ್ಕರ್ ಅವರ ಬಾಲ್ಯವು ಸಾಮಾಜಿಕ ತಿರಸ್ಕಾರದ ಅನುಭವಗಳಿಂದ ರೂಪುಗೊಂಡಿತು. ಮಹಾರ ಸಮುದಾಯದಲ್ಲಿ ಜನಿಸಿದ ಅವರು ಅನುಭವಿಸಿದ ಅವಮಾನಗಳು ಅವರ ಮನಸ್ಸಿನಲ್ಲಿ ಪ್ರತಿಕ್ರಿಯೆ ಹುಟ್ಟಿಸಿದರೂ, ಅದು ರಾಷ್ಟ್ರ ವಿರೋಧ ದಿಕ್ಕಿನಲ್ಲಿ ಹರಿಯಲಿಲ್ಲ ಬದಲಾಗಿ ನ್ಯಾಯಸಮ್ಮತ ಮತ್ತು ಸಮಾನತೆಯ ಭಾರತವನ್ನು ನಿರ್ಮಿಸುವ ಚಿಂತನೆಗೆ ಕಾರಣವಾಯಿತು. ಅವರ ತಂದೆ ರಾಮಜಿ ಸಾಕ್ಪಾಲ್ ಸೇನಾ ಹಿನ್ನೆಲೆಯ ಶಿಸ್ತುಪಾಲಕ ವ್ಯಕ್ತಿಯಾಗಿದ್ದು, ಮನೆಯ ವಾತಾವರಣದಲ್ಲಿ ಶಿಕ್ಷಣ ಮತ್ತು ಸಂಸ್ಕಾರದ ಮೇಲೆ ವಿಶೇಷ ಒತ್ತು ನೀಡಲಾಗುತ್ತಿತ್ತು. ಈ ಕುಟುಂಬಶಿಸ್ತು ಅಂಬೇಡ್ಕರ್ ಅವರ ವ್ಯಕ್ತಿತ್ವಕ್ಕೆ ಬಲವಾದ ಆಧಾರವಾಯಿತು. ಹೀಗಾಗಿ ಅವರ ಚಿಂತನೆ ಹೊರಗಿನ ಪ್ರೇರಣೆಗಿಂತ ಹೆಚ್ಚು ಆಂತರಿಕ ಸಂಸ್ಕಾರ ಮತ್ತು ಅನುಭವಗಳ ಸಂಯೋಜನೆಯಾಗಿತ್ತು.
ಡಾ.ಅAಬೇಡ್ಕರ್ ಅವರ ವಿದ್ಯಾಭ್ಯಾಸದ ಪಯಣವು ಅವರ ಬೌದ್ಧಿಕ ವಿಸ್ತಾರವನ್ನು ರೂಪಿಸಿದ ಪ್ರಮುಖ ಹಂತವಾಗಿತ್ತು. ಬಡೋದರ ಮಹಾರಾಜರಾದ Sayajirao Gaekwad III ಅವರು ನೀಡಿದ ವಿದ್ಯಾರ್ಥಿವೇತನವು ಅಂಬೇಡ್ಕರ್ ಅವರಿಗೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ದಾರಿ ತೆರೆದಿತು. ಇದು ಕೇವಲ ಆರ್ಥಿಕ ನೆರವಲ್ಲ ಪ್ರತಿಭೆಯನ್ನು ಗುರುತಿಸಿ ರಾಷ್ಟ್ರದ ಭವಿಷ್ಯಕ್ಕಾಗಿ ಹೂಡಿಕೆ ಮಾಡಿದ ಒಂದು ದೂರದೃಷ್ಟಿಯ ನಡೆ ಆಗಿತ್ತು. ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಲಂಡನ್ ಶಾಲಾ ಆಫ್ ಎಕನಾಮಿಕ್ಸ್ನಲ್ಲಿ ಅವರು ಪಡೆದ ಶಿಕ್ಷಣವು ಅವರ ಚಿಂತನೆಗೆ ಜಾಗತಿಕ ಆಯಾಮ ನೀಡಿದರೂ, ಅವರು ಭಾರತದ ಸಾಮಾಜಿಕ ವಾಸ್ತವಿಕತೆಯನ್ನು ಎಂದಿಗೂ ಮರೆಯಲಿಲ್ಲ. ಈ ಸಂಗತಿ ಅವರ ರಾಷ್ಟ್ರೀಯ ಬದ್ಧತೆಯನ್ನು ಸೂಚಿಸುತ್ತದೆ.
