ಬೆಂಗಳೂರು: ಕನ್ನಡ ಸಾಹಿತ್ಯ ವಿಸ್ತಾರಕ್ಕೆ ರಾಷ್ಟ್ರಕವಿ ಗೋವಿಂದಪೈ ಅವರ ಕೊಡುಗೆ ಅಪಾರವಾದುದು ಹಾಗೂ ಅನನ್ಯವಾದುದಾಗಿದೆ ಎಂದು ಭಾಷಾ ವಿಜ್ಞಾನಿ ಹಂಪ ನಾಗರಾಜಯ್ಯ ಅಭಿಪ್ರಾಯಪಟ್ಟರು.ಕನ್ನಡ ಸಂಘರ್ಷ ಸಮಿತಿಯು ಕನ್ನಡ ಸಾಹಿತ್ಯಪರಿಷತ್ತಿನಲ್ಲಿ ಆಯೋಜಿಸಿದ್ದ ರಾಷ್ಟ್ರಕವಿ ಎಂ. ಗೋವಿಂದಪೈ ಅವರ 144ನೇ ಹುಟ್ಟುಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕನ್ನಡವನ್ನು ಕಟ್ಟಿ, ಬೆಳೆಸಿ ಅದರ ತೇಜಸ್ಸಿಗೆ ಗೋವಿಂದಪೈ ಕಾರಣರಾಗಿದ್ದಾರೆ. ಅವರು ಮೂಲತ: ಸಂಶೋದಕರಾಗಿದ್ದರು. ಒಳ್ಳೆಯ ನಾಟಕಗಳನ್ನೂ ಸಹ ರಚಿಸಿದ್ದಾರೆ. ಅವರ ಸಂಶೋಧನಾ ಬರಹಗಳು ಮತ್ತು ಸೃಜನಾತ್ಮಕ ಸಾಹಿತ್ಯ ಭಂಡಾರವು ಅಧ್ಯಯನ ಮಾಡುವವರಿಗೆ ಹಾಗೂ ಸಂಶೋಧಕರಿಗೆ ಪ್ರೇರಣೆಯಾಗಿದೆ.
ಎಂ. ಗೋವಿಂದಪೈ ಹುಟ್ಟುಹಬ್ಬವನ್ನು ನಿರಂತರವಾಗಿ ಕನ್ನಡ ಸಂಘರ್ಷ ಸಮಿತಿ ಆಯೋಜಿಸಿಕೊಂಡು ಬರುತ್ತಿದ್ದು, ಇದು ಕನ್ನಡ ಸಾಹಿತ್ಯದ ದೊಡ್ಡ ಕವಿವಯನ್ನು ಗೌರವಿಸುವ ಹಾಗೂ ಅವರನ್ನು ಯುವ ಪೀಳಿಗೆಗೆ ಪರಿಚಯಿಸುವ ಸೂಕ್ತ ಮಾರ್ಗವಾಗಿದೆ ಎಂದು ಅಭಿಪ್ರಾಯಪಟ್ಟರು.ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ವಿಜೇತರಾದ ಜಯರಾಮ ರೈ ಕುಂಜಾಡಿಗೆ ಪ್ರಥಮ ಬಹುಮಾನ, ಡಾ. ಶ್ರೀನಿವಾಸಪ್ರಸಾದ್ ಡಿ.ಎಸ್.ಗೆ ದ್ವಿತೀಯ ಬಹುಮಾನ ಹಾಗೂ ಮೋಹನ ಯರಗೊಪ್ಪಗೆ ತೃತೀಯ ಬಹುಮಾನಗಳನ್ನು ಹಂಪ ನಾಗರಾಜಯ್ಯ ವಿತರಿಸಿದರು.ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ. ಡಿ.ಕೆ. ಚಿತ್ತಯ್ಯ ಪೂಜಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಎ.ಐ.