ಬೆಂಗಳೂರು: ಕಳೆದ ವರ್ಷ ಚಾಂಪಿಯನ್ ಆಗುವುದರೊಂದಿಗೆ ಕೊನೆಗೂ 18 ವರ್ಷಗಳ ಐಪಿಎಲ್ ಪ್ರಶಸ್ತಿ ಬರ ನೀಗಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬುಧವಾರ ತವರು ಮೈದಾನ ಚಿನ್ನಸ್ವಾಮಿಯಲ್ಲಿ ಅಭ್ಯಾಸ ಆರಂಭಿಸಿದೆ. ಬುಧವಾರ ಬೆಂಗಳೂರಿನಗೆ ಆಗಮಿಸಿದ ತಂಡದ ಬ್ಯಾಟಿಂಗ್ ತಾರೆ ಹಾಗೂ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ, ನಾಯಕ ರಜತ್ ಪಾಟೀದಾರ್, ಸ್ಥಳೀಯ ಆಟಗಾರ ದೇವದತ್ ಪಡಿಕ್ಕಲ್ ಸೇರಿದಂತೆ ತಂಡದ ಬಹುತೇಕ ಸದಸ್ಯರು ನೆಟ್ಸ್ನಲ್ಲಿ ಸಾಕಷ್ಟು ಹೊತ್ತು ತಾಲೀಮು ನಡೆಸಿದರು. ಎಲ್ಲಾ ಆಟಗಾರರು ಬೌಲಿಂಗ್ ಮತ್ತು ಬ್ಯಾಟಿಂಗ್ ಜತೆಗೆ ಕ್ಷೇತ್ರ ರಕ್ಷಣೆಗೂ ಒತ್ತು ನೀಡಿದರು. ಇದರೊಂದಿಗೆ ಸುಮಾರು ಒಂದು ವರ್ಷದ ನಂತರ ಚಿನ್ನಸ್ವಾಮಿಯಲ್ಲಿ ‘ರೆಡ್ ಆರ್ಮಿ’ ರಂಗು ಮೇಳೈಸಿತು.ಕಳೆದ ಐಪಿಎಲ್ ವಿಜಯೋತ್ಸವದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ನಂತರ ಆರ್ಸಿಬಿ ಚಿನ್ನಸ್ವಾಮಿ ಮೈದಾನದಲ್ಲಿ ಕಾಣಿಸಿಕೊಂಡಿರಲಿಲ್ಲ.ಇದೇ ತಿಂಗಳ 28ರಿಂದ ಚಿನ್ನಸ್ವಾಮಿಯಲ್ಲಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ 19ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ, ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಅಭಿಯಾನ ಆರಂಭಿಸಲಿದೆ.ಮಾಸಾಂತ್ಯದಲ್ಲಿ ಮಾಲೀಕತ್ವ ಭವಿಷ್ಯ ನಿರ್ಧಾರ: ರಜತ್ ಪಾಟೀದಾರ್ ಸಾರಥ್ಯದ ಆರ್ಸಿಬಿ ಸತತ ಎರಡನೇ ಬಾರಿ ಪ್ರಶಸ್ತಿ ಉಳಿಸಿಕೊಳ್ಳಲು ಸಜ್ಜುಗೊಳ್ಳುತ್ತಿದ್ದರೆ, ಮತ್ತೊಂದೆಡೆ ಫ್ರಾಂಚೈಸಿಯ ಮಾಲೀಕತ್ವ ಬದಲಾಗುವ ಹಂತ ಅಂತಿಮಗೊಳ್ಳುತ್ತಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಇದು ಈ ಮಾಸಾಂತ್ಯಕ್ಕೆ ನಿರ್ಧಾರವಾಗುವ ಸಾಧ್ಯತೆ ದಟ್ಟವಾಗಿದೆ. ಕಾಲ್ತುಳಿತ ಘಟನೆಯಿಂದ ತೀವ್ರ ಮುಜುಗರಕ್ಕೆ ಒಳಗಾದ ಆರ್ಸಿಬಿ ಮಾಲೀಕತ್ವ ವಹಿಸಿರುವ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಡಿಯಾಜಿಯೊ ಅಂಗ ಸಂಸ್ಥೆ), ಕಳೆದ ನವೆಂಬರ್ನಲ್ಲಿ ಮಾಲೀಕತ್ವವನ್ನು ಮಾರಾಟ ಮಾಡಲು ನಿರ್ಧರಿಸಿದ ನಂತರ ಹಲವು ಸಂಸ್ಥೆಗಳು ಆರ್ಸಿಬಿ ಖರೀದಿಗೆ ಮುಂದಾಗಿವೆ. ಈ ಪೈಕಿ ಸ್ವದೇಶ್ ಪ್ರೈವೇಟ್ ಇಕ್ವಿಟಿ ಸಂಸ್ಥೆ ಮತ್ತು ಮಣಿಪಾಲ್ ಆಸ್ಪತ್ರೆಯ ರಂಜನ್ ಪೈ ಅವರ ಒಕ್ಕೂಟದಲ್ಲಿ ಅಮೆರಿಕದ ಕೆಕೆಆರ್ ಮತ್ತು ಸಿಂಗಾಪುರದ ಟೆಮಾಸೆಕ್ ಹೂಡಿಕೆ ಸಂಸ್ಥೆಗಳು ರೇಸ್ನಲ್ಲಿವೆ ಎನ್ನಲಾಗಿದೆ.
ಆರಂಭದಲ್ಲಿಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅಡಾರ್ ಪೂನಾವಾಲಾ ಅವರು ಆರ್ಸಿಬಿ ಖರೀದಿಗೆ ಮುಂದಾಗಿದ್ದವು. ಆದರೀಗ ಎರಡು ಸಂಸ್ಥೆಗಳು ಮಾತ್ರ ಅಂತಿಮ ರೇಸ್ನಲ್ಲಿವೆ. ಒಂದು ವೇಳೆ ವ್ಯವಹಾರವು ಯಶಸ್ವಿಯಾದರೆ 16 ಸಾವಿರ ಕೋಟಿ ರೂಪಾಯಿ, 18 ಸಾವಿರ ಕೋಟಿ ರೂಪಾಯಿಗೆ ಮಾರಾಟವಾಗುವ ಸಾಧ್ಯತೆ ಇದೆ. ಇದು ಐಪಿಎಲ್ ಇತಿಹಾಸದಲ್ಲಿ ದಾಖಲೆಯಾಗಲಿದೆ.
ಬೆಂಗಳೂರು ತಲುಪಿದ ಕೊಹ್ಲಿ: ತಾಲೀಮು ಶುರು!



