ಬೇಲೂರು: ಬೇಲೂರು ತಾಲ್ಲೂಕಿನಲ್ಲಿ ರೈತರಿಗೆ ಸಮರ್ಪಕ ವಿದ್ಯುತ್ ಸರಬರಾಜು ಇಲ್ಲದಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ವಿದ್ಯುತ್ ಇಲಾಖೆಯ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು. ರೈತರಿಗೆ ನೀಡಬೇಕಾದ 7 ಗಂಟೆಗಳ ವಿದ್ಯುತ್ ಸರಬರಾಜು ಸಮರ್ಪಕವಾಗಿ ದೊರೆಯುತ್ತಿಲ್ಲವೆಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ, ಮಲೆನಾಡು ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಿರುವ ನಡುವೆಯೇ ರೈತರಿಗೆ ರಾತ್ರಿ ಹೊತ್ತು ಮಾತ್ರ ವಿದ್ಯುತ್ ನೀಡಲಾಗುತ್ತಿದೆ ಎಂದು ಆರೋಪಿಸಿದರು. ಆನೆ ಹಾಗೂ ಚಿರತೆಗಳ ಕಾಟ ಇರುವ ಪರಿಸ್ಥಿತಿಯಲ್ಲಿ ರೈತರು ರಾತ್ರಿ ಹೊತ್ತು ಹೊಲಗಳಿಗೆ ಹೋಗಿ ಮೋಟಾರ್ ಆನ್ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಒಂದು ಗಂಟೆ ವಿದ್ಯುತ್ ನೀಡಿದ ಬಳಿಕ ಮರುಕ್ಷಣವೇ ಕಡಿತಗೊಳಿಸುವುದರಿಂದ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ದೇವಲಾಪುರ, ದಬ್ಬೆ, ಕರ್ಕಿಹಳ್ಳಿ ಹಾಗೂ ತೊಳಲು ಫೀಡರ್ ವ್ಯಾಪ್ತಿಯ ಗ್ರಾಮಗಳಲ್ಲಿ ರೈತರಿಗೆ ವಿದ್ಯುತ್ ಸಮಸ್ಯೆ ಹೆಚ್ಚಾಗಿದ್ದು, ಗೆಂಡೆಹಳ್ಳಿ ವಿದ್ಯುತ್ ಕೇಂದ್ರಕ್ಕೆ ಹೆಚ್ಚುವರಿ ಟ್ರಾನ್ಸ್ಫಾಮರ್ ಅಳವಡಿಸುವ ಅಗತ್ಯವಿದೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಈ ಬೇಡಿಕೆ ಈಡೇರಿಸಲಾಗಿಲ್ಲ ಎಂದು ಅವರು ಆರೋಪಿಸಿದರು.
ಇದೇ ವೇಳೆ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ಭೋಗ ಮಲ್ಲೇಶ್, ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ರೈತರಿಗೆ ವಿದ್ಯುತ್ ಅವಶ್ಯಕತೆ ಹೆಚ್ಚಿರುತ್ತದೆ. ಆದರೆ ಈ ಅವಧಿಯಲ್ಲಿ ಲೋಡ್ ಶೆಡ್ಡಿಂಗ್, ಲೈನ್ ರಿಪೇರಿ ಮುಂತಾದ ಕಾರಣಗಳನ್ನು ಹೇಳಿ ಪದೇಪದೇ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
7 ಗಂಟೆ ವಿದ್ಯುತ್ ನೀಡಬೇಕಾದರೂ ಕೇವಲ 3 ರಿಂದ 4 ಗಂಟೆ ಮಾತ್ರ ಸರಬರಾಜು ಮಾಡಲಾಗುತ್ತಿದೆ. ಆ ವಿದ್ಯುತ್ ಕೂಡ ನಿರಂತರವಾಗಿಲ್ಲದ ಕಾರಣ ಬೆಳೆಗಳಿಗೆ ಸರಿಯಾಗಿ ನೀರುಣಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಕಳೆದ ವರ್ಷ ಇದೇ ಸಮಸ್ಯೆ ಕುರಿತು ಪ್ರತಿಭಟನೆ ನಡೆಸಿದಾಗ ಒಂದು ತಿಂಗಳೊಳಗೆ ಸಮಸ್ಯೆ ಬಗೆಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಒಂದು ವರ್ಷ ಕಳೆದರೂ ಸಮಸ್ಯೆ ಬಗೆಹರಿಯದ ಕಾರಣ ಮತ್ತೆ ಹೋರಾಟಕ್ಕೆ ಮುಂದಾಗಬೇಕಾಯಿತು ಎಂದು ತಿಳಿಸಿದರು.
ಈ ವೇಳೆ ಪ್ರತಿಭಟನಾಕಾರರು ಕೆಇಬಿ ಕಚೇರಿಗೆ ತೆರಳಿ ಇಲಾಖೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ನಂಜಪ್ಪ, ತಾರಾನಾಥ್, ಶ್ರೀನಿವಾಸ್, ದಿನೇಶ್, ಸುರೇಶ್, ಸೋಮಣ್ಣ, ಹುಲಿಯಪ್ಪಗೌಡ, ಸಚಿನ್, ಬಸವರಾಜು, ಮಲ್ಲಿಕಾರ್ಜುನ ಮುತ್ತುಗನೆ, ಮಂಜುನಾಥ್ ಬೆಟ್ಟದಕೇಸರಿ, ರಂಗನಾಥ್, ಚಂದ್ರು, ಹೆತ್ತಕೆರೆ ರಮೇಶ್, ಪ್ರಸನ್ನ, ಎ.ಪಿ. ಚಂದ್ರಶೇಖರ್, ಸುರೇಶಣ್ಣ, ಅಯ್ಯಪ್ಪಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿದ್ಯುತ್ ಸಮಸ್ಯೆ ವಿರುದ್ಧ ರೈತರ ಆಕ್ರೋಶ: ಕೆಇಬಿ ಕಚೇರಿಗೆ ಮುತ್ತಿಗೆ, ಅಹೋರಾತ್ರಿ ಧರಣಿ ಎಚ್ಚರಿಕೆ



