ಬೇಲೂರು: ತಾಲೂಕಿನ ಹಳೆಬೀಡು ಹೋಬಳಿಯ ರಾಜನಶಿರಿಯೂರು ಗ್ರಾಮದಲ್ಲಿ ಸರ್ಕಾರಿ ಖರಾಬು ಜಮೀನಿಗೆ ರಸ್ತೆ ಒದಗಿಸುವ ವಿಚಾರವಾಗಿ ನಡೆದ ಸರ್ವೇ ಕಾರ್ಯದ ವೇಳೆ ಭಾರೀ ಗಲಾಟೆ ಸಂಭವಿಸಿ, ದೌರ್ಜನ್ಯ, ರಾಜಕೀಯ ಪ್ರಭಾವ, ಮಹಿಳೆಯರ ಮೇಲಿನ ಹಲ್ಲೆ ಹಾಗೂ ಪೊಲೀಸರ ವಿರುದ್ಧ ಸುಳ್ಳು ಆರೋಪಗಳ ಸರಮಾಲೆ ಬೆಳಕಿಗೆ ಬಂದಿದೆ. ಈ ಘಟನೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಿಸಿದ್ದು, ಕಾನೂನು ಸುವ್ಯವಸ್ಥೆ ಹಾಗೂ ಆಡಳಿತಾತ್ಮಕ ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳು ಏಳುವಂತೆ ಮಾಡಿದೆ.ರಾಜನಶಿರಿಯೂರು ಗ್ರಾಮದ ಸರ್ವೇ ನಂ.381ರಲ್ಲಿ ಸುಮಾರು 11 ಎಕರೆ 33 ಗುಂಟೆ ಸರ್ಕಾರಿ ಖರಾಬು ಜಮೀನಿದ್ದು, ಈ ಜಮೀನಿಗೆ ಸಂಪರ್ಕ ರಸ್ತೆ ಇಲ್ಲದ ಕಾರಣ ಸುಮಾರು 10 ಮನೆಗಳ ಕುಟುಂಬಗಳು ಹಲವು ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ರಸ್ತೆ ಕಲ್ಪಿಸಲು ಸರ್ಕಾರದ ಗಮನಕ್ಕೆ ತಂದಿದ್ದು, ಕಂದಾಯ ಇಲಾಖೆ ಕ್ರಮ ಕೈಗೊಂಡಿತ್ತು.ಹಿಂದಿನ ತಹಶೀಲ್ದಾರ್ ಅವಧಿಯಲ್ಲೇ ಜಮೀನಿನ ಅಳತೆ ಕಾರ್ಯ ನಡೆಸಿ ರಸ್ತೆ ಬಿಡಿಸಲು ಯೋಜನೆ ರೂಪಿಸಲಾಗಿತ್ತು. ಇದೀಗ ಉಪ ತಹಶೀಲ್ದಾರ್ ಆದೇಶದ ಮೇರೆಗೆ ಸರ್ವೇ ಕಾರ್ಯಕ್ಕೆ ಪೊಲೀಸ್ ರಕ್ಷಣೆ ಒದಗಿಸಲಾಗಿತ್ತು. ಅಧಿಕಾರಿಗಳ ಪ್ರಕಾರ, ?ಪೊಲೀಸರು ಕೇವಲ ರಕ್ಷಣೆಗೆ ಮಾತ್ರ ತೆರಳಿದ್ದು, ವಿವಾದದ ಮೂಲ ವಿಷಯಕ್ಕೆ ಅವರ ನೇರ ಸಂಬಂಧ ಇಲ್ಲ? ಎಂದು ಸ್ಪಷ್ಟಪಡಿಸಲಾಗಿದೆ.ಏಕಾಏಕಿ ದಾಳಿ ? ಗಲಾಟೆ ತಾರಕಕ್ಕೇರಿತು ಸರ್ವೇ ಕಾರ್ಯ ನಡೆಯುತ್ತಿರುವ ವೇಳೆ ಕೆಲವರು ಏಕಾಏಕಿ ಸ್ಥಳಕ್ಕೆ ಆಗಮಿಸಿ ಗಲಾಟೆ ಸೃಷ್ಟಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸ್ಥಳೀಯರ ಪ್ರಕಾರ, ಶಿವಕುಮಾರ್ ಮತ್ತು ಅವರ ಜೊತೆಗಿನ ತಂಡ ಗ್ರಾಮಸ್ಥರ ಮೇಲೆ ದೌರ್ಜನ್ಯ ನಡೆಸಿದ್ದು, ಪರಿಸ್ಥಿತಿಯನ್ನು ಹಿಂಸಾತ್ಮಕವಾಗಿ ಮಾರ್ಪಡಿಸಿದ್ದಾರೆ.