ಡಾ.ಅಂಬೇಡ್ಕರ್ ಅವರ ಬದುಕಿನಲ್ಲಿ ವಿವಿಧ ಸಮುದಾಯಗಳ ವ್ಯಕ್ತಿಗಳಿಂದ ಬಂದ ಬೆಂಬಲವು ಗಮನಾರ್ಹವಾಗಿದೆ. ಅವರ ಪ್ರಾಥಮಿಕ ಶಿಕ್ಷಣದ ವೇಳೆಯಲ್ಲಿ ಬ್ರಾಹ್ಮಣ ಗುರುವಾದ ಮಹಾದೇವ್ ಅಂಬೇಡ್ಕರ್ ಅವರು ಅಂಬೇಡ್ಕರ್ ಎಂಬ ಹೆಸರನ್ನೇ ಅವರಿಗೆ ನೀಡಿದರು ಎಂಬ ಪ್ರಸಂಗವು ಸಮಾಜದ ಒಳಗಿನ ಮಾನವೀಯ ಸಂಬಂಧಗಳನ್ನು ತೋರಿಸುತ್ತದೆ. ನಂತರದ ಹಂತದಲ್ಲಿ ಕೋಲ್ಹಾಪುರದ ಪ್ರಗತಿಶೀಲ ಆಡಳಿತಗಾರರಾದ ಶಾಹು ಮಹಾರಾಜ್ ಆಫ್ ಕೊಲ್ಲಾಪುರ್ ಅವರು ಡಾ. ಅಂಬೇಡ್ಕರ್ ಅವರ ಸಾಮಾಜಿಕ ಚಳವಳಿಗಳಿಗೆ ಬಹಿರಂಗ ಬೆಂಬಲ ನೀಡಿದರು. ಇವುಗಳಿಂದ ಡಾ.ಅಂಬೇಡ್ಕರ್ ಅವರ ಹೋರಾಟವು ಒಂಟಿ ವ್ಯಕ್ತಿಯ ಪ್ರತಿಕ್ರಿಯೆಯಲ್ಲ, ಬದಲಾಗಿ ಸಮಾಜದ ಒಳಗಿನ ಸುಧಾರಣಾಶಕ್ತಿಗಳ ಸಹಯಾತ್ರೆಯಾಗಿದೆ ಎಂಬುದು ಗೋಚರಿಸುತ್ತದೆ.
ರಾಷ್ಡ್ರೀಯತೆಯ ದೃಷ್ಟಿಯಿಂದ ಡಾ.ಅಂಬೇಡ್ಕರ್ ಅವರನ್ನು ಅವಲೋಕಿಸಿದಾಗ, ಅವರು ಭಾರತದ ಏಕತೆಯ ಪ್ರಶ್ನೆಯಲ್ಲಿ ಅತ್ಯಂತ ಸ್ಪಷ್ಟ ನಿಲುವು ಹೊಂದಿದ್ದರು. ಪಾಕಿಸ್ತಾನದ ಬೇಡಿಕೆ ಕುರಿತಂತೆ ಅವರು ವ್ಯಕ್ತಪಡಿಸಿದ ಆತಂಕಗಳು ಮತ್ತು ವಿಭಜನೆಯ ಪರಿಣಾಮಗಳ ಕುರಿತು ಮಾಡಿದ ವಿಶ್ಲೇಷಣೆಗಳು ಅವರ ರಾಷ್ಟ್ರ ಚಿಂತನೆಯ ಗಂಭೀರತೆಯನ್ನು ತೋರಿಸುತ್ತವೆ. ಅವರು ಅಂಧ ಭಾವನಾತ್ಮಕತೆಗೆ ಒಳಗಾಗದೆ, ತಾರ್ಕಿಕ ರಾಷ್ಡ್ರೀಯ ಹಿತದೃಷ್ಟಿಯಿಂದ ವಿಷಯಗಳನ್ನು ಪರಿಶೀಲಿಸುತ್ತಿದ್ದರು. ಅವರ ದೃಷ್ಟಿಯಲ್ಲಿ ಸಾಮಾಜಿಕ ನ್ಯಾಯ ಮತ್ತು ರಾಷ್ಡ್ರೀಯ ಏಕತೆ ಪರಸ್ಪರ ವಿರೋಧಿಗಳಲ್ಲ ಪರಸ್ಪರ ಪೂರಕವಾದವು.