ಬಳಸಿಕೊಂಡು ಕೃತಿಚೌರ್ಯ ಮಾಡುತ್ತಿರುವುದು ಬಹಳ ಖೇದಕರ ಸಂಗತಿಯಾಗಿದೆ. ಕವಿಯಾದವನ್ನು ಅದ್ಯಯನ ಶೀಲನಾಗಿರಬೇಕು. ತನ್ಮೂಲಕ ಜ್ಞಾನ ವೃದ್ಧಿ ಮಾಡಿಕೊಂಡು, ಸ್ವಸಾಮರ್ಥ್ಯದಿಂದ ಸಾಹಿತ್ಯ ಕೃಷಿ ಮಾಡಬೇಕು. ತಮ್ಮ ಕವಿತೆಗಳು ಹಾಗೂ ಬರಹಗಳು ಸಮಾಜ ಸೌಂದರ್ಯಗೊಳಿಸಲು ಪ್ರೇರಕಶಕ್ತಿಯಾಗುವಂತಿರಬೇಕು ಹಾಗೂ ಶೋಷಿತರಿಗೆ ನ್ಯಾಯ ಒದಗಿಸುವಂತಿರಬೇಕು ಎಂದು ಅಭಿಪ್ರಾಯಪಟ್ಟ ಅವರು, ಇಂದು ಪ್ರಪಂಚದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಅತಂಕಕಾರಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.ಸಮಿತಯ ಅಧ್ಯಕ್ಷ ಎ.ಎಸ್. ನಾಗರಾಜ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ರಾಮಣ್ಣ ಎಚ್. ಕೋಡಿಹೊಸಹಳ್ಳಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಧಾನ ಕಾರ್ಯ
ದರ್ಶಿ ತಾ.ಸಿ.ತಿಮ್ಮಯ್ಯ ಆಶಯ ಮಾತುಗಳ ಮನ್ನಾಡಿದರು. ಜಂಟಿ ಕಾರ್ಯದರ್ಶಿ ಇಂದಿರಾ ಶರಣ್ ಜಮ್ಮಲದಿನ್ನಿ ಅವರು ಕಾರ್ಯಕ್ರಮ ನಿರೂಪಿಸಿದರು. ಗಾಯಕ ಎಚ್.ಸಿ. ಉಮೇಶ್ ನಾಡಗೀತೆ ಪ್ರಸ್ತುತಪಡಿಸಿದರು.
ಕನ್ನಡ ಸಂಘರ್ಷ ಸಮಿತಿಯು ಕನ್ನಡ ಸಾಹಿತ್ಯಪರಿಷತ್ತಿನಲ್ಲಿ ಆಯೋಜಿಸಿದ್ದ ರಾಷ್ಟ್ರಕವಿ ಎಂ. ಗೋವಿಂದಪೈ ಅವರ 144ನೇ ಹುಟ್ಟುಹಬ್ಬ ಕಾರ್ಯಕ್ರಮವನ್ನು ಗೋವಿಂದಪೈ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಊದ್ಘಾಟಿಸಲಾಯಿತು. ಪ್ರಧಾನ ಕಾರ್ಯದರ್ಶಿ ತಾ.ಸಿ. ತಿಮ್ಮಯ್ಯ, ಪ್ರಾಧ್ಯಾಪಕ ಡಾ. ಡಿ.ಕೆ. ಚಿತ್ತಯ್ಯ ಪೂಜಾರ್, ಭಾಷಾ ವಿಜ್ಞಾನಿ ಹಂಪ ನಾಗರಾಜಯ್ಯ, ಹಿರಿಯ ಪತ್ರಕರ್ತ ರಾಮಣ್ಣ ಎಚ್. ಕೋಡಿಹೊಸಹಳ್ಳಿ ಹಾಗೂ ಸಮಿತಿಯ ಅಧ್ಯಕ್ಷ ಎ.ಎಸ್. ನಾಗರಾಜಸ್ವಾಮಿ ಭಾಗಿಯಾಗಿದ್ದರು.
ಕನ್ನಡ ಸಾಹಿತ್ಯಕ್ಕೆ ರಾಷ್ಟ್ರಕವಿ ಗೋವಿಂದ ಪೈ ಕೊಡುಗೆ ಅಪಾರ ಹಾಗೂ ಅನನ್ಯವಾದುದು: ಹಂಪ ನಾಗರಾಜಯ್ಯ



