ಬೆಂಗಳೂರು : ವ್ಯಾಪಾರದಲ್ಲಿನ ಪೈಪೋಟಿಯಿಂದ ಪಕ್ಕದ ಬಟ್ಟೆ ಅಂಗಡಿ ಮಾಲೀಕನ ಕೊಲೆಗೆ ಸುಪಾರಿ ನೀಡಿದ್ದ ಟೆಕ್ಸ್ಟೈಲ್ಸ್ ಮಾಲೀಕನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಮುದ್ದಣ್ಣ ಲೇಔಟ್ ನಿವಾಸಿ ವೇನರಾಮ್ (೪೩) ಬಂಧಿತ ಆರೋಪಿಯಾಗಿದ್ದಾನೆ, ತನ್ನ ಟೆಕ್ಸ್ಟೈಲ್ಸ್ ಪಕ್ಕದ ಬಟ್ಟೆ ಅಂಗಡಿ ಮಾಲೀಕ ನೇಮರಾಮ್(೪೨) ಕೊಲೆಗೆ ಆರೋಪಿಯು ೫ ಲಕ್ಷ ರೂ.ಗೆ ಸುಪಾರಿ ನೀಡಿದ್ದನು. ಸುಪಾರಿ ಪಡೆದಿದ್ದ ರಾಜಸ್ಥಾನ ಮೂಲದ ವಿನೋದ್ ಜಾಟ್ ಗೆ ಶೋಧ ನಡೆಸಲಾಗಿದೆ.
ಬಾಗಲಗುಂಟೆಯ ಮುದ್ದಣ್ಣ ಲೇಔಟ್ನ ಸಿಡೇದಹಳ್ಳಿಯಲ್ಲಿ ನೇಮರಾಮ್ ಹ್ಯಾಪಿ ಟೆಕ್ಸ್ಟೈಲ್ಸ್ ಎನ್ನುವ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದು, ಪಕ್ಕದಲ್ಲೇ ಆರೋಪಿ ವೇನರಾಮ್ ಕೂಡ ಹೈ ಫ್ಯಾಷನ್ಸ್ ಟೆಕ್ಸ್ ಟೈಲ್ಸ್ ಎಂಬ ಬಟ್ಟೆ ಅಂಗಡಿ ನಡೆಸುತ್ತಿದ್ದು, ನೇಮರಾಮ್ ಅಂಗಡಿಯಲ್ಲಿ ಉತ್ತಮವಾಗಿ ವ್ಯಾಪಾರ ಆಗುತ್ತಿತ್ತು.
ಹೀಗಾಗಿ ಆರೋಪಿ ವೇನರಾಮ್, ದೂರುದಾರ ನೇಮರಾಮ್ ಅಂಗಡಿಯಲ್ಲಿ ಕಳಪೆ ಗುಣಮಟ್ಟದ ಬಟ್ಟೆಗಳಿವೆ ಎಂದು ಅಪಪ್ರಚಾರ ಮಾಡುತ್ತಿದ್ದ. ಆದರೂ ನೇಮರಾಮ್ ಸುಮ್ಮನಿದ್ದರು.
ಈ ಮಧ್ಯೆ ನೇಮರಾಮ್, ವೇನರಾಮ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರನಿಗೆ ಹೆಚ್ಚಿನ ಸಂಬಳ ಕೊಟ್ಟು ತನ್ನ ಅಂಗಡಿಗೆ ಸೇರಿಸಿಕೊಂಡಿದ್ದ. ಅದರಿಂದ ಕೋಪಗೊಂಡಿದ್ದ ಆರೋಪಿ, ರಾಜಸ್ಥಾನ ಮೂಲದ ವಿನೋದ್ ಜಾಟ್ ಎಂಬಾತನಿಗೆ ನೇಮರಾಮ್ನ ಹತ್ಯೆಗೆ ೫ ಲಕ್ಷ ರೂ.ಗೆ ಸುಪಾರಿ ನೀಡಿದ್ದ. ಅದರಂತೆ ಆರೋಪಿಗಳು ಜುಲೈ ೯ರಂದು ರಾತ್ರಿ ಅಂಗಡಿ ವ್ಯಾಪಾರ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ನೇಮರಾಮ್ ಮೇಲೆ ಎರಡು ಬೈಕ್ಗಳಲ್ಲಿ ಬಂದು ಮಾರಕಾಸ್ತçಗಳಿಂದ ಹಲ್ಲೆ ನಡೆಸಿದ್ದರು. ಬಳಿಕ ಸ್ಥಳೀಯ ನೆರವು ಪಡೆದು ಪ್ರಾಣ ಉಳಿಸಿಕೊಂಡು ಮನೆಗೆ ಹೋಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ ವಿನೋದ್ ಜಾಟ್ ಆ.೮ರಂದು ನೇಮರಾಮ್ಗೆ ಕರೆ ಮಾಡಿ, ನಿನ್ನ ಕೊಲೆಗೈಯಲು ೪ ತಿಂಗಳಿAದ ಸಂಚು ರೂಪಿಸಲಾಗಿತ್ತು. ವೇನರಾಮ್ ನನಗೆ ೫ ಲಕ್ಷ ರೂ.ಗೆ ನಿನ್ನ ಹತ್ಯೆಗೆ ಸುಪಾರಿ ನೀಡಿದ್ದ. ನಿನ್ನ ಮಕ್ಕಳನ್ನು ಅಪಹರಣಕ್ಕೂ ಸೂಚಿಸಿದ್ದ. ಅಲ್ಲದೆ, ವೇನರಾಮ್ ಜತೆಗಿನ ವಾಟ್ಸ್ ಆ್ಯಪ್ ಚಾಟ್ಗಳನ್ನು ನೇಮರಾಮ್ಗೆ ಕಳುಹಿಸಿದ್ದ.
ಈ ಮಾಹಿತಿಯನ್ನು ತನ್ನ ಸಂಬAