ದಾವಣಗೆರೆ: “ಶಿಕ್ಷಣವು ಕೇವಲ ಪದವಿ ಪಡೆಯುವ ಅಥವಾ ಉದ್ಯೋಗ ಕಂಡುಕೊಳ್ಳುವ ಮಾರ್ಗವಲ್ಲ;, ಅದು ನೈತಿಕತೆ, ಸಹಾನುಭೂತಿ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಸಂಸ್ಕಾರವಾಗಿದೆ” ಎಂದು ರಾಜ್ಯದ ಗೌರವಾನ್ವಿತ ರಾಜ್ಯಪಾಲರು ಹಾಗೂ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಅವರು ಅಭಿಪ್ರಾಯಪಟ್ಟರು.
ವಿ.ವಿ. ಶಿವಗಂಗೋತ್ರಿ ಆವರಣದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ೧೩ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಅವರು, ಪದವಿ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.
ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ. ಈ ಯುವಶಕ್ತಿಯೇ ನಮ್ಮ ರಾಷ್ಟ್ರದ ಬೆನ್ನೆಲುಬು ಎಂದು ಬಣ್ಣಿಸಿದ ರಾಜ್ಯಪಾಲರು, ಸ್ವಾಮಿ ವಿವೇಕಾನಂದರ ಆಶಯದಂತೆ ದೇಶದ ವಿಕಾಸಕ್ಕೆ ಯುವಜನತೆ ಕಟಿಬದ್ಧರಾಗಬೇಕು ಎಂದು ಕರೆ ನೀಡಿದರು. “೨೦೪೭ರಲ್ಲಿ ಭಾರತವು ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುವ ಹೊತ್ತಿಗೆ ಈ ದೇಶದ ಭವಿಷ್ಯವು ಇಂದಿನ ಪದವೀಧರರ ಕೈಯಲ್ಲಿರುತ್ತದೆ. ತಂತ್ರಜ್ಞಾನದಲ್ಲಿ ಭಾರತವನ್ನು ವಿಶ್ವದ ಮುಂಚೂಣಿ ದೇಶವನ್ನಾಗಿ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ” ಎಂದು ಅವರು ಕಿವಿಮಾತು ಹೇಳಿದರು.
ಡಿಜಿಟಲ್ ಕ್ರಾಂತಿ ಮತ್ತು ನವೋದ್ಯಮ: ಇಂದಿನ ಯುಗವು ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್ ಮತ್ತು ಸುಧಾರಿತ ತಂತ್ರಜ್ಞಾನಗಳ ಡಿಜಿಟಲ್ ಯುಗವಾಗಿದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಕ್ಯಾಂಪಸ್ ಪ್ಲೇಸ್ಮೆಂಟ್ಗೆ ಅಂಟಿಕೊಳ್ಳದೆ, ಹೊಸ ಆಲೋಚನೆಗಳೊಂದಿಗೆ ನವೋದ್ಯಮಗಳ ಸ್ಥಾಪನೆಗೆ ಮುಂದಾಗಬೇಕು ಎಂದು ಸಲಹೆ ನೀಡಿ “ಸೋಲಿಗೆ ಹೆದರಬೇಡಿ sಸ್ಟರ್ಟ್ ಅಪ್ ಲೋಕದಲ್ಲಿ ಸೋಲು ಎಂಬುದು ಒಂದು ಅಮೂಲ್ಯವಾದ ಪಾಠವಿದ್ದಂತೆ” ಎಂದು ಅವರು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದರು.
ಪೋಷಕರು ಮತ್ತು ಗುರುಗಳ ಋಣ: ವಿದ್ಯಾರ್ಥಿಗಳ ಸಾಧನೆಯಲ್ಲಿ ತಾಯಿಯ ಪ್ರಾರ್ಥನೆ, ತಂದೆಯ ತ್ಯಾಗ ಮತ್ತು ಗುರುಗಳ ನಂಬಿಕೆ ಅಡಗಿದೆ. ಜೀವನದಲ್ಲಿ ಯಶಸ್ಸು ಪಡೆದಾಗ ಈ ಎಲ್ಲರ ಋಣವನ್ನು ಕೃತಜ್ಞತೆ ಮತ್ತು ಸೇವೆಯ ಮೂಲಕ ತೀರಿಸಬೇಕು ಎಂದು ರಾಜ್ಯಪಾಲರು ಆಶಯ ವ್ಯಕ್ತಪಡಿಸಿದರು. ದಾವಣಗೆರೆ ವಿಶ್ವವಿದ್ಯಾಲಯವು ಅಲ್ಪಾವಧಿಯಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವಲ್ಲಿ ತೋರುತ್ತಿರುವ
ಬದ್ಧತೆಯನ್ನು ಶ್ಲಾಘಿಸಿದರು.
