ಚನ್ನಪಟ್ಟಣ: ನಗರಸಭೆ ಸಭಾಂಗಣದಲ್ಲಿ ಬುಧವಾರ ಆಯವ್ಯಯ (ಬಜೆಟ್) ಸಭೆ ನಡೆಯಿತು. ಸಭೆಯಲ್ಲಿ ಅಧ್ಯಕ್ಷ ಬಿ.ಎಂ.ನಾಗೇಶ್ 2026- 27ನೇ ಸಾಲಿನ 2.76 ಕೋಟಿ ಉಳಿತಾಯ ಬಜೆಟ್ ಮಂಡಿಸಿದರು.
ನಗರಸಭೆ ಅಧ್ಯಕ್ಷರಾದ ಬಳಿಕ ಅವರು ಮಂಡಿಸಿದ ಮೊದಲ ಬಜೆಟ್ ಇದಾಗಿದ್ದು, ಅಧ್ಯಕ್ಷ ನಾಗೇಶ್ ಉಳಿತಾಯ ಬಜೆಟ್ ಬಿಡುಗಡೆಗೊಳಿಸಿ, ಆಯವ್ಯಯ ಮಂಡನೆಗೆ ಸದಸ್ಯರ ಸಹಕಾರ ಕೋರಿದರು. ಅಧ್ಯಕ್ಷರ ಪರವಾಗಿ ಲೆಕ್ಕ ಪರೀಕ್ಷಕ ಚಂದ್ರು ಆಯವ್ಯಯ ಮಂಡಿಸಿದರು. ಕೆಲವು ವಿಚಾರಕ್ಕೆ ಚರ್ಚೆ ನಡೆಸಿದ ನಂತರ ಪ್ರಸಕ್ತ ಸಾಲಿನ ಬಜೆಟ್ ಗೆ ಅನುಮೋದನೆ ಪಡೆಯಲಾಯಿತು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳು, ತೆರಿಗೆ ಸಂಗ್ರಹಗಳಿAದ ಹೆಚ್ಚಿನ ಧನ ಸಹಾಯ ನಿರೀಕ್ಷಿಸಿರುವ ಪ್ರಸಕ್ತ ಸಾಲಿನಲ್ಲಿ ವಿವಿಧ ಮೂಲಗಳಿಂದ ಒಟ್ಟು 72.35 ಕೋಟಿ ಆದಾಯ ನಿರೀಕ್ಷಿಸಲಾಗಿದ್ದು, 87.90 ಕೋಟಿ ವೆಚ್ಚ ಅಂದಾಜಿಸಲಾಗಿದೆ. 2026-27ನೇ ಸಾಲಿನಲ್ಲಿ ರಾಜಸ್ವ ಸ್ವೀಕೃತಿಗಳು 56.34ಕೋಟಿ, ರಾಜಸ್ವ ಪಾವತಿಗಳು 38.53 ಕೋಟಿ, ಬಂಡವಾಳ ಸ್ವೀಕೃತಿ 23.25 ಕೋಟಿ, ಬಂಡವಾಳ ಪಾವತಿಗಳು 55.58 ಕೋಟಿ ಎಂದು ಅಂದಾಜಿಸಲಾಗಿದೆ.ಅಸಾಧಾರಣ ಸ್ವೀಕೃತಿಗಳು 15.73. ಕೋಟಿ, ಅಸಾದಾರಣ ಪಾವತಿಗಳು 17.04ಕೋಟಿ ಎಂದು ಅಂದಾಜು ಮಾಡಲಾಗಿದೆ. ಪ್ರಾರಂಭಿಕ ಶುಲ್ಕ 18.59 ಕೋಟಿ ಇದ್ದು, ಎಲ್ಲಾ ಖರ್ಚು ಕಳೆದು 2.76 ಕೋಟಿ ಉಳಿಕೆಯನ್ನು ತೋರಿಸಲಾಗಿದೆ.72 ಕೋಟಿ ಆದಾಯ ನಿರೀಕ್ಷೆ: ಆಸ್ತಿ ತೆರಿಗೆಯಿಂದ 600 ಲಕ್ಷ , ಆಸ್ತಿ ತೆರಿಗೆ ಮೇಲೆ ಸಂಗ್ರಹಿಸಿದ ದಂಡ 300 ಲಕ್ಷ ರೂ, ಆಸ್ತಿ ತೆರಿಗೆ ಜತೆಯಲ್ಲಿ ಸಂಗ್ರಹಿಸಿಸುವ ಕರಗಳಿಂದ 140ಲಕ್ಷ ರೂ, ವಾಣಿಜ್ಯ ಮಳಿಗೆಗಳ ಬಾಡಿಗೆ ಶುಲ್ಕ 50 ಲಕ್ಷ , ಬ್ಯಾಂಕ್ ಬಡ್ಡಿ 40ಲಕ್ಷ , ಕಟ್ಟಡ ಪರವಾನಿಗೆ ಶುಲ್ಕ 36.5 ಲಕ್ಷ, ಅಭಿವೃದ್ಧಿ ಶುಲ್ಕ 10 ಲಕ್ಷ , 15 ಮತ್ತು 16 ನೇ ಹಣಕಾಸು ಯೋಜನೆ ಅನುದಾನ 900 ಲಕ್ಷ , ಎಸ್.ಎಫ್.ಸಿ. ಮುಕ್ತ ನಿಧಿ ಅನುದಾನ (ಎಸ್ಸಿಪಿ. ಟಿಎಸ್ಪಿ) 19 ಲಕ್ಷ , ಎಸ್.ಎಫ್.ಸಿ. ವೇತನ ಅನುದಾನ 130 ಲಕ್ಷ , ಎಸ್ಎಫ್ಸಿ ಕುಡಿಯುವ ನೀರಿನ ಅನುದಾನ 10 ಲಕ್ಷ , ಎಸ್.ಎಫ್.ಸಿ. ವಿದ್ಯುತ್ ಅನುದಾನ 270 ಲಕ್ಷ , ಸ್ವಚ್ಛ ಭಾರತ್ ಅನುದಾನ 190 ಲಕ್ಷ , ಎಸ್.ಎಫ್.ಸಿ. ವಿಶೇಷ ಅನುದಾನ 2007 ಲಕ್ಷ ಸೇರಿದಂತೆ ವಿವಿಧ ಮೂಲಗಳಿಂದ 7208 ಲಕ್ಷ ರೂ.ಗಳ ಆದಾಯವನ್ನು ನಿರೀಕ್ಷೆ ಮಾಡಲಾಗಿದೆ.ಖರ್ಚಿನ ಲೆಕ್ಕವೇನು: ನಗರದ ಸಮಗ್ರ ಅಭಿವೃದ್ಧಿ ಮತ್ತು ಜನತೆಗೆ ಉತ್ತಮ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಮಾನವ ಸಂಪನ್ಮೂಲ ವೆಚ್ಚ ರೂ.700 ಲಕ್ಷ , ವಾಹನಗಳ ಬಾಡಿಗೆ ಮತ್ತು ಇತರೆ 35 ಲಕ್ಷ , ಕಾನೂನು ಮತ್ತು ವೃತ್ತಿಪರ ವೆಚ್ಚಗಳು 48 ಲಕ್ಷ , ಸದಸ್ಯರ ಗೌರವ ಧನ ಹಾಗೂ ಕೌನ್ಸಿಲ್ ವೆಚ್ಚ 30ಲಕ್ಷ , ಜಾಹೀರಾತು ವೆಚ್ಚ 8 ಲಕ್ಷ , ಬೀದಿ ದೀಪಗಳ ನಿರ್ವಹಣೆ ಮತ್ತು ಇತರೆ 60 ಲಕ್ಷ , ಬೀದಿ ದೀಪಗಳ ವಿದ್ಯುತ್ ಶುಲ್ಕ 275 ಲಕ್ಷ , ರಸ್ತೆ ಚರಂಡಿ ಇತರೆ ನಿರ್ವಹಣೆಗಾಗಿ 10 ಲಕ್ಷ , ಬೀದಿನಾಯಿಗಳ ಸಂತಾನಹರಣ ಚಿಕಿತ್ಸೆಗೆ 140 ಲಕ್ಷ, ಘನ ತ್ಯಾಜ್ಯ ವಿಲೇವಾರಿಗೆ 50 ಲಕ್ಷ , ಹೊರ ಗುತ್ತಿಗೆ ಸೇವೆಗಾಗಿ 110 ಲಕ್ಷ ಸೇರಿದಂತೆ ಹಲವಾರು ಖರ್ಚಿನ ಲೆಕ್ಕಾಚಾರವನ್ನು ಬಜೆಟ್ ನಲ್ಲಿ ತೋರಿಸಲಾಗಿದೆ.