ಹೊಸಕೋಟೆ: ಸಿಬ್ಬಂದಿಯ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಪೂರಕವಾದ ಪರಿಸರ ನಿರ್ಮಾಣ ಅಗತ್ಯವಾಗಿದೆ ಎಂದು ಬೆಂಗಳೂರು ಹಾಲು ಒಕ್ಕೂಟದ ಶಿಬಿರ ಕಚೇರಿಯ ಉಪವ್ಯವಸ್ಥಾಪಕ ಡಾ: ಶಿವಾಜಿ ನಾಯಕ್ ಹೇಳಿದರು.
ಅವರು ಸಮೀಪದ ನಗರೇನಹಳ್ಳಿ ರಸ್ತೆಯಲ್ಲಿರುವ ಡೇರಿ ಆವರಣದಲ್ಲಿ ಏರ್ಪಡಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿವರ್ಷ ಪರಿಸರ ದಿನಾಚರಣೆ ಅಂಗವಾಗಿ ಆವರಣದಲ್ಲಿ ಶುದ್ಧ ಗಾಳಿ ಪಡೆಯಲು ಅನುವಾಗುವಂತೆ ಸಸಿಗಳನ್ನು ನೆಡುತ್ತಿದ್ದು, 2022ರಲ್ಲಿ ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ 70 ತೆಂಗು ಒಳಗೊಂಡಂತೆ ಒಟ್ಟು 370 ವಿವಿಧ ಜಾತಿಯ ಸಸಿಗಳನ್ನು ನೆಡಲಾಗಿತ್ತು.
ಪ್ರಸ್ತುತ 51 ಸಸಿಗಳನ್ನು ನೆಟ್ಟಿದ್ದು ಪ್ರತಿದಿನ ಇವುಗಳ ಪಾಲನೆ, ಪೋಷಣೆಯ ಜವಾಬ್ದಾರಿಯನ್ನು ಸಿಬ್ಬಂದಿಗೆ ವಹಿಸಲಾಗಿದೆ. ವಿಶಾಲವಾದ ಸ್ಥಳದಲ್ಲಿ ಮಿನಿ ಅರಣ್ಯವನ್ನು ಹೊಂದಿದ್ದು ಇದರಿಂದ ಸಿಬ್ಬಂದಿ ವರ್ಗದವರಿಗೆ ಶುದ್ಧ ಗಾಳಿ ಪಡೆಯಲು ಸಹಕಾರಿಯಾಗಿದ್ದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗಿದೆ.
ಸಂಸ್ಥೆಯಲ್ಲಿನ ಸಿಬ್ಬಂದಿಯವರಿಗೆ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವುದು, ಹೆಚ್ಚು ಮರ ಗಿಡಗಳನ್ನು ಬೆಳೆಸುವ ಮೂಲಕ ಪರಿಸರವನ್ನು ಸಂರಕ್ಷಿಸುವುದು, ನೀರಿನ ಮೂಲಗಳನ್ನು ಸಂರಕ್ಷಣೆ ಮಾಡುವ ಬಗ್ಗೆ ಅರಿವು ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಡೇರಿ ವ್ಯವಸ್ಥಾಪಕ ಚಂದ್ರಪ್ಪ, ಶಿಬಿರ ಕಚೇರಿಯ ಸಹಾಯಕ ವ್ಯವಸ್ಥಾಪಕ ಶ್ರೀರಾಮ್, ಕೃಷಿ ಅಧಿಕಾರಿ ಸೌಮ್ಯ, ಗುಣ ನಿಯಂತ್ರಣಾಧಿಕಾರಿ ಮಧುಸೂದನ್, ಪ್ರಯೋಗಾಲಯ ಅಧಿಕಾರಿ ಮಂಜುನಾಥ್, ಭದ್ರತಾ ಸಿಬ್ಬಂದಿ ಭಾಗವಹಿಸಿದ್ದರು.
Leave a Review