![]() |
![]() |
![]() |
![]() |
![]() |
ಬೆಂಗಳೂರು: ರಾಜ್ಯದಲ್ಲಿ ವಿಶ್ವಕರ್ಮ ಅಧ್ಯಯನ ಕೇಂದ್ರ ಸ್ಥಾಪನೆ ಮಾಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿಂದುಳಿದವರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ಇರಬೇಕಾಗುತ್ತದೆ. ಕರಕುಶಲಕರ್ಮಿಗಳಿಗೆ ಇಲಾಖೆ ರಚಿಸಬೇಕು ಎಂಬ ಬೇಡಿಕೆಯ ಬಗ್ಗೆ ಪರಿಶೀಲನೆ ಮಾಡಲಾಗುವುದು. ನೇಕಾರರಿಗೆ ಇರುವ ಸೌಲಭ್ಯಗಳ ಮಾದರಿಯಲ್ಲಿ ಸೌಲಭ್ಯಗಳು ಹಾಗೂ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕೆಂಬ ಬೇಡಿಕೆ ಇದ್ದು ಅನುದಾನ ಹೆಚ್ಚು ಮಾಡಲಾಗುವುದು ಎಂದು ಭರವಸೆ ನೀಡಿದರು.
ಎಲ್ಲ ಧರ್ಮಗಳಿಗಿಂತ ಮನುಷ್ಯ ಧರ್ಮ ಮಿಗಿಲು: ನಾವು ಸಮಾಜದಲ್ಲಿ ಹುಟ್ಟಿದ ಮೇಲೆ ಸಮಾಜದ ಋಣ ತೀರಿಸಬೇಕು. ಹಾಗೆ ಮಾಡುವುದೇ ನಮ್ಮೆಲ್ಲರ ಕರ್ತವ್ಯ. ನಾವು ಎಷ್ಟು ದಿನ ಬದುಕಿರುತ್ತೇವೆ ಎನ್ನುವುದು ಮುಖ್ಯ ಅಲ್ಲ. ರಾಷ್ಟ್ರ ಕವಿ ಕುವೆಂಪು ಹೇಳುವಂತೆ ಎಲ್ಲ ರೂ ವಿಶ್ವಮಾನವರಾಗಿಯೇ ಹುಟ್ಟಿದರೂ, ಬೆಳೆಯುವಾಗ ಅಲ್ಪ ಮಾನವರಾಗುತ್ತಾರೆ. ನಾವು ವಿಶ್ವಮಾನವರಾಗಲು ಪ್ರಯತ್ನ ಮಾಡುವುದೇ ಸಮಾಜಕ್ಕೆ ಕೊಡುವ ಕೊಡುಗೆ. ನಾವು ಮನುಷ್ಯರಾಗಿ ಬಾಳುವ ಪ್ರಯತ್ನ ಮಾಡಬೇಕು. ಧರ್ಮ, ಧರ್ಮಗಳ ನಡುವೆ ಸಂಘರ್ಷ, ಜಾತಿ ಜಾತಿಗಳ ನಡುವೆ ಸಂಘರ್ಷ ಉಂಟು ಮಾಡುತ್ತಿದ್ದಾರೆ.
ಧರ್ಮ ಬದುಕಿನ ಮಾರ್ಗ. ಮನುಷ್ಯನ ಬದುಕಿಗಾಗಿ ಧರ್ಮವಿದೆ. ಯಾವ ಧರ್ಮ ಮನುಷ್ಯನನ್ನು ದ್ವೇಷಿಸುತ್ತದೆಯೋ ಅದನ್ನು ಧರ್ಮ ಎಂದು ಕರೆಯಲಾಗುವುದಿಲ್ಲ. ಬಸವಣ್ಣ ಹೇಳಿದಂತೆ ದಯೆಯೇ ಧರ್ಮದ ಮೂಲ. ಎಲ್ಲ ಧರ್ಮಗಳಿಗಿಂತ ಮನುಷ್ಯ ಧರ್ಮ ಮಿಗಿಲು. ಮನುಷ್ಯರಾಗಲು ಪ್ರಯತ್ನಿಸೋಣ. ನಾವು ಸಮಾಜದ ಋಣ ತೀರುಸುವ ಕೆಲಸ ಮಾಡಿದರೆ ಜೀವನ ಸಾರ್ಥಕವಾಗುತ್ತದೆ ಎಂದರು.
