ಬೆಂಗಳೂರು: ನಾನು, ಸತೀಶ್ ಜಾರಕಿಹೊಳಿ, ಮಹದೇವಪ್ಪ ಯಾವುದೇ ಪೊಲಿಟಿಕಲ್ ಮೀಟಿಂಗ್ ಮಾಡಿಲ್ಲ ಎಂದು ಗೃಹಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಗುರುವಾರ ಮಹದೇವಪ್ಪ, ಪರಮೇಶ್ವರ್, ಸತೀಶ್ ಜಾರಕಿಹೊಳಿ ಅಪಾರ್ಟ್ಮೆಂಟ್ನಲ್ಲಿ ಸಭೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆ ಸಭೆಯಲ್ಲಿ ಯಾವುದೇ ವಿಶೇಷ ಇಲ್ಲ. ಮಾಧ್ಯಮಗಳಿಗೆ ಯಾವ ರೀತಿ ಕಣ್ಣಿಗೆ ಕಾಣಿಸುತ್ತೆ ಅಂತ ಗೊತ್ತಿಲ್ಲ. ಹಾಗೆ ಸಭೆ ಮಾಡಿರೋದು ಮೊದಲ ಬಾರಿ ಅಲ್ಲ. ಅನೇಕ ಬಾರಿ ನಾನು ಜಾರಕಿಹೊಳಿ, ಮಹದೇವಪ್ಪ ಸಭೆ ಮಾಡಿದ್ದೇವೆ. ನಾವೆಲ್ಲ ಸ್ನೇಹಿತರು, ಕೆಲವು ವಿಷಯಗಳು ಚರ್ಚೆ ಮಾಡಬೇಕು ಅಂದಾಗ ಭೇಟಿ ಮಾಡುತ್ತೇವೆ. ಅದು ಪೊಲಿಟಿಕಲ್ ಮೀಟಿಂಗ್ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಜಣ್ಣ ಮಂತ್ರಿ ಅಲ್ಲ ಅದಕ್ಕೆ ಬಂದಿರಲಿಲ್ಲ. ನಿನ್ನೆ ಕ್ಯಾಬಿನೆಟ್ ಸಭೆ ಇತ್ತು. ಕೆಲವು ವಿಷಯ ಸೂಕ್ಷ÷್ಮ ಇತ್ತು ಹಾಗೇ ಮಾತಾಡಿಕೊಂಡು, ತಿಂಡಿ ತಿಂದು ಹೋಗೋಣ ಅಂತ ಸಭೆ ಮಾಡಿದ್ವಿ. ಅದೊಂದು ಸಾಮಾನ್ಯ ಮೀಟಿಂಗ್ ಅಷ್ಟೇ. ಈ ಹಿಂದೆ ಬೇಕಾದಷ್ಟು ಬಾರಿ ನಾವು ಸಭೆ ಮಾಡಿದ್ದೇವೆ. ಇದೇನು ಮೊದಲ ಸಭೆ ಅಲ್ಲ. ಸತೀಶ್ ಜಾರಕಿಹೊಳಿ, ಮಹದೇವಪ್ಪ ಮನೆಯಲ್ಲಿ ಅನೇಕ ಬಾರಿ ಮೀಟ್ ಮಾಡಿದ್ದೇವೆ. ಹೊಸದೇನು ಅಲ್ಲ ಎಂದಿದ್ದಾರೆ.
ದಲಿತ ನಾಯಕರ ಬೇಡಿಕೆ ಕಾಂಗ್ರೆಸ್ನಲ್ಲಿ ಈಡೇರುತ್ತಿಲ್ಲ ಅಂತ ಯಾರು ಹೇಳಿದರು? ಹೆಚ್ಚುವರಿ ಡಿಸಿಎಂ ಬೇಕು ಅಂತ ನಾನು ಹೇಳಿರಲಿಲ್ಲ. ಯಾರು ಹೇಳಿದರು? ಯಾರು ಒತ್ತಾಯ ಮಾಡಿದರು? ಸತೀಶ್ ಜಾರಕಿಹೊಳಿ, ರಾಜಣ್ಣ ಒತ್ತಾಯ ಮಾಡಿರೋದು ನನಗೆ ಗೊತ್ತಿಲ್ಲ. ಸತೀಶ್ ಜಾರಕಿಹೊಳಿ, ನಾವು ಜನರಲ್ ಆಗಿ ಮಾತಾಡಿದ್ದೇವೆ. ಇದೇ ರೀತಿ ಆಗಬೇಕು ಅಂತ ನಾವ್ಯಾರು ಮಾತಾಡಿಲ್ಲ ಎಂದು ತಿಳಿಸಿದ್ದಾರೆ.
ಸಿಎಂ ಡಿನ್ನರ್ ಮೀಟಿಂಗ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಹಿಂದೆಯೂ ಅನೇಕ ಬಾರಿ ಊಟಕ್ಕೆ ಕರೆದಿದ್ದಾರೆ. ತುಂಬಾ ದಿನ ಆಗಿತ್ತು. ಹೀಗಾಗಿ ಊಟಕ್ಕೆ ಕರೆದಿದ್ದಾರೆ. ಡಿನ್ನರ್ ಕರೆಯೋದಕ್ಕೆ ಏನು ವಿಶೇಷತೆ ಇಲ್ಲ. ಊಟ ಹಾಕ್ತಾರೆ, ಊಟ ಮಾಡಿಕೊಂಡು ಬರುತ್ತೇವೆ. ಸಿಎಂ ಡಿನ್ನರ್ ಸಭೆ ಅಜೆಂಡಾ ಊಟ ಅಷ್ಟೇ. ಸಿಎಂ ಊಟಕ್ಕೆ ಕರೆದಿರೋದು ಒಂದು ಸಾಮಾನ್ಯ ಮೀಟಿಂಗ್ ಅಷ್ಟೆ. ಜಾಸ್ತಿ ದಿನ ಆಗಿದೆ ಅಂತ ಊಟಕ್ಕೆ ಕರೆದಿದ್ದಾರೆ ಎಂದು ಹೇಳಿದ್ದಾರೆ.