ಹಿಂದು ಸಮಾಜದ ಕುರಿತು ಡಾ. ಅಂಬೇಡ್ಕರ್ ಅವರ ವಿಮರ್ಶೆಯನ್ನು ಕೆಲವೊಮ್ಮೆ ಏಕಪಕ್ಷೀಯವಾಗಿ ಅರ್ಥೆÊಸಲಾಗಿದೆ. ವಾಸ್ತವದಲ್ಲಿ ಅವರ ವಿಮರ್ಶೆ ಧ್ವಂಸಾತ್ಮಕವಾಗಿರದೆ, ಪರಿಷ್ಕಾರಮುಖಿಯಾಗಿತ್ತು. ಸಮಾಜದ ಅಂತರಾಳದಲ್ಲಿ ಬದಲಾವಣೆ ಅಗತ್ಯವೆಂದು ಅವರು ಒತ್ತಿಹೇಳಿದರೆ ಹೊರತು, ಭಾರತದ ಸಾಂಸ್ಕೃತಿಕ ನಿರಂತರತೆಯನ್ನು ಸಂಪೂರ್ಣವಾಗಿ ತಳ್ಳಿಹಾಕುವ ನಿಲುವು ಅವರು ತೆಗೆದುಕೊಂಡಿಲ್ಲ. ಅವರ ಬರಹಗಳಲ್ಲಿ ಭಾರತೀಯ ನಾಗರಿಕತೆಯ ಐತಿಹಾಸಿಕ ಆಳದ ಬಗ್ಗೆ ಗೌರವದ ಸ್ವರ ಕಂಡುಬರುತ್ತದೆ. ಇದು ಅವರ ಚಿಂತನೆಗೆ ಸಮತೋಲನ ನೀಡುತ್ತದೆ.
ಸಂವಿಧಾನ ರಚನೆ ಪ್ರಕ್ರಿಯೆಯಲ್ಲಿ ಡಾ.ಅಂಬೇಡ್ಕರ್ ಅವರ ಪಾತ್ರವು ಅವರ ರಾಷ್ಡ್ರೀಯ ಬದ್ಧತೆಯ ಪರಮಾವಧಿಯಾಗಿದೆ. ವಿವಿಧ ಭಾಷೆಗಳು, ಧರ್ಮಗಳು ಮತ್ತು ಸಂಸ್ಕೃತಿಗಳಿಂದ ಕೂಡಿದ ದೇಶಕ್ಕೆ ಸಮತೋಲನಯುತ ಕಾನೂನು ಚೌಕಟ್ಟನ್ನು ನೀಡುವುದು ಸುಲಭದ ಕೆಲಸವಲ್ಲ. ಆದರೆ ಅವರು ರೂಪಿಸಿದ ಸಂವಿಧಾನವು ವೈವಿಧ್ಯದಲ್ಲಿನ ಏಕತೆಯನ್ನು ಕಾಯ್ದುಕೊಳ್ಳುವ ದೃಢ ವ್ಯವಸ್ಥೆಯಾಯಿತು. ಮೂಲಭೂತ ಹಕ್ಕುಗಳು, ಸಾಮಾಜಿಕ ನ್ಯಾಯ, ಪ್ರತಿನಿಧಿತ್ವ-ಇವೆಲ್ಲವೂ ರಾಷ್ಟ್ರವನ್ನು ವಿಭಜಿಸಲು ಅಲ್ಲ, ಬಲಪಡಿಸಲು ವಿನ್ಯಾಸಗೊಳಿಸಲ್ಪಟ್ಟವು. ಡಾ. ಅಂಬೇಡ್ಕರ್ ಅವರ ಪರಾವಲೋಕನದಿಂದ ನಮಗೆ ದೊರೆಯುವ ಪ್ರಮುಖ ಪಾಠವೆಂದರೆ, ರಾಷ್ಟ್ರ ನಿರ್ಮಾಣವು ಕೇವಲ ರಾಜಕೀಯ ಸ್ವಾತಂತ್ರ÷್ಯದಿAದ ಪೂರ್ಣವಾಗುವುದಿಲ್ಲ, ಸಾಮಾಜಿಕ ಸಮಾನತೆ ಮತ್ತು ಮಾನವ ಗೌರವವು ಅದರ ಅವಿಭಾಜ್ಯ ಅಂಗಗಳು. ಅವರು ಒತ್ತಿಹೇಳಿದ ಸಂವಿಧಾನಿಕ ಮಾರ್ಗ, ತಾರ್ಕಿಕ ಚಿಂತನೆ ಮತ್ತು ಸಂಘಟಿತ ಸಮಾಜದ ಅವಶ್ಯಕತೆ ಇಂದಿಗೂ ಪ್ರಸ್ತುತವಾಗಿವೆ. ಭಾರತವು ಜಾಗತಿಕ ವೇದಿಕೆಯಲ್ಲಿ ತನ್ನ ಸ್ಥಾನವನ್ನು ಬಲಪಡಿಸುತ್ತಿರುವ ಈ ಸಮಯದಲ್ಲಿ, ಅಂಬೇಡ್ಕರ್ ಅವರ ಸಮತೋಲನಯುತ ರಾಷ್ಡ್ರೀಯ ದೃಷ್ಟಿ ಹೊಸ ಅರ್ಥವನ್ನು ಪಡೆದುಕೊಳ್ಳುತ್ತದೆ.
ಇಂದು ಅವರ ಪರಂಪರೆಯನ್ನು ಮರುಪಠಣ ಮಾಡುವ ಅಗತ್ಯ ಹೆಚ್ಚಾಗಿದೆ. ಅವರನ್ನು ಕೇವಲ ಒಂದು ಸಮುದಾಯದ ನಾಯಕನಾಗಿ ಸೀಮಿತಗೊಳಿಸುವುದೂ ತಪ್ಪು ಅವರನ್ನು ಸಂಪೂರ್ಣವಾಗಿ ಒಂದು ಚಿಂತನೆಗೆ ವಿರುದ್ಧವಾಗಿ ಚಿತ್ರಿಸುವುದೂ ತಪ್ಪು. ಡಾ.ಅಂಬೇಡ್ಕರ್ ಭಾರತೀಯ ರಾಷ್ಟ್ರತೆಯ ಸಂಕೀರ್ಣ ಆದರೆ ಸೃಜನಾತ್ಮಕ ಅಧ್ಯಾಯ. ಅವರ ಮೂಲಗಳು ಭಾರತೀಯ ಮಣ್ಣಿನಲ್ಲಿ, ಅವರ ದೃಷ್ಟಿ ಜಾಗತಿಕ ವೇದಿಕೆಯಲ್ಲಿ, ಮತ್ತು ಅವರ ಆಶಯ ಸಮಾನತೆಯ ಮೇಲೆ ನಿಂತ ಏಕೀಕೃತ ಭಾರತದ ನಿರ್ಮಾಣದಲ್ಲಿತ್ತು. ಅಂತಿಮವಾಗಿ ಹೇಳುವುದಾದರೆ, ಡಾ. ಅಂಬೇಡ್ಕರ್ ಅವರ ಜೀವನ ನಮಗೆ ಒಂದು ಸ್ಪಷ್ಟ ಸಂದೇಶ ನೀಡುತ್ತದೆ: ಸಾಮಾಜಿಕ ನ್ಯಾಯವಿಲ್ಲದ ರಾಷ್ಡ್ರೀಯತೆ ದುರ್ಬಲ; ರಾಷ್ಡ್ರೀಯ ಏಕತೆಯಿಲ್ಲದ ಸಾಮಾಜಿಕ ಚಳವಳಿ ಅಪೂರ್ಣ. ಈ ಎರಡನ್ನು ಸೇರುವ ಸೇತುವೆಯೇ ಅಂಬೇಡ್ಕರ್ ಅವರ ಶಾಶ್ವತ ಕೊಡುಗೆ.
ಡಾ.ಅಂಬೇಡ್ಕರ್ ಮೂಲಗಳು ಮತ್ತು ಪರಾವಲೋಕನ ಹಿಂದು ದೃಷ್ಟಿಕೋನ ಮತ್ತು ರಾಷ್ಟ್ರೀಯ ವಿಮರ್ಶೆ



