ಕೆ.ಆರ್.ಪೇಟೆ: ವಿಧಾನಸಭಾ ಕ್ಷೇತ್ರದ ಜನರ ಆಶೀರ್ವಾದದ ಬಲದಿಂದ ಗೆದ್ದು ಶಾಸಕರಾಗಿರುವ ಮಂಜು, ತಮ್ಮ ಶಾಸಕ ಸ್ಥಾನದ ಜವಾಬ್ದಾರಿಯನ್ನು ಅರಿತು ಮಾತನಾಡಬೇಕು, ರಾಜ್ಯ ಸರ್ಕಾರ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಶಾಸಕರು ಮಾಡಬಾರದು ಎಂದು ಕಾಂಗ್ರೆಸ್ ಹಿರಿಯ ಮುಖಂಡ ವಕೀಲ ಬಿ.ಎಲ್.ದೇವರಾಜು ತಮ್ಮ ಸಮಧಾನವನ್ನು ವ್ಯಕ್ತಪಡಿಸಿದರು.
ಅವರು ಪಟ್ಟಣದ ರಾಮದಾಸ್ ಹೋಟೆಲಿನ ಸುಲೋಚನಮ್ಮ ಪಾರ್ಟಿ ಹಾಲ್ನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಕಳೆದ ಮೂರು ವರ್ಷಗಳಿಂದ ಶಾಸಕರು ಕ್ಷೇತ್ರದ ಜನರ ಋಣ ತೀರಿಸುವ ಕೆಲಸವನ್ನು ಮಾಡುವ ಬದಲಿಗೆ ತಮ್ಮ ಸಣ್ಣ ಪುಟ್ಟ ಕೆಲಸಗಳಿಗಾಗಿ ಕ್ಷೇತ್ರದ ಬಡ ಜನರು ಹಾಗೂ ರೈತಾಪಿ ವರ್ಗದವರು ತಾಲೂಕು ಕಚೇರಿಯನ್ನು ಸುತ್ತುತ್ತಿದ್ದಾರೆ. ಅಕ್ರಮ-ಸಕ್ರಮ ಭೂ ಮಂಜೂರಾತಿ ಸಮಿತಿ, ಆರೋಗ್ಯ ರಕ್ಷಾ ಸಮಿತಿ, ಕೆಡಿಪಿ ಸಮಿತಿ, ಡೀಮ್ಡ್ ಫಾರೆಸ್ಟ್ ಒತ್ತುವರಿ ಸಮಿತಿ ಸೇರಿದಂತೆ ಹಲವು ಸಮಿತಿಗಳ ಸಭೆಯನ್ನು ಕರೆದು ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿ ಕೊಡುವ ಕೆಲಸವನ್ನು ಶಾಸಕರು ಮಾಡುತ್ತಿಲ್ಲ. ಕ್ಷೇತ್ರದಲ್ಲಿ ಈ ಹಿಂದೆ ಶಾಸಕರಾಗಿದ್ದ ಬಿ.ಪ್ರಕಾಶ್, ಕೆ.ಬಿ. ಚಂದ್ರಶೇಖರ್ ಹಾಗೂ ಕೆ.ಸಿ.ನಾರಾಯಣಗೌಡರ ಅವಧಿಯಲ್ಲಿ ಅಕ್ರಮ ಸಕ್ರಮ ಯೋಜನೆಯಲ್ಲಿ ಮಂಜೂರಾಗಿರುವ ಫಲಾನುಭವಿಗಳಿಗೆ ಭೂಮಿಯ ಹಕ್ಕುಪತ್ರ ವಿತರಿಸುವ ಕೆಲಸವನ್ನು ಮಾಡದ ಶಾಸಕರು, ಕಳೆದ ಒಂಬತ್ತು ತಿಂಗಳಿAದ ಒಂದು ಬಾರಿಗೂ ಯಾವ ಸಮಿತಿ ಸಭೆಯನ್ನು ಕರೆಯದೇ ವಿನಾ ಕಾರಣ ಕಾಲ ಕಳೆಯುತ್ತಿದ್ದಾರೆ. ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆಗಳ ಆಗರವಾಗಿದೆ. ಉದ್ಘಾಟನೆಗೆ ಸಿದ್ಧವಾಗಿರುವ ತಾಯಿ ಮಗು ಆಸ್ಪತ್ರೆಗೆ ಅಗತ್ಯವಾಗಿ ಬೇಕಾಗಿರುವ ಯಂತ್ರೋಪಕರಣಗಳು ಹಾಗೂ ಸೌಲಭ್ಯಗಳನ್ನು ಒದಗಿಸಿ ಆಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಸಮರ್ಪಿಸುವ ಕೆಲಸವನ್ನು ಮಾಡುತ್ತಿಲ್ಲ. ಸಚಿವರಾದ ಎನ್.ಚೆಲುವರಾಯಸ್ವಾಮಿ ಆಡಳಿತದಲ್ಲಿ ಸಚಿವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಅಧಿಕಾರಿಗಳು ನನ್ನ ಮಾತು ಕೇಳುತ್ತಿಲ್ಲ ಎಂದು ವಿನಾ ಕಾರಣ ಸಚಿವರ ಮೇಲೆ ಆರೋಪ ಮಾಡುತ್ತಿರುವ ಶಾಸಕರಿಗೆ ಹತಾಷ ಮನೋಭಾವನೆ ಕಾಡುತ್ತಿರಬಹುದು. ಈ ಹಿಂದಿನ ಮಾಜಿ ಶಾಸಕರು ಹಾಗೂ ತಾಲೂಕಿನ ಹಿರಿಯ ರಾಜಕೀಯ ಮುತ್ಸದ್ದಿಗಳ ಸಲಹೆ ಸೂಚನೆಯನ್ನ ಪಡೆದುಕೊಳ್ಳಬೇಕು. ಅದು ಬಿಟ್ಟು ಮಾತೆತ್ತಿದರೆ ಸಾಕು ರಾಜ್ಯ ಸರ್ಕಾರ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸುವ ಶಾಸಕರು ವಾರಕ್ಕೆ ಕನಿಷ್ಠ ಎರಡು-ಮೂರು ಅಭಿವೃದ್ಧಿ ಕೆಲಸಗಳಿಗೆ ಗುದ್ದಲಿ ಪೂಜೆ ಮಾಡುತ್ತಿದ್ದಾರೆ. ಇದು ಸರ್ಕಾರದ ಅನುದಾನದಿಂದ ನಡೆಯುತ್ತಿರುವ ಕಾಮಗಾರಿಗಳೋ ಅಲ್ಲವೋ ಎಂಬುದನ್ನು ಸ್ಪಷ್ಟಪಡಿಸಬೇಕು. ಶಾಸಕರು ವಿರೋದ ಪಕ್ಷದ ಶಾಸಕರಾಗಿದ್ದರೂ ನಮ್ಮ ಸಚಿವರು ಗೂಡೆಹೊಸಳ್ಳಿ ಏತ ನೀರಾವರಿ ಕಾಮಗಾರಿಯನ್ನು ಪೂರ್ಣಗೊಳ್ಳಲು 68 ಕೋಟಿ ರೂಪಾಯಿ ವಿಶೇಷ ಅನುದಾನ, ಕೆಶಿಪ್ ಯೋಜನೆ ಅಡಿಯಲ್ಲಿ ಶ್ರೀರಂಗಪಟ್ಟಣ- ಅರಸೀಕೆರೆ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 500 ಕೋಟಿ ರೂಪಾಯಿ ವಿಶೇಷ ಅನುದಾನ ನೀಡಿದ್ದಾರೆ ಎಂದರು.
ಪಟ್ಟಣದ ರಸ್ತೆಯ ಇಕ್ಕೇಲಗಳಲ್ಲಿ ತಳ್ಳುವ ಗಾಡಿಗಳು ಹಾಗೂ ಗೂಡಂಗಡಿಗಳನ್ನು ಇಟ್ಟುಕೊಂಡಿರುವುದರಿAದ ಶ್ರೀಸಾಮಾನ್ಯರು ಓಡಾಡಲು ಹಾಗೂ ಸುಗಮವಾಗಿ ಸಾರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದು ತಮ್ಮ ಕಣ್ಣಿಗೆ ಕಾಣುತ್ತಿಲ್ಲವೇ? ಕೃಷ್ಣ ಸರ್ಕಾರಿ ಇಂಜಿನಿಯರಿAಗ್ ಕಾಲೇಜು ಮುಂಭಾಗ ಹಾಗೂ ಲೋಕೋಪಯೋಗಿ ಕಛೇರಿ ಮುಂಭಾಗದ ಫುಟ್ಬಾತ್ ನಲ್ಲಿ ಚಾಕಣ ಅಂಗಡಿ, ಫಿಶ್ ಪ್ರೈ, ಆಮ್ಲೆಟ್, ಬಿರಿಯಾನಿ ಅಂಗಡಿ, ಟೀ ಅಂಗಡಿ ಹಾಗೂ ಕ್ಯಾಂಟೀನ್ ಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಿ ಫುಟ್ಬಾತ್ನಲ್ಲಿ ಸಾರ್ವಜನಿಕರು ಓಡಾಡಲು ಅನುವು ಮಾಡಿಕೊಡಬೇಕಾದ್ದು ಶಾಸಕರ ಕೆಲಸವಲ್ಲವೇ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಕ್ರಮ ಸಕ್ರಮ ಭೂ ಮಂಜೂರಾತಿ ಸಮಿತಿ ಸದಸ್ಯ ಬಸ್ತಿರಂಗಪ್ಪ, ಗ್ಯಾರಂಟಿ ಕಾರ್ಯಕ್ರಮಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಎ. ಬಿ.ಕುಮಾರ್, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ನಾರಾಯಣಗೌಡ, ಮಂಜುನಾಥ್, ಮುಖಂಡರಾದ ಗುಡುಗನಹಳ್ಳಿ ರಾಯಪ್ಪ, ಇಲಿಯಾಸ್ ಪಾಷ ಉಪಸ್ಥಿತರಿದ್ದರು.
`ಕೆ.ಆರ್.ಪೇಟೆ ಶಾಸಕರು ತಮ್ಮ ಸ್ಥಾನದ ಜವಾಬ್ದಾರಿ ಅರಿತು ಮಾತನಾಡಬೇಕು’



