ರಾಮನಗರ: `ಕರ್ನಾಟಕದ ನಿಜವಾದ ಶಿಲ್ಪಿಯಾಗಿದ್ದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು, ಕಡು ಪ್ರಾಮಾಣಿಕರಾಗಿದ್ದರು. ಮಾದರಿ ರಾಜಕಾರಣಕ್ಕೆ ಮೇಲ್ಪಂಕ್ತಿ ಹಾಕಿದ ಮುತ್ಸದ್ದಿ ರಾಜಕಾರಣಿಯಾಗಿದ್ದರು’ ಎಂದು ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಬಣ್ಣಿಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜನ ಜಾಗೃತಿ ವೇದಿಕೆ ಮತ್ತು ನಮ್ಮವರು ಬಳಗವು ಭಾನುವಾರ ಹಮ್ಮಿಕೊಂಡಿದ್ದ `ಕೆಂಗಲ್ ಹನುಮಂಗಯ್ಯ ನೆನಪು’ ಕಾರ್ಯಕ್ರಮ ಉದ್ಘಾಟಿಸಿ, ಕೆಂಗಲ್ ಅವರ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದರು.
1972ರಲ್ಲಿ ನನಗೆ ರಾಮನಗರದಿಂದ ಕಾಂಗ್ರೆಸ್ ಟಿಕೆಟ್ ಕೊಡಿಸಲು ಕೆಂಗಲ್ ಮುಂದಾಗಿದ್ದರು. ಆದರೆ, 1978ರ ಹೊತ್ತಿಗೆ ಕಾಂಗ್ರೆಸ್ ತೊರೆದು ಸ್ವರಾಜ್ಯ ಪಕ್ಷ ಸ್ಥಾಪಿಸಿದ್ದ ಅವರ ಮತ್ತು ನನ್ನ ನಡುವೆ, ರಾಮನಗರದಲ್ಲಿ ಸ್ಪರ್ಧೆ ವಿಷಯಕ್ಕೆ ಬಿರುಕುಂಟಾಯಿತು. ಕಾಂಗ್ರೆಸ್ ಕಟ್ಟಾಳಾಗಿದ್ದ ನಾನು ಅವರನ್ನು ಬೆಂಬಲಿಸಲಿಲ್ಲವೆAಬ ಕೋಪ ಅವರಿಗಿತ್ತು ಎಂದು ನೆನೆದರು.
ಖ್ಯಾತ ವಕೀಲರಾಗಿದ್ದ ಕೆಂಗಲ್ ಅವರಿಗೆ ಕಕ್ಷಿದಾರರು ಕ್ಯೂ ನಿಲ್ಲುತ್ತಿದ್ದರು. ಕ್ಯೂ ತಗ್ಗಿಸಲು ರೂ.1000 ಸಾವಿರಕ್ಕಿಂತ ಕಡಿಮೆ ಶುಲ್ಕಕ್ಕೆ ಕೇಸ್ ತೆಗೆದುಕೊಳ್ಳುವುದಿಲ್ಲ ಎಂದರೂ ಜನ ಬರುತ್ತಿದ್ದರು. ಆಗ ಅವರು ವಕೀಲಿಕೆ ಬಿಟ್ಟು ದೇಶಸೇವೆಗೆ ತೊಡಗಿಸಿಕೊಂಡರು. ಕಿರಿಯ ವಯಸ್ಸಿನಲ್ಲೇ ಮುಖ್ಯಮಂತ್ರಿ ಹುದ್ದೆಗೇರಿದರು ಎಂದರು.
ಸAವಿಧಾನ ರಚನೆ ಸಲಹಾ ಸಮಿತಿಯ ಚುನಾಯಿತ ಸದಸ್ಯರಾಗಿದ್ದ ಕೆಂಗಲ್ ಅವರನ್ನು ಅಂಬೇಡ್ಕರ್ ಮೆಚ್ಚಿಕೊಂಡಿದ್ದರು. ಒಮ್ಮೆ ಅಂಬೇಡ್ಕರ್ ಅವರು, ನೀವು ನನ್ನ ಸಂಗ ಮಾಡುವುದು ನಿಮ್ಮ ಕಾಂಗ್ರೆಸ್ನವರಿಗೆ ಇಷ್ಟವಿಲ್ಲ ಎಂದಿದ್ದರು. ಅದಕ್ಕೆ ಕೆಂಗಲ್, ನಾನು ನನ್ನ ಪಕ್ಷ ಬಿಡುವೆ. ನಿಮ್ಮ ಸಂಗವನ್ನಲ್ಲ, ಎಂದಿದ್ದರು ಎಂದು ನೆನೆದರು.
ಕೇಂದ್ರ ರೈಲ್ವೆ ಸಚಿವರಾಗಿದ್ದ ಕೆಂಗಲ್ ಅವರಿಗೆ ಇಂದಿರಾ ಗಾಂಧಿ ಅವರು ಚೀಟಿ ಕೊಟ್ಟು ಪಕ್ಷಕ್ಕೆ ಹಣ ಕೇಳುತ್ತಾರೆ. ಅದಕ್ಕೆ ಕೆಂಗಲ್ ಅವರು ಆಗಲ್ಲ. ನಾನು ಬೇರೆಯವರಿಂದ ಹಣ ಸಂಗ್ರಹಿಸಿದರೆ ಆಡಳಿತದಲ್ಲಿ ಬಿಗಿ ಹೋಗುತ್ತದೆ. ಬೇಕಿದ್ದರೆ ರಾಜೀನಾಮೆ ಕೊಡುವೆ ಎಂದಿದ್ದರು. ಆ ಬೆಳವಣಿಗೆ ಬೆನ್ನಲ್ಲೇ ಅವರು ರಾಜೀನಾಮೆ ಕೊಟ್ಟರು. ನಂತರ, ರಾಜ್ಯಪಾಲ ಸೇರಿದಂತೆ ಇತರ ಹುದ್ದೆಗಳು ಹುಡುಕಿಕೊಂಡು ಬಂದರೂ ನಯವಾಗಿಯೇ ತಿರಸ್ಕರಿಸಿ ಸ್ವಾಭಿಮಾನ ಮೆರೆದಿದ್ದರು ಎಂದರು.
