ಕುರುಕ್ಷೇತ್ರ: “ಭಾರತ ಯುದ್ಧವನ್ನು ಬಯಸುವುದಿಲ್ಲ. ಆದರೆ ಯುದ್ಧ ಮಾಡಲು ಬಲವಂತಪಡಿಸಿದರೆ ನಾವು ಓಡಿಹೋಗುವುದಿಲ್ಲ. ನಮ್ಮನ್ನು ಕೆಣಕಿದವರಿಗೆ ಸರಿಯಾದ ಉತ್ತರವನ್ನು ನೀಡುತ್ತೇವೆ ಎಂದು ನಾವು ಜಗತ್ತಿಗೆ ತೋರಿಸಿದ್ದೇವೆ.ಆಪರೇಷನ್ ಸಿಂಧೂರ್ ಕೇವಲ ಮಿಲಿಟರಿ ಕಾರ್ಯಾಚರಣೆಯಲ್ಲ, ಬದಲಾಗಿ ಭಾರತದ ಸ್ವಯಂ ಬದ್ಧತೆ, ಸ್ವಾಭಿಮಾನ ಮತ್ತು ಆತ್ಮ ವಿಶ್ವಾಸದ ಘೋಷಣೆಯಾಗಿದೆ” ಎಂದು ರಕ್ಷಣಾ ಸಚಿವ ರಾಜನಾಥ್ಸಿಂಗ್ ಹೇಳಿದ್ದಾರೆ.
ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ ನಂತರ ಪ್ರತೀಕಾರವಾಗಿ ಭಾರತದಿಂದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಲಾಗಿತ್ತು. ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತದ ಪ್ರತಿಕ್ರಿಯೆಯು ಶ್ರೀಕೃಷ್ಣ ಪಾಂಡವರಿಗೆ ನೀಡಿದ ಸಂದೇಶದಿಂದ ರೂಪುಗೊಂಡಿದೆ. ಯುದ್ಧವನ್ನು ಎಂದಿಗೂ ಸೇಡು ಅಥವಾ ವೈಯಕ್ತಿಕ ಲಾಭಕ್ಕಾಗಿ ಮಾಡಬಾರದು, ಬದಲಿಗೆ ನ್ಯಾಯ ಮತ್ತು ಸರಿಯಾದ ನಡವಳಿಕೆಯನ್ನು ಎತ್ತಿಹಿಡಿಯಲು ಮಾಡಬೇಕು ಎಂದು ಶ್ರೀಕೃಷ್ಣ ಹೇಳಿದ್ದ. ಅದರಂತೆಯೇ ನಾವು ಕೂಡ ಆಪರೇಷನ್ ಸಿಂಧೂರ್ ನಡೆಸಿದೆವು ಎಂದಿದ್ದಾರೆ.
ಏಪ್ರಿಲ್ನಲ್ಲಿ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಮಾತನಾಡಿದ ರಾಜನಾಥ್ ಸಿಂಗ್, ಈ ಘಟನೆಯು ದೇಶದ ಸಾಮೂಹಿಕ ಆತ್ಮಸಾಕ್ಷಿಯನ್ನು ಕದಡಿಸುತ್ತಲೇ ಇದೆ. ಪ್ರವಾಸಿಗರ ಧರ್ಮದ ಬಗ್ಗೆ ಕೇಳಿ ನಂತರ ಅವರನ್ನು ಗುರಿಯಾಗಿಸಿಕೊಂಡು ಶೂಟ್ ಮಾಡಿ ಮುಗ್ಧ ಪ್ರವಾಸಿಗರ ಹತ್ಯೆ ನಡೆಸಿದ್ದು ಬಹಳ ಕ್ರೂರ ಮತ್ತು ಅಮಾನವೀಯ ಕೃತ್ಯ ಎಂದು ಅವರು ಟೀಕಿಸಿದರು.
“ಆ ಘಟನೆಯು ಭಾರತದ ಶಾಂತಿಪ್ರಿಯ ಸ್ವಭಾವವನ್ನು ಪ್ರಶ್ನಿಸಿದ್ದು ಮಾತ್ರವಲ್ಲ, ಭಯೋತ್ಪಾದಕರು ಮತ್ತು ಅವರ ಬೆಂಬಲಿಗರು ಭಾರತದ ಸಭ್ಯತೆಯೇ ಅದರ ದೌರ್ಬಲ್ಯ ಎಂದು ಭಾವಿಸಿದ್ದರು. ಆದರೆ ಭಾರತವು ಭಗವದ್ಗೀತೆಯ ದೇಶ ಎಂಬುದನ್ನು ಅವರು ಮರೆತಿದ್ದರು. ಭಗವದ್ಗೀತೆ ಯುದ್ಧಭೂಮಿಯಲ್ಲಿ ಕರುಣೆ ಮತ್ತು ಧರ್ಮವನ್ನು ರಕ್ಷಿಸಲು ಸ್ಫೂರ್ತಿ ನೀಡುತ್ತದೆ ಎಂದು ಅವರು ಸಭೆಯನ್ನುದ್ದೇಶಿಸಿ ಹೇಳಿದರು.