ಗೌರವ ಡಾಕ್ಟರೇಟ್ ಮತ್ತು ಶೈಕ್ಷಣಿಕ ಸಾಧನೆ: ಸಮಾಜ ಸೇವೆ ಮತ್ತು ಜನಹಿತಕ್ಕಾಗಿ ಶ್ರಮಿಸಿದ ಗಣ್ಯರಾದ ಪ್ರೊ. ಸಿ.ಎಚ್. ಮುರುಗೇಂದ್ರಪ್ಪ, ಎಂ. ರಾಮಪ್ಪ ಹಾಗೂ ಎಲ್. ರೇವಣ್ಣ ಸಿದ್ದಯ್ಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಘಟಿಕೋತ್ಸವದ ಅಂಕಿ-ಅAಶಗಳನ್ನು ನೀಡುತ್ತಾ ರಾಜ್ಯಪಾಲರು, ಈ ಬಾರಿ ಒಟ್ಟು ೭೦ ವಿದ್ಯಾರ್ಥಿಗಳಿಗೆ ಪಿಎಚ್.ಡಿ, ೨,೦೨೨ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ ೧೦,೬೮೪ ವಿದ್ಯಾರ್ಥಿಗಳಿಗೆ ಸ್ನಾತಕ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದೆ. ವಿಶೇಷವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ ೪೫ ವಿದ್ಯಾರ್ಥಿಗಳಿಗೆ ಒಟ್ಟು ೮೭ ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಬೇಕಾಗಿದ್ದ ಡಿಆರ್ಡಿಓ ಮಾಜಿ ನಿರ್ದೇಶಕರು ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಇಲಾಖೆ ಮಾಜಿ ಕಾರ್ಯದರ್ಶಿಗಳು ಮತ್ತು ಪ್ರಸ್ತುತ ರಾಷ್ಟಿçÃಯ ತಂತ್ರಜ್ಞಾನ ಸಂಸ್ಥೆ ಅಧ್ಯಕ್ಷರು ಪದ್ಮವಿಭೂಷಣ ಡಾ. ವಾಸುದೇವ್ ಕೆ. ಆತ್ರೆ ಅವರ ಅನುಪಸ್ಥಿತಿಯಲ್ಲಿ ಸಮಾಜಶಾಸ್ತç ವಿಭಾಗದ ಡೀನ್ ಪ್ರೊ; ಲೋಕೇಶ್ ಅವರು ಮುಖ್ಯ ಅತಿಥಿಗಳು ಬರೆದು ಕಳುಹಿಸಿದ ಘಟಿಕೋತ್ಸವ ಭಾಷಣ ಓದಿದರು. ಅವರ ಘಟಿಕೋತ್ಸವ ಭಾಷಣದಲ್ಲಿ ಮಾನವ ಯುಗ ಮತ್ತು ಪರಿಸರ ಸಂರಕ್ಷಣೆಯ ಕುರಿತು ಪ್ರಸ್ತಾಪಿಸಿ ಜನಸಂಖ್ಯಾ ಸ್ಫೋಟ, ಜಲ ಸಂಕಟ ಮತ್ತು ಜಾಗತಿಕ ತಾಪಮಾನ ಏರಿಕೆಯಂತಹ ಗಂಭೀರ ಸಮಸ್ಯೆಗಳ ಬಗ್ಗೆ ಅವರು ಎಚ್ಚರಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕವೇ ಇಂದಿನ ಸಂಪನ್ಮೂಲಗಳ ಕೊರತೆಗೆ ಸುಸ್ಥಿರ ಪರಿಹಾರ ಕಂಡುಕೊಳ್ಳಲು ಸಾಧ್ಯ, ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ಮತ್ತು ಪರಿಸರ ನ್ಯಾಯಕ್ಕೆ ಒತ್ತು ನೀಡುವ ‘ಭಾಗವಹಿಸುವಿಕೆಯಾಧಾರಿತ’ ಶಿಕ್ಷಣ ಪದ್ಧತಿಯ ಅಗತ್ಯವನ್ನು ಒತ್ತಿ ಹೇಳಿ “ಪ್ರಕೃತಿಯನ್ನು ಆಳಲು ಮೊದಲು ಅದನ್ನು ಪಾಲಿಸಬೇಕು” ಎಂಬ ಸಂದೇಶದೊAದಿಗೆ ಪದವೀಧರರಿಗೆ ಶುಭ ಹಾರೈಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ೧೩ನೇ ವಾರ್ಷಿಕ ಘಟಿಕೋತ್ಸವದಲ್ಲಿ ಕುಲಪತಿಗಳಾದ ಪ್ರೊ. ಬಿ.ಡಿ. ಕುಂಬಾರ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಈ ಸಾಲಿನಲ್ಲಿ ಒಟ್ಟು ೭೦ ವಿದ್ಯಾರ್ಥಿಗಳಿಗೆ ಪಿಎಚ್.ಡಿ., ೨,೦೨೨ ಸ್ನಾತಕೋತ್ತರ ಹಾಗೂ ೧೦,೬೮೪ ಸ್ನಾತಕ ಪದವೀಧರರಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಒಟ್ಟು ೪೫ ವಿದ್ಯಾರ್ಥಿಗಳು ೮೭ ಚಿನ್ನದ ಪದಕಗಳನ್ನು ಮತ್ತು ಸುವರ್ಣ ಪದಕಗಳನ್ನು ಪಡೆಯುತ್ತಿದ್ದಾರೆ.