ತನ್ನ ಬಗ್ಗೆ ವಸ್ತುನಿಷ್ಠವಾಗಿ ಬರೆಯಬೇಕು ಎಂದು ಪ್ರೊ.ಕೆ.ಎಸ್. ಭಗವಾನ್ ಅವರಿಗೆ ಸೂಚಿಸಿದ್ದ ಕೆಂಗಲ್, ಅವರು ಹೆಣ್ಣು ಮಕ್ಕಳ ವಿಷಯದಲ್ಲಿ ತನ್ನಿಂದ ತಪ್ಪಾಗಿದೆ ಎಂದು ಹೇಳಿಕೊಂಡಿದ್ದ ಪ್ರಾಮಾಣಿಕ ವ್ಯಕ್ತಿ. ಅಧಿಕಾರಕ್ಕೆ ಅಂಜದ ಕೆಂಗಲ್ ಅವರು, ಕರ್ನಾಟಕ ಏಕೀಕರಣಕ್ಕೆ ಮುಂದಡಿ ಇಟ್ಟು ಅದರ ರೂವಾರಿಯಾದರು. ಅದೇ ಕಾರಣಕ್ಕೆ ಅಧಿಕಾರ ಕಳೆದುಕೊಂಡರು ಎಂದು ಹೇಳಿದರು.
ಅಧ್ಯಕ್ಷತೆ ವಹಿಹಿಸಿದ್ದ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, `ಕೆಂಗಲ್ ಹನುಮಂತಯ್ಯ ಅವರು ಕಡು ಸ್ವಾಭಿಮಾನಿಯಾಗಿದ್ದರು. ಅವರ ಹಾದಿಯಲ್ಲೇ ರಾಜಕಾರಣ ಮಾಡಿ ಆದರ್ಶದ ಹಾದಿ ತೋರಿದವರು ಸಿ.ಎಂ. ಲಿಂಗಪ್ಪ. ಅವರ ಕೊಡುಗೆ ನೆನೆಯದಿದ್ದರೆ ಆತ್ಮವಂಚನೆಯಾಗುತ್ತದೆ. ಕೆಂಗಲ್ ಸ್ಮಾರಕ ಜೀರ್ಣೋದ್ದಾರ ಮಾಡುವಂತೆ ಸಿ.ಎಂ ಗಮನಕ್ಕೆ ತರಲಾಗುವುದು’ ಎಂದರು.
ರೈತ ಹೋರಾಟಗಾರ್ತಿ ಅನಸೂಯಮ್ಮ ಮಾತನಾಡಿ, ಈ ಕಾರ್ಯಕ್ರಮವು ವಿಧಾನಸೌಧದ ಹಿಂಭಾಗ ಇರುವ ಕೆಂಗಲ್ ಅವರ ಪ್ರತಿಮೆಯನ್ನು ವಿಧಾನಸೌಧದ ಮುಂಭಾಗಕ್ಕೆ ಸ್ಥಳಾಂತರ ಮಾಡುವ ಹೋರಾಟಕ್ಕೆ ಮುನ್ನುಡಿ ಬರೆಯಬೇಕು ಎಂದು ಹೇಳಿದರು.
ವೇದಿಕೆ ಕಾರ್ಯಕ್ರಮಕ್ಕೆ ಮುಂಚೆ ಹಳೆ ಬಸ್ ನಿಲ್ದಾಣದ ಬಳಿ ಸೌಂದರ್ಯೀಕರಣಗೊAಡಿರುವ ಕೆಂಗಲ್ ಪ್ರತಿಮೆಯನ್ನು ಲಿಂಗಪ್ಪ ಸೇರಿದಂತೆ ಗಣ್ಯರು ಅನಾವರಣಗೊಳಿಸಿ, ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಪ್ರತಿಮೆ ನಿರ್ಮಾಣಕ್ಕೆ ಶ್ರಮಿಸಿದ ಬಮೂಲ್ ನಿರ್ದೇಶಕ ಪಿ. ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ನಗರಸಭೆ ಸದಸ್ಯರು, ವಿವಿಧ ಸಂಘ, ಸಂಸ್ಥೆ, ಸಮುದಾಯ, ಸಂಘಟನೆಗಳ ಪದಾಧಿಕಾರಿಗಳು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮುಖಂಡರು, ಕನ್ನಡಪರ, ರೈತಪರ, ದಲಿತಪರ ಸಂಘಟನೆಗಳ ಮುಖಂಡರು ಇದ್ದರು.
ಸ್ವಾಭಿಮಾನ ಮೆರೆದಿದ್ದ ಕೆಂಗಲ್ ಹನುಮಂತಯ್ಯ `ನೆನಪು’ ಕಾರ್ಯಕ್ರಮ



