ವಿಜಯಪುರ: ದೇಶದ ಮುಂದಿನ ಪ್ರಜೆಗಳಾದ ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಗಾಗಿ ಹೆಚ್ಚಿನ ಆಧ್ಯತೆ ನೀಡುವುದರ ಜೊತೆಗೆ, ಅವರನ್ನು ರಕ್ಷಣೆ ಮಾಡುವಂತಹ ಹೊಣೆಗಾರಿಕೆ ಶಿಕ್ಷಕರು ಹಾಗೂ ಪೋಷಕರ ಮೇಲಿದೆ ಎಂದು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎ.ಆರ್.ಹನೀಪುಲ್ಲಾ ಹೇಳಿದರು.
ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು
ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಪೋಷಕರ-ಶಿಕ್ಷಕರ ಮಹಾಸಭೆ ಹಾಗೂ ಮಕ್ಕಳ ದಿನಾಚರಣೆ, ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳನ್ನು ಮೊಬೈಲ್ ನಿಂದ ದೂರವಿಡಿ, ಅವರ ಆರೋಗ್ಯದ ಬಗ್ಗೆ ಗಮನಹರಿಸಬೇಕು. ಸರಕಾರದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಅವರು ಸದುಪಯೋಗ ಮಾಡಿಕೊಳ್ಳುವಂತೆ ಪೊಷಕರು ಹೆಚ್ಚಿನ ಜವಾಬ್ದಾರಿ ಹೊರಬೇಕು ಎಂದರು.
ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶೈಲಜಾ ಮಾತನಾಡಿ, ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಮೊದಲಿಗೆ ನವೆಂಬರ್ ೨೦ ರಂದು ಮಕ್ಕಳ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿತ್ತು. ವಿಶ್ವಸಂಸ್ಥೆಯು ಸಾರ್ವತ್ರಿಕ ಮಕ್ಕಳ ದಿನ ಎಂದು ಈ ದಿನವನ್ನು ಘೋಷಣೆ ಮಾಡಿತ್ತು. ಆದರೆ ೧೯೬೪ ರ ನಂತರ ಭಾರತದಲ್ಲಿ ಮಕ್ಕಳ ದಿನಾಚರಣೆ ನವೆಂಬರ್ ೧೪ ರಂದು ಆಚರಣೆ ಆಗುತ್ತಿದೆ. ಮಕ್ಕಳ ದಿನಾಚರಣೆ ಮಾಡುವ ಮೂಲಕ ಅವರ ಹಕ್ಕುಗಳು, ಆರೈಕೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಮಹಾತ್ಮ ಗಾಂಧೀಜಿ ಅವರೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಂಡಿದ್ದ ನೆಹರು, ಗಾಂಧಿ ಅವರ ಅಹಿಂಸಾ ಹೋರಾಟವನ್ನು ಬೆಂಬಲಿಸಿದ್ದರು. ಮಕ್ಕಳನ್ನು ಹೆಚ್ಚಾಗಿ ಇಷ್ಟುಪಡುತ್ತಿದ್ದ ನೆಹರು ಅವರೇ ತಮ್ಮ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುವಂತೆ ಹೇಳಿದರು ಎಂದರು.
ವಿಜ್ಞಾನ ಶಿಕ್ಷಕ ಕೇಶವಮೂರ್ತಿ ಮಾತನಾಡಿ, ವಿಜ್ಣಾನವನ್ನು ಹೆಚ್ಚು ಪ್ರೀತಿಸಬೇಕು, ಯೋಚನೆಗಳು ಬಳಕೆಯಾಗಬೇಕು. ಇದು ವಿಜ್ಞಾನಿಗಳಾಗಲು ಸಹಕಾರಿಯಾಗುತ್ತದೆ. ಜೀವನದಲ್ಲಿ ಮೂಢನಂಬಿಕೆಗಳನ್ನು ಬಿಟ್ಟು, ಬದುಕುವುದನ್ನು ಕಲಿಯಬೇಕು. ನಿರಂತರವಾದ ಸಾಧನೆ ಮತ್ತು ಪರಿಶ್ರಮದಿಂದ ನಾವು ಸಾಧಕರಾಗಬಹುದು ಎಂದರು. ಮಕ್ಕಳಿಗಾಗಿ ಸಂವಿಧಾನದಲ್ಲಿ ಹಕ್ಕುಗಳಿವೆ. ಅವುಗಳನ್ನು ರಕ್ಷಣೆ ಮಾಡಿಕೊಳ್ಳಬೇಕು, ಶಾಲೆಗಳಲ್ಲಿ, ಇಲ್ಲವೇ ಹೊರಗಡೆಯಲ್ಲಿ ನೀವು ಅನುಭವಿಸುವಂತಹ ಕಿರುಕುಳಗಳ ಬಗ್ಗೆ ಶಾಲೆಗಳಲ್ಲಿನ ಕಾವಲು ಸಮಿತಿಗಳಿಗೆ ತಿಳಿಸಬೇಕು. ಮಕ್ಕಳ ಕಳ್ಳಸಾಗಾಣಿಕೆ ತಡೆಗಟ್ಟುವಂತಹ ಕೆಲಸವಾಗಬೇಕು, ಶಿಕ್ಷಣದ ಹಕ್ಕನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಿಕ್ಷಕ ಕರಗಪ್ಪ ಮಾಹಿತಿ ನೀಡಿದರು. ಶಾಲೆಯ ವಿದ್ಯಾರ್ಥಿಗಳು, ಹಲವಾರು ವಿಜ್ಞಾನ ಪ್ರಯೋಗಗಳನ್ನು ಮಾಡಿದ್ದರು. ಶಾಲೆಯ ಉಪಪ್ರಾಂಶುಪಾಲೆ ಚಂದ್ರಕಲಾ, ಪುರಸಭೆ ಸದಸ್ಯರಾದ ಎಂ.ಕೇಶವಪ್ಪ, ಎಂ.ನಾರಾಯಣಸ್ವಾಮಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಅಶ್ವಥ್, ಭಾರತಿ ಏರ್ ಟೆಲ್ ಫೌಂಡೇಷನ್ ನ ಪವನ್, ಸಹಶಿಕ್ಷಕ ಬಿ.ಎಸ್.ನಾರಾಯಣ್,ಸೇರಿದಂತೆ ಶಾಲೆಯ ಶಿಕ್ಷಕರು ಹಾಜರಿದ್ದರು.



