ಬೆಂಗಳೂರು: ಜನಪ್ರಿಯಬೆಂಗಳೂರು ಎಫ್ಸಿ ತಂಡವು ಫೆಬ್ರವರಿ ೨೨ ಭಾನುವಾರದಂದು ಸಂಜೆ ೫ ಗಂಟೆಗೆ ಶ್ರೀ ಕಂಠೀರವ ಕ್ರೀಡಾಂಗಣಕ್ಕೆ ಹೈವೋಲ್ಟೇಜ್ ಪಂದ್ಯವೊಂದನ್ನು ಆಡಲು ಸಜ್ಜಾಗುತ್ತಿದೆ. ಇಂಡಿಯನ್ ಸೂಪರ್ ಲೀಗ್ ೨೦೨೬ರ ಋತುವಿನಲ್ಲಿ ತನ್ನ ಅಮೋಘ ಆರಂಭವನ್ನು ಮುಂದುವರಿಸುವ ಗುರಿಯೊಂದಿಗೆ, ತಂಡವು ನಾರ್ತ್ಈಸ್ಟ್ ಯುನೈಟೆಡ್ ಎಫ್ಸಿ ವಿರುದ್ಧ ಕಣಕ್ಕಿಳಿಯಲಿದೆ.
ಎಸ್ಸಿ ಡೆಲ್ಲಿ ವಿರುದ್ಧದ ಆರಂಭಿಕ ಪಂದ್ಯದಲ್ಲಿ
೨-೦ ಅಂತರದ ಅಧಿಕಾರಯುತ ಜಯ ಸಾಧಿಸಿರುವ ‘ಬಿಎಫ್ ಸಿ’ ತಂಡವು ಇದೀಗ ಸಂಪೂರ್ಣ ಆತ್ಮವಿಶ್ವಾಸದಲ್ಲಿದೆ. ಆ ಪಂದ್ಯದಲ್ಲಿ ಶಿವಶಕ್ತಿ ನಾರಾಯಣನ್ ಮತ್ತು ಸುನಿಲ್ ಛೆತ್ರಿ ಗಳಿಸಿದ ಗೋಲುಗಳು ಹಾಗೂ ತಂಡದ ಭದ್ರವಾದ ರಕ್ಷಣೆ, ಬಿಎಫ್ಸಿಗೆ ಅತ್ಯುತ್ತಮ ಆರಂಭ ನೀಡಿವೆ.
ಬೆಂಗಳೂರಲ್ಲಿ ಬಿಎಫ್ಸಿ ಅಜೇಯ: ಮತ್ತೊಂದೆಡೆ, ‘ಹೈಲ್ಯಾಂಡರ್ಸ್’ (ನಾರ್ತ್ಈಸ್ಟ್ ಯುನೈಟೆಡ್) ತಂಡವು ಈಸ್ಟ್ ಬೆಂಗಾಲ್ ವಿರುದ್ಧದ ಸೋಲಿನ ಕಹಿಯನ್ನು ಮರೆತು ಗೆಲುವಿನ ಹಾದಿಗೆ ಮರಳಲು ಎದುರು ನೋಡುತ್ತಿದೆ. ಅಷ್ಟೇ ಅಲ್ಲದೆ, ೨೦೧೮ರ ನಂತರ ಬೆಂಗಳೂರಿನಲ್ಲಿ ಬೆಂಗಳೂರು ಎಫ್ಸಿ ವಿರುದ್ಧ ಈವರೆಗೂ ಗೆಲುವು ಸಾಧಿಸದ ಇತಿಹಾಸವನ್ನು ಬದಲಿಸುವ ದೊಡ್ಡ ಸವಾಲು ಅವರ ಮುಂದಿದೆ. ಕೇವಲ ೧೩ ಪಂದ್ಯಗಳ ಈ ಕಿರು ಆವೃತ್ತಿಯ ಋತುವಿನಲ್ಲಿ ಪ್ರತಿಯೊಂದು ಪಾಯಿಂಟ್ ಕೂಡ ಅತ್ಯಂತ ಮಹತ್ವದ್ದಾಗಿದೆ. ನಾರ್ತ್ಈಸ್ಟ್ ತಂಡವು ಇತ್ತೀಚೆಗೆ ಸೋತಿದ್ದರೂ ಸಹ, ಕಳೆದ ಬಾರಿ ಕಂಠೀರವದಲ್ಲಿ ೨-೨ ಡ್ರಾ ಸಾಧಿಸಿ ಪೈಪೋಟಿ ನೀಡಿದ್ದನ್ನು ನೆನಪಿಸಿಕೊಂಡಿರುವ ಕೋಚ್ ಸಿಂಗ್, ಎದುರಾಳಿಗಳ ಬಗ್ಗೆ ಎಚ್ಚರಿಕೆ ವಹಿಸಿದ್ದಾರೆ.
