ನಿರ್ದೇಶಕ ಆರ್ ಚಂದ್ರು, “ಒರಿಜಿನಲ್ ಮಾನ್ ಸ್ಟರ್” ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಆನಂದ್ ಪಂಡಿತ್ ಅರ್ಪಿಸಿ ಆರ್ ಸಿ ಸ್ಟುಡಿಯೋಸ್ ಲಾಂಛನದಲ್ಲಿ ಯಮುನಾ ಚಂದ್ರು ಅವರು ಹಿಂದಿ ಹಾಗೂ ಕನ್ನಡ ಎರಡು ಭಾಷೆಗಳಲ್ಲಿ ನಿರ್ಮಾಣಮಾಡುತ್ತಿರುವ ಶಿವರಾಜಕುಮಾರ್ ನಾಯಕರಾಗಿ ನಟಿಸುತ್ತಿರುವ “ಒರಿಜಿನಲ್ ಮಾನ್ ಸ್ಟರ್” ಚಿತ್ರದ ಮುಹೂರ್ತ ಸಮಾರಂಭ ಕೆಂಗೇರಿಯ ಮೋದಿ ಮೈದಾನದಲ್ಲಿ ನೆರವೇರಿತು.
ನೈಸ್ ಸಂಸ್ಥೆಯ ಅಶೋಕ್ ಖೇಣಿ, ಮಾಧವ ಕಿರಣ್, ನಿರ್ಮಾಪಕಉದಯ್ ಕೆ ಮೆಹ್ತ, ಗಂಗಾಧರ್ ಮುಂತಾದವರು ಉಪಸ್ಥಿತರಿದ್ದರು.
ಇತ್ತೀಚೆಗೆ ಮುಂಬೈನಲ್ಲಿ ನಮ್ಮ “ಒರಿಜಿನಲ್ ಮಾನ್ ಸ್ಟರ್” ಚಿತ್ರದ ಶೀರ್ಷಿಕೆ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತ್ತು. ಆದರೆ, ನಾನು ಚಿತ್ರರಂಗಕ್ಕೆ ಬಂದ ದಿನದಿಂದ ನನ್ನ ಪ್ರೋತ್ಸಾಹಿಸುತ್ತಾ ಬಂದಿರುವ ಇಲ್ಲಿನ ಮಾಧ್ಯಮದವರ ಸಮ್ಮುಖದಲ್ಲಿ ನಮ್ಮ ಚಿತ್ರದ ಮುಹೂರ್ತ ಸಮಾರಂಭ ಮಾಡಿ ಚಿತ್ರೀಕರಣಕ್ಕೆ ಚಾಲನೆ ನೀಡಬೇಕೆಂದು ನನ್ನ ಆಸೆಯಾಗಿತ್ತು. ಇಂದಿನಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಸೂಪರ್ ಹಿಟ್ “ಮೈಲಾರಿ” ಹಾಗೂ “ಕಬ್ಜ” ಚಿತ್ರಗಳ ನಂತರ ಶಿವರಾಜಕುಮಾರ್ ಅವರ ಅಭಿನಯದ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದಕ್ಕೆ ಖುಷಿಯಾಗಿದೆ. ಅವರ ಬೆಂಬಲ ನನಗೆ ಸದಾ ಇರುತ್ತದೆ. ತೆಲುಗಿನ ಹೆಸರಾಂತ ನಟ ಸುನೀಲ್ ಅವರು ಕೂಡ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಿಂದಿ ಹಾಗೂ ಕನ್ನಡ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಇದೊಂದು ಅದ್ದೂರಿ ಪ್ಯಾನ್ ಇಂಡಿಯಾ ಚಿತ್ರವಾಗಿ ತೆರೆಗೆ ಬರಲಿದೆ. ಭಾರತದ ಜನಪ್ರಿಯ ನಟರು ಈ ಚಿತ್ರದ ತಾರಾಬಳಗದಲ್ಲಿರುತ್ತಾರೆ. ಮುಂದಿನ ದಿನಗಳಲ್ಲಿ ಅದರ ಬಗ್ಗೆ ಮಾಹಿತಿ ನೀಡುತ್ತೇನೆ. ಬೆಂಗಳೂರಿನ ಎಚ್ ಎಂ ಟಿ ಮೈದಾನದಲ್ಲಿ ಬೃಹತ್ ಸೆಟ್ ಕೂಡ ನಿರ್ಮಾಣವಾಗಿದ್ದು, ಮೊದಲ ಹಂತದ ಚಿತ್ರೀಕರಣ ಅಲ್ಲಿ ನಡೆಯಲಿದೆ ಎಂದು ನಿರ್ದೇಶಕ ಹಾಗೂ ನಿರ್ಮಾಪಕ ಅರ್ ಚಂದ್ರು ತಿಳಿಸಿದರು.