ಸರ್ಕಾರಿ ಆದೇಶದ ಮೇರೆಗೆ ನಡೆಯುತ್ತಿದ್ದ ಕಾರ್ಯಕ್ಕೆ ಅಡ್ಡಿಪಡಿಸಿ, ಅಧಿಕಾರಿಗಳ ಮೇಲೆಯೇ ದಬ್ಬಾಳಿಕೆ ತೋರಿಸಲಾಗಿದೆ. ಪೊಲೀಸ್ ಸಿಬ್ಬಂದಿಯ ಮೇಲೂ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಲಾಗಿದೆ? ಎಂದು ಸಾಕ್ಷಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಮಹಿಳೆಯರ ಮೇಲಿನ ಹಲ್ಲೆ ಆರೋಪಗಳು ಗಂಭೀರತೆ ಪಡೆದುಕೊಂಡಿವೆ. ಸುಶೀಲ ಎಂಬ ಮಹಿಳೆ ನೋವಿನಿಂದ ಘಟನೆ ವಿವರಿಸಿದ್ದು, ಆಪರೇಷನ್ ಆದ ನಂತರವೂ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗಲೇ ಕೆಲವರು ಒಳನುಗ್ಗಿ ನನ್ನನ್ನೂ, ನನ್ನ ಅಕ್ಕನನ್ನೂ ಜುಟ್ಟು ಹಿಡಿದು ಹೊರಗೆಳೆದರು ಎಂದು ಕಣ್ಣೀರಿಟ್ಟಿದ್ದಾರೆ.
ಅವರು ಮುಂದುವರೆದು, ಹೊರಗೆ ಕರೆದುಕೊಂಡು ಹೋಗಿ ಗುಂಪಿನ ಮುಂದೆ ಅವಮಾನ ಮಾಡಿದರು. ನನ್ನ ಮೇಲೆ ಮಾನಸಿಕ ಹಾಗೂ ಶಾರೀರಿಕ ಹಿಂಸೆ ನಡೆಸಿದರು. ಕೆಲ ಮಹಿಳೆಯರೂ ಹೊಡಿರಿ ಎಂದು ಪ್ರಚೋದನೆ ನೀಡಿದರು ಎಂದು ಆರೋಪಿಸಿದ್ದಾರೆ. ಘಟನೆ ಮೊಬೈಲ್ನಲ್ಲಿ ದಾಖಲಾಗಿರುವುದಾಗಿ ತಿಳಿದುಬಂದಿದ್ದು, ಇದು ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗುವ ಸಾಧ್ಯತೆ ಇದೆ.ದಲಿತ ಮುಖಂಡ ಶೇಖರ್ ಮಾತನಾಡಿ, ಇದು ಕೇವಲ ಜಮೀನು ವಿವಾದವಲ್ಲ, ದಬ್ಬಾಳಿಕೆ ಮತ್ತು ಶೋಷಣೆಯ ಸ್ಪಷ್ಟ ಉದಾಹರಣೆ. ಹಿಂದೆಯೇ ಸರ್ಕಾರದಿಂದ ರಸ್ತೆ ಬಿಡಿಸಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ ಕೆಲವರು ತಮ್ಮ ಪ್ರಭಾವ ಬಳಸಿ ಕಾರ್ಯ ಅಡ್ಡಿಪಡಿಸುತ್ತಿದ್ದಾರೆ? ಎಂದು ಆರೋಪಿಸಿದರು.
