ಕೇರಳ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಲಯಾಳಂ ನಟ ಮಮ್ಮುಟ್ಟಿ ಅವರ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. 2024ರಲ್ಲಿ ಸಂಭವಿಸಿದ ಭೂಕುಸಿತದ ನಿರಾಶ್ರಿತರಿಗಾಗಿ ಕಟ್ಟಿದ ಪುನರ್ವಸತಿ ಪಟ್ಟಣಕ್ಕೆ ಮಮ್ಮುಟ್ಟಿ ಭೇಟಿ ನೀಡಿದರು. ಈ ವೇಳೆ ಅವರು ಆಡಿದ ಒಂದು ಮಾತಿನಿಂದ ಸಾಕಷ್ಟು ಟೀಕೆ ಅನುಭವಿಸಬೇಕಾಯಿತು. ಈ ಹಿನ್ನೆಲೆಯಲ್ಲಿ ಪಿಣರಾಯಿ ವಿಜಯನ್ ಕ್ಷಮೆ ಕೇಳಿದ್ದಾರೆ.
ಚೆನ್ನೈನಲ್ಲಿ ಶೂಟ್ ಮುಗಿಸಿದ ಮಮ್ಮುಟ್ಟಿ ವಯನಾಡಿನ ಪುನರ್ವಸತಿ ಭಾಗಕ್ಕೆ ಭೇಟಿ ಕೊಟ್ಟರು. ಅವರು ಈ ಬಗ್ಗೆ ಯಾರಿಗೂ ಮಾಹಿತಿ ನೀಡಿರಲಿಲ್ಲ. ಈ ಮೂಲಕ ಭೇಟಿಯನ್ನು ಅತ್ಯಂತ ಸರಳ ರೀತಿಯಲ್ಲಿ ಮುಗಿಸಲು ಬಯಸಿದ್ದರು. ಆದಾಗ್ಯೂ, ಈ ಭೇಟಿಯಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ. ರಫೀಕ್ ಅವರು ಮಮ್ಮುಟ್ಟಿ ಜೊತೆ ಇದ್ದರು. ಮಮ್ಮುಟ್ಟಿ ಅವರ ಭೇಟಿ ರಾಜಕೀಯದಿಂದ ಮುಕ್ತವಾಗಿರಬೇಕೆಂದು ಬಯಸಿದ್ದರೂ, ಕೆಲವರು ಅದನ್ನು ವಿವಾದವನ್ನಾಗಿ ಪರಿವರ್ತಿಸಿದರು.
ಭೇಟಿಯ ಸಮಯದಲ್ಲಿ ಮಮ್ಮುಟ್ಟಿ ಅವರು ರಫೀಕ್ ಜೊತೆ ಖಾಸಗಿಯಾಗಿ ಮಾತನಾಡಿದರು. `ನೀವು ನನ್ನ ಪಕ್ಕದಲ್ಲಿದ್ದರೆ, ನಾನು ನಿಮಗಾಗಿಯೇ ಇಲ್ಲಿಗೆ ಬಂದಿದ್ದೇನೆ ಎಂದು ಜನರು ಭಾವಿಸುತ್ತಾರೆ. ದಯವಿಟ್ಟು ದೂರವಿರಿ’ ಎಂದು ಮಮ್ಮುಟ್ಟಿ ತುಂಬಾ ಮೃದುವಾಗಿ ಕೇಳಿದರು. ಇದನ್ನು ಕೆಲವರು ರೆಕಾರ್ಡ್ ಮಾಡಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿಪಿಎಂ ಪರ ಕಾರ್ಯಕರ್ತರು ಮಮ್ಮುಟ್ಟಿ ಅವರನ್ನು ತೀವ್ರ ಟೀಕೆ ಮತ್ತು ನಿಂದನೆ ಮಾಡಿದ್ದಾರೆ. ಈ ಬೆಳವಣಿಗೆಗಳಿಂದ ಅಸಮಾಧಾನಗೊಂಡ ಮಮ್ಮುಟ್ಟಿ ನೇರವಾಗಿ ಕೆ.ರಫೀಕ್ ಅವರಿಗೆ ಕರೆ ಮಾಡಿ ತಮ್ಮ ಕಳವಳಗಳನ್ನು ವ್ಯಕ್ತಪಡಿಸಿದರು. ನಂತರ, ರಫೀಕ್ ಫೇಸ್ಬುಕ್ ಮೂಲಕ ಈ ವಿವಾದವನ್ನು ಕೊನೆಗೊಳಿಸುವಂತೆ ವಿನಂತಿಸಿದರು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಮುಖ್ಯಮಂತ್ರಿ ಪಿಣರಾಯಿ ಅವರು, `ಮಮ್ಮುಟ್ಟಿ ಅವರ ಭೇಟಿ ವಯನಾಡಿನ ಒಳಿತಿಗಾಗಿ ಮಾತ್ರ. ಅವರು ಅನುಭವಿಸಿದ ನೋವಿಗೆ ನಾನು ವಿಷಾದಿಸುತ್ತೇನೆ. ಕೇರಳಕ್ಕೆ ಗೌರವ ತರುವ ಮಮ್ಮುಟ್ಟಿಯಂತಹ ಮಹಾನ್ ನಟನ ಮೇಲೆ ಸಾಮಾಜಿಕ ಜಾಲತಾಣದಲ್ಲಿ ದಾಳಿ ನಡೆಸುತ್ತಿರುವುದು ಅತ್ಯಂತ ದುರದೃಷ್ಟಕರ. ಯಾರಾದರೂ ಉದ್ದೇಶಪೂರ್ವಕವಾಗಿ ಅವರಿಗೆ ನೋವುಂಟು ಮಾಡಿದ್ದರೆ, ಮುಖ್ಯಮಂತ್ರಿಯಾಗಿ ನಾನು ಅದಕ್ಕಾಗಿ ಸಾರ್ವಜನಿಕವಾಗಿ ಮಮ್ಮುಟ್ಟಿ ಬಳಿ ಕ್ಷಮೆಯಾಚಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.
ಮಮ್ಮುಟ್ಟಿ ಬಳಿ ಕ್ಷಮೆ ಕೇಳಿದ ಕೇರಳ ಸಿಎಂ