ಪಂದ್ಯದ ತಾಂತ್ರಿಕ ಸಿದ್ಧತೆಗಳ ಬಗ್ಗೆ ಮಾತನಾಡಿದ ಸಿಂಗ್, “ಪ್ರತಿಯೊಂದು ತಂಡವೂ ಚೆಂಡನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಬಯಸುತ್ತದೆ. ಆದರೆ ನಾವು ಹೇಗೆ ಒಟ್ಟಾಗಿ ಆಕ್ರಮಣ ಮಾಡುತ್ತೇವೆ ಮತ್ತು ರಕ್ಷಿಸುತ್ತೇವೆ ಎಂಬುದು ಮುಖ್ಯ. ಆಟಗಾರರು ತಮ್ಮ ಶ್ರೇಷ್ಠ ಪ್ರದರ್ಶನ ನೀಡಬೇಕೆಂದು ನಾನು ಬಯಸುತ್ತೇನೆ. ನಮಗೆ ಖಂಡಿತವಾಗಿಯೂ ಗೆಲುವಿನ ಅವಕಾಶಗಳು ಸಿಗಲಿವೆ,” ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರಾಹುಲ್ ಭೆಕೆ ಮತ್ತು ಚಿಂಗ್ಲೆನ್ಸಾನಾ ಸಿಂಗ್ ಅವರ ರಕ್ಷಣಾತ್ಮಕ ಪಾಲುದಾರಿಕೆಯು ನಾರ್ತ್ಈಸ್ಟ್ನ ಆಕ್ರಮಣವನ್ನು ತಡೆಯುವಲ್ಲಿ ನಿರ್ಣಾಯಕವಾಗಲಿದೆ. ತಂಡದ ಮನೋಬಲದ ಬಗ್ಗೆ ಮಾತನಾಡಿದ ಡಿಫೆಂಡರ್ ಚಿಂಗ್ಲೆನ್ಸಾನಾ ಸಿಂಗ್, “ಈ ಋತುವಿನ ಸ್ವರೂಪಕ್ಕೆ ತಕ್ಕಂತೆ ನಾವು ಪ್ರತಿ ಪಂದ್ಯವನ್ನು ಗೆಲ್ಲುವ ಮನಸ್ಥಿತಿಯೊಂದಿಗೆ ಕಣಕ್ಕಿಳಿಯಬೇಕಿದೆ,” ಎಂದರು.
ಏತನ್ಮಧ್ಯೆ ತಂಡದಲ್ಲಿ ಯಾವುದೇ ಗಾಯದ ಸಮಸ್ಯೆಗಳಿಲ್ಲದಿರುವುದು ಬೆಂಗಳೂರು ಎಫ್ಸಿಗೆ ಪ್ಲಸ್ ಪಾಯಿಂಟ್ ಆಗಿದ್ದು, ತನ್ನ ತವರು ಮೈದಾನದಲ್ಲಿ ಮತ್ತೊಂದು ರೋಚಕ ಜಯ ದಾಖಲಿಸಲು ಬಿಎಫ್ಸಿ ಸರ್ವಸನ್ನದ್ಧವಾಗಿದೆ.
ಕಂಠೀರವ ಕ್ರೀಡಾಂಗಣದಲ್ಲಿ `ಹೈ-ವೋಲ್ಟೇಜ್’ ಫುಟ್ಬಾಲ್ ಫೈಟ್