? ಪೊಲೀಸರು ಕೇವಲ ರಕ್ಷಣೆಗೆ ಬಂದಿದ್ದರೂ ಅವರಿಗೆ ಗೌರವ ಕೊಡದೇ, ಪ್ರಭಾವದ ಹೆಸರಿನಲ್ಲಿ ಬೆದರಿಕೆ ಹಾಕಲಾಗಿದೆ. ಹೆಣ್ಣುಮಕ್ಕಳ ಮೇಲಿನ ವರ್ತನೆ ಖಂಡನೀಯ? ಎಂದು ಅವರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಘಟನೆ ವೇಳೆ ಪೊಲೀಸ್ ಅಧಿಕಾರಿಗಳ ಮೇಲೆಯೂ ಗಂಭೀರ ಬೆದರಿಕೆ ಹಾಕಲಾಗಿದೆ ಎಂಬ ಮಾಹಿತಿ ದೊರೆತಿದೆ. ನಿಮ್ಮನ್ನ ಸಸ್ಪೆಂಡ್ ಮಾಡಿಸ್ತೀವಿ, ಲೋಕಾಯುಕ್ತಕ್ಕೆ ದೂರು ಕೊಡ್ತೀವಿ, ದೂರದ ಕಡೆಗೆ ವರ್ಗಾವಣೆ ಮಾಡಿಸ್ತೀವಿ ಎಂದು ಕೆಲವರು ಬೆದರಿಕೆ ಹಾಕಿದರೆಂಬ ಆರೋಪ ಕೇಳಿಬಂದಿದೆ.ಪ್ರಭಾವಿ ಸಂಪರ್ಕಗಳನ್ನು ಉಲ್ಲೇಖಿಸಿ ಅಧಿಕಾರಿಗಳ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆದಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ. ಆದರೆ ಪೊಲೀಸರು ತಾಳ್ಮೆಯಿಂದ ವರ್ತಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾಗಿರುವುದು ಗಮನಾರ್ಹವಾಗಿದೆ.ಘಟನೆಯ ನಂತರ ಸ್ಥಳೀಯರು ಪೊಲೀಸರ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ. ?ಹಳೆಬೀಡು ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಅವರ ಸಮಯೋಚಿತ ಹಾಗೂ ಧೈರ್ಯಶಾಲಿ ಕ್ರಮದಿಂದಲೇ ಇಂದು ನಮ್ಮ ಜೀವ ಉಳಿದಿದೆ. ಪರಿಸ್ಥಿತಿ ನಿಯಂತ್ರಣ ತಪ್ಪುವ ಹಂತಕ್ಕೆ ಹೋಗಿತ್ತು. ಅವರು ತಕ್ಷಣ ಮಧ್ಯಪ್ರವೇಶ ಮಾಡಿರಲಿಲ್ಲ ಅಂದರೆ ದೊಡ್ಡ ಅನಾಹುತ ಸಂಭವಿಸುತಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಸ್ಥಳೀಯರ ಪ್ರಕಾರ, ಮಂಜುನಾಥ್ ಅವರು ಗಲಾಟೆ ಮಧ್ಯೆಯೇ ಶಾಂತ ಸ್ವಭಾವದಿಂದ ಪರಿಸ್ಥಿತಿಯನ್ನು ಸಮಾಧಾನಪಡಿಸಿ, ಎರಡೂ ಪಾರ್ಶ್ವಗಳನ್ನು ನಿಯಂತ್ರಣಕ್ಕೆ ತಂದಿದ್ದು, ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿದ ಕ್ರಮ ಶ್ಲಾಘನೀಯವಾಗಿದೆ. ಅವರು ನಿಜವಾದ ಅರ್ಥದಲ್ಲಿ ಕರ್ತವ್ಯನಿಷ್ಠ ಅಧಿಕಾರಿ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬಂದಿವೆ.ಸುಳ್ಳು ಪ್ರಚಾರದ ವಿರುದ್ಧ ಆಕ್ರೋಶ ಘಟನೆಯ ಬಳಿಕ ಕೆಲವರು ಪೊಲೀಸರ ವಿರುದ್ಧ ಸುಳ್ಳು ಪ್ರಚಾರ ನಡೆಸುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ?ನಮ್ಮನ್ನು ರಕ್ಷಿಸಿದ ಅಧಿಕಾರಿಯ ಮೇಲೆಯೇ ತಪ್ಪು ಆರೋಪ ಮಾಡುವುದು ಅನ್ಯಾಯ. ಇದು ಉದ್ದೇಶಪೂರ್ವಕ ದುರಾಲೋಚನೆ? ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಪೊಲೀಸರ ವಿರುದ್ಧ ಆರೋಪ ಮಾಡುವ ಮೂಲಕ ನಿಜಾಂಶ ಮರೆಮಾಚುವ ಯತ್ನ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಬೇಕೆಂಬ ಒತ್ತಾಯ ಹೆಚ್ಚಾಗಿದೆ.
ಒಟ್ಟಿನಲ್ಲಿ, ಸರ್ಕಾರಿ ಜಮೀನಿನ ರಸ್ತೆ ವಿವಾದ ಇದೀಗ ಕೇವಲ ಸ್ಥಳೀಯ ಸಮಸ್ಯೆಯಾಗಿರದೆ, ದೌರ್ಜನ್ಯ, ರಾಜಕೀಯ ಹಸ್ತಕ್ಷೇಪ ಹಾಗೂ ಕಾನೂನು ಸುವ್ಯವಸ್ಥೆಯ ಪ್ರಶ್ನೆಯಾಗಿ ಪರಿಣಮಿಸಿದೆ. ಮಹಿಳೆಯರ ಮೇಲಿನ ಹಲ್ಲೆ ಆರೋಪಗಳು ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿವೆ.ಸಂಬಂಧಪಟ್ಟ ಅಧಿಕಾರಿಗಳು ಘಟನೆಯ ಸಂಪೂರ್ಣ ತನಿಖೆ ನಡೆಸಿ, ಸತ್ಯಾಸತ್ಯತೆ ಬಹಿರಂಗಪಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ. ಗ್ರಾಮದಲ್ಲಿ ಶಾಂತಿ ಮತ್ತು ನ್ಯಾಯ ಸ್ಥಾಪನೆಗಾಗಿ ಆಡಳಿತ ತ್ವರಿತ ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇನ್ನು ಈ ಸಂದರ್ಭದಲ್ಲಿ ಹೆಸರು ಕುಮಾರ್ ಮಾಜಿ ಮೆಂಬರ್ ಸುಶೀಲ ಗೌರಮ್ಮ ಕರಿಯಮ್ಮ ಶಿವಮ್ಮ ಗೋವಿಂದಪ್ಪ ದಲಿತ ಮುಖಂಡರು ಶೇಖರ್ ಕೃಷ್ಣ ಪ್ರಸಾದ್ ದಲಿತ ಮುಖಂಡರು ಇನ್ನು ಇತರರು ಹಾಜರಿದ್ದರು.
ಸರ್ಕಾರಿ ಜಮೀನು ಸರ್ವೇ ವೇಳೆ ಭಾರೀ ಗಲಾಟೆ: ಮಹಿಳೆಯರ ಮೇಲಿನ ದೌರ್ಜನ್ಯ ಆರೋಪ