ಹಿಂದುಳಿದ ಸಮಾಜಗಳಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬದೇ ಹೋದರೆ ಅವು ಮುಖ್ಯ ವಾಹಿನಿಗೆ ಬರುವುದು ಕಷ್ಟ: ಹಿಂದೆ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅನೇಕ ಹಿಂದುಳಿದ ಜಾತಿಗಳ ಜಯಂತಿ ಹಾಗೂ ನಿಗಮಗಳನ್ನೂ ರಚನೆ ಮಾಡಲು ತೀರ್ಮಾನ ಮಾಡಿ ಹಣವನ್ನೂ ಒದಗಿಸಿದ್ದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಸಮಾಜಗಳಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬದೇ ಹೋದರೆ ಅವು ಮುಖ್ಯ ವಾಹಿನಿಗೆ ಬರುವುದು ಕಷ್ಟವಾಗುತ್ತದೆ.
ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಿಂತಾಗ ಮಾತ್ರ ಬದಲಾವಣೆ: ಆಯಾ ಜಾತಿಯವರೇ ತಮ್ಮ ಜಯಂತಿಗಳನ್ನು ಆಚರಣೆ ಮಾಡಿದರೆ ಜಾತಿ ಬಣ್ಣ ಬರುತ್ತದೆ. ಸರ್ಕಾರ ಮಾಡಿದರೆ ಜಾತಿ ಬಣ್ಣ ಬರುವುದಿಲ್ಲ. ನಾವು ಸರ್ವರನ್ನೂ ಒಳಗೊಂಡ ಸಮಾಜ ನಿರ್ಮಾಣ ಮಾಡುವುದರಲ್ಲಿ ನಂಬಿಕೆವುಳ್ಳವರು. ಕೆಲವೇ ಜಾತಿಗಳ ಸಮಾಜ ನಿರ್ಮಾಣವಾಗಬಾರದು. ನಮ್ಮಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಇದೆ. ಅನಾದಿ ಕಾಲದಿಂದಲೂ ನೈಪುಣ್ಯತೆ, ಕೌಶಲ್ಯವಿದ್ದರೂ ಆರ್ಥಿಕವಾಗಿ ಸಬಲರಲ್ಲ.
ಸಬಲರಾಗಲು ಆರ್ಥಿಕ, ಸಾಮಾಜಿಕ ರಾಜಕೀಯ ಅವಕಾಶಗಳು ಸಿಗಬೇಕು. ಇಲ್ಲದಿದ್ದರೆ ಯಾವ ಜಾತಿಯೂ ಮೇಲೆ ಬರಲು ಸಾಧ್ಯವಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದದ್ದು ಸಾರ್ಥಕವಾಗಲು, ರಾಜಕೀಯ ಪ್ರಜಾಪ್ರಭುತ್ವ ಇದ್ದರೆ ಸಾಲದು, ಆರ್ಥಿಕ ಸಾಮಾಜಿಕ ಪ್ರಜಾಪ್ರಭುತ್ವ ಇರಬೇಕು ಎಂದು ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ರಾಜಕೀಯ ಪ್ರಜಾಪ್ರಭುತ್ವ ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಿಂತಾಗ ಮಾತ್ರ ಬದಲಾವಣೆ ಸಾಧ್ಯವಾಗುತ್ತದೆ ಎಂದು ಪುನರುಚ್ಚರಿಸಿದರು.
ಸ್ವಾತಂತ್ರ್ಯ ಗಳಿಸಿ 76 ವರ್ಷಗಳಾಗಿದ್ದರೂ ಸಾಮಾಜಿಕ, ಆರ್ಥಿಕ ಅಸಮಾನತೆ ಇದೆ. ಸಂವಿಧಾನದಲ್ಲಿ ಎಲ್ಲರೂ ಸಮಾನರು. ಸಂವಿಧಾನದ ಧ್ಯೇಯೋದ್ದೇಶಗಳನ್ನು ಜಾರಿ ಮಾಡುವ ಬದ್ಧತೆ ಇರುವವರ ಬಳಿ ಅಧಿಕಾರ ಇದ್ದರೆ ಸಮಾನತೆ ತರಲು ಸಾಧ್ಯ.
