ಬೆಂಗಳೂರು: ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ವತಿಯಿಂದ ಸಿಂಗಾಪುರದಲ್ಲಿ ನಡೆಯಲಿರುವ “ಎರಡನೇ ವಿಶ್ವ ಕನ್ನಡ ಹಬ್ಬ”ಕ್ಕೆ ಗೌರವಾನ್ವಿತ ಮೈಸೂರು ಮಹಾರಾಜರಾದ ಶ್ರೀ ಶ್ರೀ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರನ್ನು ಅಧ್ಯಕ್ಷರಾದ ಶಿವಕುಮಾರ್ ನಾಗರ ನವಿಲೆಯವರು ಆಹ್ವಾನಿಸಿದರು.
ಇದೇ ಸಂದರ್ಭದಲ್ಲಿ ಎರಡನೇ ವಿಶ್ವ ಕನ್ನಡ ಹಬ್ಬದ ರೂಪುರೇಷೆಗಳನ್ನು ಕೂಡ ತಿಳಿಸಿದರು. ಕಳೆದ ಸಾಲಿನಲ್ಲಿ ‘ ದಿನಾಂಕ 19/11/2022 ರಂದು ದುಬೈ ರಾಷ್ಟ್ರದಲ್ಲಿ ನಿಮ್ಮ ಗೌರವಾಧ್ಯಕ್ಷತೆಯಲ್ಲಿ ನಡೆದ ಮೊದಲ ‘ವಿಶ್ವ ಕನ್ನಡ ಹಬ್ಬ’ಕ್ಕೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕಾರ್ಯಕ್ರಮದ ಯಶಸ್ಸು ಮತ್ತು ಖ್ಯಾತಿ ತಮಗೆ ಸಲ್ಲುತ್ತದೆ.
ಕಾರ್ಯಕ್ರಮದಲ್ಲಿ ನಿಮ್ಮ ಉಪಸ್ಥಿತಿ ಮಹತ್ತರವಾದದ್ದು. ‘ವಿಶ್ವ ಕನ್ನಡ ಹಬ್ಬ’ದ ವಿಜಯೋತ್ಸವಕ್ಕೆ ನಿಮ್ಮ ಕೊಡುಗೆ ಅಪಾರವಾಗಿದೆ ಆದ ಕಾರಣ ಸಂಸ್ಥೆ ನಿಮಗೆ ಅಭಾರಿಯಾಗಿರುತ್ತದೆ ಎಂದು ಅಧ್ಯಕ್ಷರು ಮಹಾರಾಜರಿಗೆ ಗೌರವ ಸನ್ಮಾನದ ಮೂಲಕ ಧನ್ಯವಾದಗಳನ್ನು ತಿಳಿಸಿದರು.
ಜಗತ್ತೇ ಕೊಂಡಾಡಿದ ಮೊದಲ ವಿಶ್ವಕನ್ನಡ ಹಬ್ಬದ ಯಶಸ್ವಿಗೆ ಮೂಲ ಕಾರಣರಾದ ತಾವುಗಳು ಸಿಂಗಾಪುರದಲ್ಲಿ ನಡೆಯಲಿರುವ 2024 ನೇ ಸಾಲಿನ “ಎರಡನೇ ವಿಶ್ವ ಕನ್ನಡ ಹಬ್ಬದ” ಅಧ್ಯಕ್ಷತೆಯನ್ನು ವಹಿಸಿಕೊಳ್ಳಬೇಕೆಂಬ ಮಹದಾಸೆ ನಮ್ಮದಾಗಿದೆ ಆದ್ದರಿಂದ ತಾವು ಈ ಬಾರಿಯೂ ವಿಶ್ವ ಕನ್ನಡ ಹಬ್ಬದ ಅಧ್ಯಕ್ಷತೆಯನ್ನು ವಹಿಸಿ, ನಮ್ಮ ನಾಡಿನ ಮಹಾನ್ ಸಾಧಕರಿಗೆ “ಅಂತಾರಾಷ್ಟ್ರೀಯ ವಿಶ್ವಮಾನ್ಯ ಪ್ರಶಸ್ತಿ” ನೀಡಬೇಕೆಂದು ಮಹಾರಾಜರಲ್ಲಿ ಗೌರವಪೂರ್ವಕ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಅನೀಲ್ ಕುಮಾರ್, ಉಮೇಶ್ ಕುಮಾರ್, ವೆಂಕಟೇಶ್,ವಿಜಯ ನರಸಿಂಹ, ಕಿಶೋರ್, ಶ್ರುತಿ ಮುಂತಾದವರು ಉಪಸ್ಥಿತರಿದ್ದರು.
Leave a Review