ಶೈಕ್ಷಣಿಕ ಪ್ರಗತಿ: ಸ್ನಾತಕೋತ್ತರ ಹಂತದಲ್ಲಿ ಸರಾಸರಿ ಶೇ. ೯೧.೪ ರಷ್ಟು ಹಾಗೂ ಸ್ನಾತಕ ಹಂತದಲ್ಲಿ ಶೇ. ೫೮.೭೭ ರಷ್ಟು ಉತ್ತೀರ್ಣತೆಯ ಪ್ರಮಾಣ ದಾಖಲಾಗಿದೆ. ವಿಶ್ವವಿದ್ಯಾನಿಲಯದ ಹೆಚ್-ಇಂಡೆಕ್ಸ್ ೭೨ಕ್ಕೆ ಏರಿಕೆಯಾಗಿದ್ದು, ಒಟ್ಟು ೨೭,೨೫೯ ಸೈಟೇಷನ್ಸ್ ದಾಖಲಾಗಿವೆ. ಅಲ್ಲದೆ, ನಾಲ್ವರು ಪ್ರಾಧ್ಯಾಪಕರು ವಿಶ್ವದ ಟಾಪ್ ೨% ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಹೊಸ ನೀತಿಗಳ ಅನುಷ್ಠಾನ: ಕರ್ನಾಟಕ ರಾಜ್ಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡ ಮೊದಲ ವಿಶ್ವವಿದ್ಯಾನಿಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ೧,೨೦೦ ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡಲಾಗುತ್ತಿದೆ.
ಗ್ರಾಮ ದತ್ತು ಯೋಜನೆ: ವಿಶ್ವವಿದ್ಯಾನಿಲಯದ ವ್ಯಾಪ್ತಿಯ ೧೦ ಗ್ರಾಮಗಳನ್ನು ದತ್ತು ಪಡೆದು ಅವುಗಳ ಸರ್ವತೋಮುಖ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಎಂ.ಸಿ.ಎ ವಿಭಾಗಕ್ಕಾಗಿ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ಹಾಗೂ ಸ್ಮಾರ್ಟ್ ತರಗತಿಗಳ ಹೊಸ ಕಟ್ಟಡ ಸ್ಥಾಪಿಸಲಾಗಿದೆ ಎಂದು ವಿಶ್ವವಿದ್ಯಾನಿಲಯದ ಪ್ರಗತಿ ಕುರಿತು ಅಂಕಿ ಅಂಶಗಳೊAದಿಗೆ ವಿವರಿಸಿದರು.
ಕುಲಸಚಿವರಾದ ಪ್ರೊ. ರಮೇಶ್ ಸಿ.ಕೆ., (ಮೌಲ್ಯಮಾಪನ) ರಿಜಿಸ್ಟಾರ್ ಎಸ್.ಬಿ.ಗಂಟಿ ಹಾಗೂ ವಿವಿಧ ನಿಕಾಯಗಳ ಸದಸ್ಯರು ಮತ್ತು ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಸಂಶೋಧನೆ, ನಾವೀನ್ಯತೆ ಹಾಗೂ ಯುವಶಕ್ತಿಯೇ ವಿಕಸಿತ ಭಾರತದ ಅಡಿಪಾಯ



