ಬೆಂಗಳೂರು: ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಎದುರಾಗುವ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಸಿದ್ಧತೆ ನಡೆಸಿದೆ.
ಎರಡು ಚುನಾವಣೆಗಳಿಗೆ ಸಂಬಂಧಪಟ್ಟಂತೆ ಕಾಂಗ್ರೆಸ್ ಪಕ್ಷದ ವತಿಯಿಂದ ಎರಡು ಉಸ್ತುವಾರಿ ಸಮಿತಿಗಳನ್ನು ರಚಿಸಲಾಗಿದೆ.
ಉಸ್ತುವಾರಿ ಸಮಿತಿಗಳನ್ನು ರಚಿಸಿ ಕೆಪಿಸಿಸಿ ಅಧ್ಯಕ್ಷರಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ನಡೆಯಲಿರುವ ರಾಷ್ಟ್ರದ ವಿವಿಧ ರಾಜ್ಯಗಳ ವಿಧಾನಸಭೆಗಳ ಚುನಾವಣೆ ಜತೆ ಜತೆಗೆ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳು ಉಪಚುನಾವಣೆಯೂ ನಡೆಯಲಿದೆ ಎಂದು ಹೇಳಲಾಗಿದೆ.
ಹಿರಿಯ ರಾಜಕೀಯ ಮುತ್ಸದಿಗಳಾದ ಕಾಂಗ್ರೆಸ್ನ ಶ್ಯಾಮನೂರು ಶಿವಶಂಕರಪ್ಪ, ಬಾಗಲಕೋಟೆಯ ಎಚ್.ವೈ. ಮೇಟಿ ಅವರುಗಳ ನಿಧನದಿಂದ ಎರಡು ಕ್ಷೇತ್ರಗಳ ಸ್ಥಾನಗಳು ತೆರವಾಗಿವೆ.
ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಇದಕ್ಕಾಗಿ ಎರಡು ಉಪಉಸ್ತುವಾರಿ ಸಮಿತಿಗಳನ್ನು ರಚಿಸಲಾಗಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಮಂಜುನಾಥ ಭಂಡಾರಿ ಅವರ ಸಂಚಾಲಕತ್ವದಲ್ಲಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್, ಎಚ್. ಮುನಿಯಪ್ಪ, ಜಮೀರ್ ಅಹಮದ್ ಖಾನ್, ಈಶ್ವರ ಖಂಡ್ರೆ, ಕೃಷ್ಣಬೈರೇಗೌಡ, ಶರಣಪ್ರಕಾಶ ಪಾಟೀಲ್, ಪ್ರಿಯಾಂಕ್ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್, ಸಂತೋಷ್ ಲಾಡ್, ಮಧು ಬಂಗಾರಪ್ಪ, ಸಲೀಂ ಅಹ್ಮದ್, ತನ್ವೀರ್ ಸೇಟ್, ವಿ.ಆರ್. ಸುದರ್ಶನ್, ಎಚ್.ಎಂ. ರೇವಣ್ಣ, ಹೆಚ್. ಆಂಜನೇಯ ಇವರುಗಳು ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಬಾಗಲಕೋಟೆ ಕ್ಷೇತ್ರಕ್ಕೆ ವಸಂತ್ ಕುಮಾರ್ ಸಮನ್ವಯಕಾರರಾಗಿದ್ದು, ಸಚಿವರುಗಳಾದ ಆರ್ ಬಿ ತಿಮ್ಮಾಪುರ, ಸತೀಶ್ ಜಾರಕಿಹೊಳಿ, ಎಂ ಬಿ ಪಾಟೀಲ್, ಶಿವಾನಂದ ಪಾಟೀಲ, ಶಿವರಾಜ ತಂಗಡಗಿ, ಶರಣಬಸಪ್ಪ ದರ್ಶನಾಪುರ, ಬೈರತಿ ಸುರೇಶ್, ರಹೀಂ ಖಾನ್, ಸಿ.ಎಸ್. ನಾಡಗೌಡ, ರಾಜಶೇಖರ್ ಪಾಟೀಲ್, ವಿಜಯಾನಂದ ಕಾಶಪ್ಪನವರ್, ಈ.ಊ. ಜಕ್ಕಪ್ಪನವರ್, ಬಸನಗೌಡ ಬಾದರ್ಲಿ, ಸೋಮಣ್ಣ ಬೇವಿನಮರದ್ರುಗಳು ಸದಸ್ಯರುಗಳಾಗಿದ್ದಾರೆ.
ಒಟ್ಟಾರೆಯಾಗಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಈ ಎರಡು ವಿಧಾನಸಭಾ ಉಪಚುನಾವಣೆಯನ್ನು ಗೆಲ್ಲಲ್ಲು ಕಾರ್ಯತಂತ್ರ ರೂಪಿಸತೊಡಗಿದೆ.
ಉಪಚುನಾವಣೆಗೆ `ಕೈ’ ಸಿದ್ಧತೆ