ವಿಶೇಷ ಘೋಷಣೆಗಳು: ನಗರ ವ್ಯಾಪ್ತಿಯಲ್ಲಿ ಇರುವ ಶೌಚಾಲಯಗಳ ದುರಸ್ಥಿಗೆ ಹೆಚ್ಚಿನ ಆಧ್ಯತೆ ನೀಡುವ ಜೊತೆಗೆ 40 ಲಕ್ಷ ವೆಚ್ಚದಲ್ಲಿ ಸ್ಯಾನಿಟರಿ ನ್ಯಾಪ್ ಕೀನ್ ವೆಂಡಿಗ್ ಮೆಷನ್ ಆಳವಡಿಕೆ, ಪುಟ್ ಪಾತ್ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು 60 ಲಕ್ಷ ವೆಚ್ಚದಲ್ಲಿ ಸ್ಲಾಟರ್ ಹೌಸ್ ನಿರ್ಮಾಣ, ಬೀದಿನಾಯಿಗಳ ನಿಯಂತ್ರಣಕ್ಕೆ 1000 ಲಕ್ಷ ಮೀಸಲು, ಪೌರ ಕಾರ್ಮಿಕರ ಪ್ರವಾಸಕ್ಕೆ 90 ಲಕ್ಷ, ಪುಡ್ ಕೋರ್ಟ್ ನಿರ್ಮಾಣ, ನಗರದ ವ್ಯಾಪ್ತಿಯ ರಸ್ತೆಗಳ ಮಧ್ಯೆ ಗಿಡ ನೆಡುವ ಜೊತೆಗೆ, ಬೊಂಬೆಗಳ ಪ್ರತಿಕೃತಿ ನಿರ್ಮಾಣ ಸೇರಿದಂತೆ ಹೊಸ ಯೋಜನೆಗಳ ಬಗ್ಗೆಯೂ ಬಜೆಟ್ ನಲ್ಲಿ ಉಲ್ಲೇಖಿಸಲಾಗಿದೆ.ಬಜೆಟ್ ನ ಯೋಜನೆಗಳು ಅನುಷ್ಠಾನವಾಗಲಿ: ಬಜೆಟ್ ವಿಚಾರವಾಗಿ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಈ ವೇಳೆ ಕೆಲಸದಸ್ಯರು ಬಜೆಟ್ ನಲ್ಲಿ ಕೆಲ ಯೋಜನೆಗಳನ್ನು ಪ್ರತಿಬಾರಿಯೂ ಉಲ್ಲೇಖಿಸಲಾಗುತ್ತದೆ. ಆದರೆ, ಅವುಗಳ ಅನುಷ್ಠಾನವೇ ಆಗುವುದಿಲ್ಲ. ಕೇವಲ ತೋರಿಕೆಗಾಗಿ ವಿಷಯಗಳನ್ನು ಸೇರಿಸುವುದು ಬೇಡ ಅವುಗಳು ಪ್ರಾಮಾಣಿಕವಾಗಿ ಅನುಷ್ಠಾನಗೊಳಲಿ ಎಂದು ಸಲಹೆ ನೀಡಿದರು. ನಗರದ ಎಲ್ಲಾ ವಾರ್ಡ್ ಗಳಲ್ಲಿ ವಾರ್ಡ್ ಹೆಸರು, ರಸ್ತೆ, ಸದಸ್ಯರ ಮಾಹಿತಿ ನೀಡುವ ಬೋರ್ಡ್ ಗಳನ್ನು ಅಳವಡಿಸಿ, ಬೀದಿನಾಯಿಗಳ ಉಪಟಳಕ್ಕೆ ಕ್ರಮಕೈಗೊಳ್ಳಿ, ಪುಟ್ಪಾತ್ ಸಮಸ್ಯೆ ನಿವಾರಿಸಿ. ಹೀಗೆ ಹಲವಾರು ಸಲಹೆಗಳನ್ನು ಸದಸ್ಯರು ನೀಡಿದರು.