ಎಲ್ಲರನ್ನೂ ಒಳಗೊಂಡ ಸಮಾಜ ನಿರ್ಮಾಣ ಮಾಡಬೇಕು: ಸಂವಿಧಾನದ ವಿರುದ್ಧ ಇರುವವರ ಬಳಿ ಅಧಿಕಾರ ಇದ್ದರೆ ಸಾಧ್ಯವಿಲ್ಲ. ಬಹುತ್ವದ ಸಮಾಜ ಉಳ್ಳ ನಾವು ಎಲ್ಲರನ್ನೂ ಒಳಗೊಂಡ ಸಮಾಜ ನಿರ್ಮಾಣ ಮಾಡಬೇಕು. ವೈವಿಧ್ಯ ತೆಯಲ್ಲಿ ಏಕತೆ ಕಾಣಬೇಕು. ಒಂದು ಧರ್ಮ ಆಧಾರಿತ ದೇಶವಲ್ಲ ಇದು. ಒಂದು ಜಾತಿ, ಭಾಷೆ ಆಧಾರಿತ ದೇಶವಲ್ಲ. ಸಹಿಷ್ಣುತೆ, ಸಹಬಾಳ್ವೆ ಎಂದು ಸಂವಿಧಾನ ಹೇಳುತ್ತದೆ ಎಂದರು.
ಹಿಂದೇಟು ಹಾಕುವುದಿಲ್ಲ: ಸರ್ಕಾರ ಆಚರಿಸುವ ಜಯಂತಿ ಕಾರ್ಯಕ್ರಮ ಗಳಲ್ಲಿ ಭಾಗವಹಿಸಲು ನಾನು ಹಿಂದೇಟು ಹಾಕುವುದಿಲ್ಲ. ಸರ್ಕಾರದ ವತಿಯಿಂದ ಜನಾಂಗದ ಕಾರ್ಯಕ್ರಮ ಆಚರಿಸಿದರೆ ಹೆಚ್ಚು ಮಹತ್ವ ಇರುತ್ತದೆ. ಹಾಗಾಗಿ ಸರ್ಕಾರವೇ ಅನೇಕ ಹಿಂದುಳಿದ ಜಯಂತ್ಯೋತ್ಸವವನ್ನು ಆಚರಣೆ ಮಾಡುತ್ತಿದೆ ಎಂದರು…
ಈ ಸಂದರ್ಭದಲ್ಲಿ ಕನ್ನಡ & ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ, ನಿವೃತ್ತ ಕಾರ್ಯದರ್ಶಿ ಕೆ.ಎಸ್ ಪ್ರಭಾಕರ , ಕೆಪಿಸಿಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೆ.ಎಂ.ಮಂಜುನಾಥ, ಪರ್ತಕರ್ತರು& ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಿತಿ ಯ ರಾಜ್ಯ ಸಂಚಾಲಕರಾದ ವಿಜಯಕುಮಾರ ಪತ್ತಾರ, ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಮಾಜಿ ಅಧ್ಯಕ್ಷರುಗಳಾದ , ಶ್ರೀನಿವಾಸಚಾರ್ , ಶ್ರೀ ಮತಿ ಸತ್ಯವತಿ, ಬಾಬು ಪತ್ತಾರ, ಲೋಹಿತ ಕಲ್ಲೂರ ವಿಶ್ವಕರ್ಮ ಹಾಗೂ ಉಪನ್ಯಾಸ ಮಾಡಿದ ಹಂಪಿ ವಿಶ್ವ ವಿದ್ಯಾಲಯದ ಡಾ: ವಿರೇಶ ಬಡಿಗೇರ ಮುಖಂಡರು ಉಪಸ್ಥಿತರಿದ್ದರು.
![]() |
![]() |
![]() |
![]() |
![]() |
Leave a Review