ದೊಡ್ಡಬಳ್ಳಾಪುರ: ತಾಲ್ಲೂಕಿನ ಮಧುರೆ ಹೋಬಳಿಯ ಸಿಂಪಾಡಿಪುರ ಗ್ರಾಮದ ವೀಣೆತಯಾರಿಕೆಯ ೮೦ ವರ್ಷದ ಪೆನ್ನ ಓಬಳಯ್ಯ ಅವರಿಗೆ ಸಂಕೀರ್ಣ ಕ್ಷೇತ್ರದಲ್ಲಿ ೨೦೨೫ನೇ ಸಾಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಲಭಿಸಿದೆ. ಸಿಂಪಾಡಿಪುರ ಗ್ರಾಮದಲ್ಲಿ ವೀಣೆ ತಯಾರಿಕೆಯ ಪರಂಪರೆಯನ್ನು ಪ್ರಾರಂಭಿಸಿದ, ಪೆನ್ನ ಒಬಳಯ್ಯ ಅವರು ನುರಿತ ವೀಣೆ ತಯಾರಕರ ಬಳಿ ಕೆಲಸ ಕಲಿತು ಬಂದವರು ತಮ್ಮ ಗ್ರಾಮದಲ್ಲಿ ಇತರೆ ಆಸಕ್ತರಿಗೂ ವೀಣೆ ತಯಾರಿಕೆ ಕೆಲಸ ಕಲಿಸಿದರು.
೫೦ ವರ್ಷಗಳಿಂದಲೂ ವೀಣೆ ತಯಾರಿಸುತ್ತಾ ಬಂದಿರುವ ಈ ಗ್ರಾಮದವರು ಈಗಲೂ ವೀಣೆ ತಯಾರಿಕೆಯ ಜನಪ್ರಿಯತೆಯನ್ನು ಉಳಿಸಿಕೊಂಡಿದ್ದಾರೆ. ಮೈಸೂರು, ತಂಜಾವೂರು ಶೈಲಿಯ ವೀಣೆಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ವೀಣೆ ತಯಾರಿಕೆಯ ಪರಂಪರೆಯನ್ನು ಮುಂದುವರಿಸುತ್ತಿರುವ ಹೊಸ ತಲೆಮಾರಿನವರು ಈ ಕರಕುಶಲತೆಯನ್ನು ಮುಂದುವರೆಸುತ್ತಾ ಬದುಕು ಕಟ್ಟಿಕೊಂಡಿದ್ದಾರೆ. ಸಿಂಪಾಡಿಪುರ ಗ್ರಾಮದಲ್ಲಿ ತಯಾರಾಗುವ ವೀಣೆಗಳು ನಾಡಿನ ಹೆಸರಾಂತ ಸಂಗೀತ ಕಲಾವಿದರ ಕೈಯಲ್ಲಿವೆ ಇಂದಿಗೂ ರಾರಾಜಿಸುತ್ತಿವೆ.