ಸಾಮಾನ್ಯ ಸಭೆಯ ಜಟಾಪಟಿ: ನಗರಸಭೆಯ ಸಾಮಾನ್ಯ ಸಭೆ ಹಾಗೂ ಬಜೆಟ್ ಎರಡನ್ನು ಒಂದೇ ಬಾರಿಗೆ ನಡೆಸಲಾಯಿತು. ಬಜೆಟ್ ಗೂ ಮುನ್ನ ಸಾಮಾನ್ಯ ಸಭೆ ಆರಂಭವಾಯಿತು. ಪ್ರಾರಂಭದಲ್ಲಿಯೇ ಬಿಜೆಪಿ ಸದಸ್ಯೆ ಸುಮಾ ರವೀಶ್ ನಗರಸಭೆ ಆಡಳಿತ ವೈಖರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನಗರದ ಎಲ್ಲಾ ವಾರ್ಡ್ ಗೂ ಅನುದಾನ ನೀಡಿ ಕಾಮಗಾರಿಗಳು ಆರಂಭವಾಗಿವೆ. ಆದರೆ, ನಮ್ಮ 15 ವಾರ್ಡ್ ನಲ್ಲಿ ಯಾಕೆ ಆರಂಭವಾಗಿಲ್ಲ. ಇದಕ್ಕೆ ಉತ್ತರ ಕೊಟ್ಟು ಸಭೆ ಆರಂಭಿಸಿ ಎಂದು ಪಟ್ಟು ಹಿಡಿದರು. ಇನ್ನೂ ಜಲಮಂಡಳಿ ಹಾಗೂ ಬೀದಿದೀಪಗಳ ಕಳಪೆ ನಿರ್ವಹಣೆ ಬಗ್ಗೆ ಬಹುತೇಕ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ನ ಸ್ವಪಕ್ಷದವರ ಕಿತ್ತಾಟ ನಡೆಸಿದ್ದು ಸಹ ವಿಶೇಷವಾಗಿತ್ತು. ಸಭೆಗೆ ಕುಡಿಯುವ ನೀರು ತರುವುದು ತಡವಾದ ಹಿನ್ನೆಲೆಯಲ್ಲಿ, ಈ ಸಭೆಯಲ್ಲೇ ನೀರಿಲ್ಲ!! ಇನ್ನೂ ಊರಿಗೆ ಯಾವ ಕೊಡುತ್ತೀರಿ ಎಂದು ಕೆಲ ಸದಸ್ಯರು ಕಿಚಾಯಿಸಿದರು.
ಸಾಮಾನ್ಯ ಸಭೆಯ ಬಗ್ಗೆ ಚರ್ಚೆ ಮಾಡಲು ಸಾಕಷ್ಟು ಸಮಯಬೇಕು. ಈ ಹಿನ್ನೆಲೆಯಲ್ಲಿ ಸಾಮಾನ್ಯ ಸಭೆ ಮುಂದೂಡಿ ಬಜೆಟ್ ಸಭೆ ನಡೆಸಿ ಎಂದು ಬಹುತೇಕ ಸದಸ್ಯರು ಸಲಹೆ ನೀಡಿದರು. ಆದರೆ, ತುರ್ತು ಮಂಜೂರಾತಿ ಬೇಕಾಗಿರುವ ಹಿನ್ನೆಲೆಯಲ್ಲಿ ಅಜೆಂಡಾದಲ್ಲಿರುವ ಒಂದೆರಡು ವಿಷಯಗಳ ಬಗ್ಗೆ ಚರ್ಚೆ ಮಾಡಿ ಉಳಿದ ವಿಷಯಗಳ ಬಗ್ಗೆ ಮತ್ತೊಂದು ಸಭೆ ಮಾಡುವ ತೀರ್ಮಾನ ಮಾಡಲಾಯಿತು.ಸಭೆಯಲ್ಲಿ ನಗರಸಭೆ ಅಧ್ಯಕ್ಷ ಬಿ.ಎಂ ನಾಗೇಶ್, ಉಪಾಧ್ಯಕ್ಷ ಲೋಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಕೋಟೆ ಚಂದ್ರು, ಪೌರಾಯುಕ್ತ ಮಹೇಂದ್ರ ಸೇರಿದಂತೆ ನಗರಸಭೆ ಸದಸ್ಯರು, ಅಧಿಕಾರಿಗಳು ಇದ್ದರು.
ಸಭೆಯಲ್ಲಿ ಅಧ್ಯಕ್ಷ ಬಿ.ಎಂ.ನಾಗೇಶ್ 2026- 27ನೇ ಸಾಲಿನ 2.76 ಕೋಟಿ ಉಳಿತಾಯ ಬಜೆಟ್ ಮಂಡನೆ



