ದೊಡ್ಡಬಳ್ಳಾಪುರ: ದೊಡ್ಡಬೆಳವಂಗಲ ಹೋಬಳಿಯ 2100 ಎಕರೆ ಭೂಮಿಯನ್ನು ಕೆಐಎಡಿಬಿ ಭೂಸ್ವಾಧೀನ ಪಡಿಸಿಕೊಳ್ಳುವುದನ್ನು ವಿರೋಧಿಸಿ ಬೆಳವಂಗಲದಿಂದ ತಾಲೂಕು ಕಚೇರಿಯವರೆಗೆ ಮಂಗಳವಾರ ಟ್ರ್ಯಾಕ್ಟರ್ ರ್ಯಾಲಿ, ಪ್ರತಿಭಟನೆ ನಡೆಸಿದ ರೈತರು, ಯಾವುದೇ ಕಾರಣಕ್ಕೂ ನಮ್ಮ ಭೂಮಿ ನೀಡುವುದಿಲ್ಲಘೋಷಿಸಿದರು.
ಈ ಬಗ್ಗೆ ಮಾತನಾಡಿದ ಹೋರಾಟಗಾರರು, ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ, ಚಿಕ್ಕಬೆಳವಂಗಲ, ರಾಂಪುರ, ನಾರನಹಳ್ಳಿ, ಸೊಣ್ಣೆನಹಳ್ಳಿ ಗ್ರಾಮಗಳ ವ್ಯಾಪ್ತಿಯ ಸುಮಾರು 2100 ಎಕರೆ ಫಲವತ್ತಾದ ಭೂಮಿಯನ್ನು ಕೆಐಎಡಿಬಿ ಮೂಲಕ ಸರಕಾರ ಸ್ವಾಧೀನಕ್ಕೆ ಮುಂದಾಗಿದೆ. ನಮ್ಮಜಮೀನನನ್ನು ಯಾವುದೇ ಕಾರಣಕ್ಕೂ ಕೊಡುವುದಿಲ್ಲ ಎಂದರು.
ನಾವು ನಮ್ಮ ಭೂಮಿಯಲ್ಲಿ ಅಡಕೆ, ತೆಂಗು, ಸೀಬೆ, ದ್ರಾಕ್ಷಿ, ರಾಗಿ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯುತ್ತಿ ದ್ದೇವೆ. ಇಂತಹ ಭೂಮಿಯನ್ನು ಕಸಿದುಕೊಳ್ಳಲು ಸರಕಾರ ಮುಂದಾಗಿದೆ. ರೈತ ದೇಶದ ಬೆನ್ನೆಲುಬು, ಎಲ್ಲಾ ಸರಕಾರಗಳು ರೈತರಿಂದ ಭೂಮಿಯನ್ನು ಬಲವಂತವಾಗಿ ಕಬಳಿಸಿ, ರೈತರ ಬೆನ್ನು ಮುರಿಯುವ ಕೆಲಸ ಮಾಡುತ್ತಿವೆ. ನಮ್ಮ ಭೂಮಿ ನಮ್ಮಹಕ್ಕು ನಮ್ಮ ಪರಿಸರ ಸಮತೋಲನ ವಾಗಿರಬೇಕು. ನಾವು ಯಾವುದೇ ಕಾರಣಕ್ಕೂ ನಮ್ಮ ಭೂಮಿಯನ್ನು ನೀಡುವುದಿಲ್ಲ. ಮುಂದಿನ ಪೀಳಿಗೆಗೆ ಭೂಮಿಯನ್ನು ಉಳಿಸಬೇಕು ಎಂದು ಹೇಳಿದರು.
*ನೂರಾರು ಟ್ರ್ಯಾಕ್ಟರ್ಗಳಲ್ಲಿ ರ್ಯಾಲಿ*
ತಾಲೂಕಿನ ದೊಡ್ಡಬೆಳವಂಗಲ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ವತಿಯಿಂದ ತಾಲೂಕು ಕಚೇರಿಗೆ ಚಲೋವನ್ನು ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆ ನೂರಾರು ಟ್ರ್ಯಾಕ್ಟರ್ ಮೂಲಕ ಚಿಕ್ಕಬೆಳವಂಗಲದಿಂದ ತಾಲೂಕು ಕಚೇರಿಗೆ ರ್ಯಾಲಿ ನಡೆಸಲಾಯಿತು. ದೊಡ್ಡಬಳ್ಳಾಪುರ ನಗರದ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾಜಿ ಶಾಸಕ ಟಿ. ವೆಂಕಟರಮಣಯ್ಯ, ಜೆಡಿಎಸ್ ಮುಖಂಡ ಎಸ್ ಎಮ್.ಹರೀಶ್ ಗೌಡ, ಮಾಜಿ ತಾಪಂ ಅಧ್ಯಕ್ಷ ಶಶಿಧರ್, ಕನ್ನಡ ಪಕ್ಷ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್, ಸಿಐಟಿಯು ವೆಂಕಟೇಶ್, ಸಿಪಿಐಎಂ ರುದ್ರಾರಾಧ್ಯ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ಹಿರಿಯ ಕನ್ನಡ ಪರ ಹೋರಾಟಗಾರ ರಾಜಘಟ್ಟ ರವಿ, ದಲಿತ ಸಂಘಟನೆ ಮುಖಂಡರು, ಮತ್ತಿತರರು ಹಾಜರಿದ್ದರು.
ರೈತರಿಂದ ಟ್ರ್ಯಾಕ್ಟರ್ ಜಾಥಾ | ಯಾವುದೇ ಕಾರಣಕ್ಕೂ ಭೂಮಿ ನೀಡಲ್ಲ



