ಅಂಗ ನಿರ್ಧರಣಾ ಸಮಿತಿಯ ಸಲಹಾ ಗುಂಪಿನಿಂದ ನೆಪ್ರೋ ಯುರಾಲಜಿ ಸಂಸ್ಥೆಯ ಪ್ರಧ್ಯಾಪಕ ಡಾ ಸಿ.ಜಿ.ಶ್ರೀಧರ್ ಅವರ ಹೆಸರನ್ನು ಕೈಬಿಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ವೈದ್ಯಕೀಯ ಶಿಕ್ಷಣ ಇಲಾಖೆಯ ಇಲಾಖಾ ವಿಚಾರಣೆ ಎದುರಿಸುತ್ತಿರುವ ನೆಪ್ರೋ ಯುರಾಲಜಿ ಸಂಸ್ಥೆಯ ಪ್ರಾಧ್ಯಾಪಕ ಡಾ ಶ್ರೀಧರ್ ಹೆಸರನ್ನು ಕೈಬಿಡಲು ಆದೇಶ ನೀಡಿದ್ದಾರೆ.
ಸಮಿತಿ ರಚಿಸುವ ಸಂದರ್ಭದಲ್ಲಿ ಎಲ್ಲಾ ಅನುಮೋದಿತ ಅಂಗ ಅಂಗಕಸಿ ಕೇಂದ್ರಗಳು ಮತ್ತು ತಜ್ಞ ವೈದ್ಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಆ ಸಂದರ್ಭದಲ್ಲಿ ವಿಚಾರಣೆ ಅಥವಾ ತನಿಖೆ ಎದುರಿಸುತ್ತಿರುವ ವೈದ್ಯರ ಬಗ್ಗೆ ಇಲಾಖೆಗೆ ಯಾವುದೇ ಮಾಹಿತಿ ಲಭ್ಯವಿರಲಿಲ್ಲ. ಆರೋಪಿತ ವೈದ್ಯರನ್ನು ಇನ್ಸಿ÷್ಟಟ್ಯೂಟ್ ಆಫ್ ನೆಪ್ರೋ ಯುರಾಲಜಿ ನಿರ್ದೇಶಕರ ಶಿಫಾರಸ್ಸಿನಂತೆ ಸಮಿತಿಯಲ್ಲಿ ಸೇರಿಸಿಕೊಳ್ಳಲಾಗಿತ್ತು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸದನಕ್ಕೆ ಮಾಹಿತಿ ನೀಡಿದ್ದಾರೆ.
ಆರೋಗ್ಯ ಇಲಾಖೆ ಅಂಗ ನಿರ್ಧರಣಾ ಸಮಿತಿ ರಚಿಸಿ ಆದೇಶ ಹೊರಡಿಸಿತ್ತು. ಏಳು ಅಂಗಸಮಿತಿಗೆ ಸಲಹಾ ಗುಂಪು ರಚನೆ ಮಾಡಲಾಗಿತ್ತು. ಅದರಲ್ಲಿ ಮೂತ್ರ ಪಿಂಡ ಸಲಹಾ ಗುಂಪಿನಲ್ಲಿ ನೆಪ್ರೋ ಯುರಾಲಜಿ ಸಂಸ್ಥೆಯ ಪ್ರಾಧ್ಯಾಪಕ ಡಾ ಸಿ.ಜಿ.ಶ್ರೀಧರ್ ಅವರ ಹೆಸರನ್ನು ಸೇರಿಸಲಾಗಿತ್ತು. ಇವರ ವಿರುದ್ದ ವೈದ್ಯಕೀಯ ಶಿಕ್ಷಣ ಇಲಾಖೆಯ ಇಲಾಖಾ ವಿಚಾರಣೆ ನಡೆಯುತ್ತಿರುವುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರ ಗಮನಕ್ಕೆ ಬಂದ ಹಿನ್ನಲೆಯಲ್ಲಿ ಸಚಿವರ ಆದೇಶದಂತೆ ಡಾ ಶ್ರೀಧರ್ ಹೆಸರನ್ನು ಕೈಬಿಡಲಾಗಿದೆ.
ಡಾ ಸಿ.ಜಿ.ಶ್ರೀಧರ್ ವಿರುದ್ಧ ಇರುವ ಆರೋಪ ಏನು?
ನೆಪ್ರೋ ಯುರಾಲಜಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದ ಡಾ.ಆರ್.ಕೇಶವ್ ಮೂರ್ತಿ ಸೇರಿದಂತೆ ಈಗ ಕಾರ್ಯನಿರ್ವಹಿಸುತ್ತಿರುವ ವೈದ್ಯರಾದ ಡಾ.ಸಿ.ಜಿ.ಶ್ರೀಧರ್, ಡಾ ಪ್ರದೀಪ್, ಡಾ ಕಿಶನ್ ಹಾಗೂ ಡಾ ಶ್ರೀನಿವಾಸನ್ ವಿರುದ್ದ ಡಾ ಸುಜಾತ ಸಿದ್ದಪ್ಪ ಅವರು ೨೦೨೧ ರಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದರು. ಈ ದೂರನ್ನಾಧರಸಿ ಲೋಕಾಯುಕ್ತ ಸಂಸ್ಥೆಯು ನಾಲ್ಕು ವರ್ಷಗಳ ಕಾಲ ತನಿಖೆ ನಡೆಸಿದೆ.
ಲೋಕಾಯುಕ್ತ ತನಿಖೆಯಿಂದ ಆರೋಪಿತ ವೈದ್ಯರ ವಿರುದ್ದದ ಆರೋಪ ಸಾಬೀತಾಗಿದ್ದು, ಆ ಹಿನ್ನಲೆಯಲ್ಲಿ ಈ ವೈದ್ಯರುಗಳ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸ್ಸು ಮಾಡಿ ಲೋಕಾಯುಕ್ತ ಸಂಸ್ಥೆಯು ನಿಯಮ೧೨(೩) ರ ಅಡಿಯಲ್ಲಿ ವಿವರವಾದ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯನ್ನು ಅಧ್ಯಯನ ಮಾಡಿದ ವೈದ್ಯಕೀಯ ಶಿಕ್ಷಣ ಇಲಾಖೆಯು ಆರೋಪಿತ ವೈದ್ಯರುಗಳ ವಿರುದ್ದ ಜಂಟಿ ಇಲಾಖೆ ವಿಚಾರಣೆ ನಡೆಸಿದ್ದು, ಶೀಘ್ರದಲ್ಲೆ ವಿಚಾರಣಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ. ಈ ಕಾರಣದಿಂದ ಅಂಗನಿರ್ಧರಣಾ ಸಮಿತಿಯ ಸಲಹಾ ಗುಂಪಿನಿAದ ನೆಪ್ರೋ ಯುರಾಲಜಿ ಸಂಸ್ಥೆಯ ಪ್ರಾಧ್ಯಾಪಕ ಡಾ.ಸಿ.ಜಿ. ಶ್ರೀಧರ್ ಅವರ ಹೆಸರನ್ನು ಕೈಬಿಡಲಾಗಿದೆ.
ಆರೋಗ್ಯ ಸಚಿವರ ಕಠಿಣ ಕ್ರಮ: ಅಂಗ ನಿರ್ಧರಣಾ ಸಮಿತಿ ಹಗರಣಕ್ಕೆ ಬ್ರೇಕ್



