ಬೆಂಗಳೂರು : ಗಾಂಜಾ ನಶೆಯಲ್ಲಿದ್ದ ಕಾಮುಕನೊಬ್ಬ ವಿಶೇಷ ಚೇತನ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸ್ಥಳೀಯರಿಗೆ ಸಿಕ್ಕಿಬಿದ್ದು ಧರ್ಮದೇಟು ತಿಂದು ಆಡುಗೋಡಿ ಪೊಲೀಸರ ಅತಿಥಿಯಾಗಿದ್ದಾನೆ. ಆಡುಗೋಡಿಯ ವಿಘ್ನೇಶ್ ಅಲಿಯಾಸ್ ದಾಡು ಬಂಧಿತ ಆರೋಪಿಯಾಗಿದ್ದಾನೆ, ಆರೋಪಿಯನ್ನು ಹಿಡಿದು ಥಳಿಸಿರುವ ಸ್ಥಳೀಯರು ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳೆದ ನ. ೯ರಂದು ಸಂಬಂಧಿಕರ ವಿವಾಹಕ್ಕೆ ಸಂತ್ರಸ್ತೆ ಕುಟುಂಬಸ್ಥರು ತೆರಳಿದ್ದು, ವಿಶೇಷ ಚೇತನ ಯುವತಿಯನ್ನು ಮನೆಯಲ್ಲೇ ಒಂಟಿಯಾಗಿ ಬಿಟ್ಟು ಹೋಗಿದ್ದರು.
ಬೆಳಗ್ಗೆ ೧೧ ಗಂಟೆ ಸುಮಾರಿಗೆ ಬಂದ ಗಾಂಜಾ ನಶೆಯಲ್ಲಿದ್ದ ಆರೋಪಿ ವಿಘ್ನೇಶ್, ಚಿಲಕ ಹಾಕಿದ್ದ ಮನೆಗೆ ನುಗ್ಗಿದ್ದಾನೆ. ಬಳಿಕ ಮನೆಯ ಒಳಗಿನಿಂದ ಚಿಲಕ ಹಾಕಿಕೊಂಡಿದ್ದಾನೆ.
ಈ ವೇಳೆ ಮಗಳನ್ನು ನೋಡಿಕೊಂಡು ಹೋಗೋಣ ಎಂದು ತಾಯಿ ಬಂದಾಗ ಮನೆ ಒಳಗಿನಿಂದ ಚಿಲಕ ಹಾಕಿರುವುದು ಗೊತ್ತಾಗಿದೆ. ಕಾಲಿನಿಂದ ಒದ್ದು ಆಕೆ ಬಾಗಿಲನ್ನು ತೆರೆದಿದ್ದು, ಆ ವೇಳೆಗೆ ಮಗಳ ಮೇಲೆ ಅತ್ಯಾಚಾರ ನಡೆಸಲು ಮುಂದಾಗಿದ್ದ ಆರೋಪಿ, ಆಕೆಯ ಬಟ್ಟೆಗಳನ್ನೆಲ್ಲ ತೆಗಿದಿದ್ದ. ಬಾಗಿಲು ತೆಗೆದಿದ್ದರಿಂದ ಹೆದರಿ ಅವಿತು ಕುಳಿತಿದ್ದ. ಸಂತ್ರಸ್ತೆ ತಾಯಿಯ ಕಣ್ಣಿಗೆ ಬಿದ್ದಿದ್ದೇ ತಡ, ಒಳ ಉಡುಪು ಧರಿಸಿ ಪರಾರಿಯಾಗಿದ್ದಾನೆ.
ಸಹಾಯಕ್ಕೆ ಮಹಿಳೆಯು ಕೂಗಿಕೊಂಡಾಗ ನೆರವಿಗೆ ಧಾವಿಸಿದ ಸ್ಥಳೀಯರು ಆರೋಪಿ ವಿಘ್ನೆಶ್ನನ್ನು ಹಿಡಿದು ಮನಸೋ ಇಚ್ಛೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಾತು ಬಾರದ, ಕಾಲು ಸ್ವಾಧೀನವಿಲ್ಲದ ಯುವತಿ ಮೇಲೆ ಈತ ಅತ್ಯಾಚಾರಕ್ಕೆ ಯತ್ನಿಸಿದ್ದು ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.