ಆರ್ ಚಂದ್ರು ಹೇಳಿದ ಈ ಚಿತ್ರದ ಕಥೆ ಇಷ್ಟವಾಯಿತು. ಚಂದ್ರು ಅವರ ನಿರ್ದೇಶನದಲ್ಲಿ “ಮೈಲಾರಿ”, “ ಕಬ್ಜ” ಚಿತ್ರಗಳ ನಂತರ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. “ಒರಿಜಿನಲ್ ಮಾನ್ ಸ್ಟರ್”, “ ಮಾನ್ ಸ್ಟರ್ “ ಎಂದರೆ ದೈತ್ಯ ಅಂತ. ಆದರೆ ಆ ದೈತ್ಯನಲ್ಲೂ ಬರೀ ದೈತ್ಯತನವಲ್ಲದೆ ಬೇರೆ ಒಂದು ಲೈನ್ ಇದೆ. ಅದನ್ನು ಈ ಚಿತ್ರದಲ್ಲಿ ನೋಡಬಹುದು. ಇನ್ನೂ, ಚಂದ್ರು ಎಮೋಷನ್ ಅಂಶಗಳನ್ನು ಬಹಳ ಚೆನ್ನಾಗಿ ನಿರ್ದೇಶಿಸುತ್ತಾರೆ. ಈ ಚಿತ್ರದಲ್ಲಿ ಎಮೋಷನ್ ಅಂಶ ಕೂಡ ಹೈಲೆಟ್ ಆಗಲಿದೆ. ಒಟ್ಟಿನಲ್ಲಿ ನಾನು ಈವರೆಗೂ ಮಾಡಿರದ ಪಾತ್ರವಿದು. ತೆಲುಗು ಮಿಶ್ರಿತ ಕನ್ನಡದಲ್ಲಿ ನನ್ನ ಸಂಭಾಷಣೆ ಇರುತ್ತದೆ. ಸುನೀಲ್ ಅವರ ಜೊತೆಗೆ ನಟಿಸುತ್ತಿರುವುದು ಖುಷಿಯಾಗಿದೆ. ಎ ಜೆ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಹಿಂದಿ ಹಾಗೂ ಕನ್ನಡದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಆರ್ ಚಂದ್ರು ಅವರ ಜೊತೆಗೆ “ಮೈಲಾರಿ 2” ಚಿತ್ರ ಕೂಡ ಮಾಡುತ್ತೇನೆ ಎಂದರು ಶಿವರಾಜಕುಮಾರ್ ಜೊತೆಗೆ ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಸಂತೋಷವಾಗಿದೆ. ಶಿವಣ್ಣ ಅವರು ಹೇಳಿದ ಹಾಗೆ ಈ ಚಿತ್ರದ ಎಮೋಷನ್ ಅಂಶ ಎಲ್ಲರಿಗೂ ಬಹಳ ಇಷ್ಟವಾಗಲಿದೆ. ಆರ್ ಚಂದ್ರು ಉತ್ತಮವಾದ ಕಥೆ ಮಾಡಿಕೊಂಡಿದ್ದಾರೆ ಎಂದರು ನಟ ಸುನೀಲ್.