ಮಂಡ್ಯ: ಬಟ್ಟೆ ತೊಳೆಯುವಾಗ ಕಾಲು ಜಾರಿ ಬಿದ್ದ ಬಾಲಕಿ ರಕ್ಷಣೆಗೆ ಮುಂದಾಗಿ ನಾಲ್ವರು ಮಕ್ಕಳು ನೀರುಪಾಲಾದ ದಾರುಣ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಇಬ್ಬರು ಬಾಲಕಿಯರ ಮೃತದೇಹ ಪತ್ತೆಯಾಗಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ಮುಂದುವರಿದಿದೆ.
ನೀರಿನಲ್ಲಿ ಮುಳುಗಿದ್ದ ಓರ್ವ ಬಾಲಕಿಯನ್ನು ನಿನ್ನೆಯೇ ರಕ್ಷಣೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಬಾಲಕಿ ಆಯಿಷಾ (೧೪) ಮೃತಪಟ್ಟಿದ್ದಾಳೆ. ಇಂದು ಆಫ್ರಿನ್ (೧೩) ಮೃತದೇಹ ಪತ್ತೆಯಾಗಿದೆ. ನಾಪತ್ತೆಯಾಗಿರುವ ಹನಿ (೧೪), ಥರ್ಬಿಮ್ (೧೩)ಗಾಗಿ ಹುಡುಕಾಟ ನಡೆದಿದೆ. ಮಕ್ಕಳಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.
ಮೈಸೂರಿನ ಶಾಂತಿನಗರದ ಮದರಸದಿಂದ ಮಕ್ಕಳು ಪ್ರವಾಸಕ್ಕೆ ಬಂದಿದ್ದರು. ೧೫ ಮಕ್ಕಳು ಹಾಗೂ ಮೂವರು ಸಿಬ್ಬಂದಿ ಪ್ರವಾಸಕ್ಕೆ ಪ್ರವಾಸಕ್ಕೆ ಬಂದಿದ್ದರು. ಶ್ರೀರಂಗಪಟ್ಟಣ ತಾಲೂಕಿನ ಮಂಡ್ಯ ಕೊಪ್ಪಲು ಬಳಿಯ ನಾಲೆಯಲ್ಲಿ ಈ ಅವಘಡ ಸಂಭವಿಸಿದೆ. ನಾಲೆಯಲ್ಲಿ ಇಳಿದು ಆಟವಾಡಲು ಮಕ್ಕಳು ಮುಂದಾಗಿದ್ದರು. ಈ ವೇಳೆ ನೀರಿನ ರಭಸಕ್ಕೆ ಮಕ್ಕಳು ಕೊಚ್ಚಿ ಹೋಗಿದ್ದಾರೆ.
ನಿನ್ನೆ ಸ್ಥಳೀಯರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಸಹಾಯದಿಂದ ಓರ್ವ ಬಾಲಕಿ ರಕ್ಷಣೆ ಮಾಡಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಬಾಲಕಿ ಸಾವನಪ್ಪಿದ್ದಳು.
ಮದರಸದ ಬಟ್ಟೆ ತೊಳೆಯಲು ಮಕ್ಕಳನ್ನು ಕರೆದುಕೊಂಡು ಬರಲಾಗಿತ್ತು. ಕಾವೇರಿ ಬೋರೆಯ ನಾಲೆಯ ಬಳಿಗೆ ಕರೆತರಲಾಗಿತ್ತು ಎನ್ನಲಾಗಿದೆ. ಬಟ್ಟೆ ತೊಳೆಯುವ ವೇಳೆ ಬಾಲಕಿ ಕಾಲು ಚಾರಿ ಬಿದ್ದಿದ್ದಾಳೆ. ಈ ವೇಳೆ ಆಕೆಯ ರಕ್ಷಣೆಗೆ ಮುಂದಾದ ಮೂವರು ನೀರಿನಲ್ಲಿ ಕೊಚ್ಚಿ ಹೋಗಿದ್ದರು.
“ನಾಲೆಯಲ್ಲಿ ನಾಲ್ವರು ಮಕ್ಕಳು ನಾಪತ್ತೆ: ಇಬ್ಬರು ಬಾಲಕಿಯರು ಸಾವು”



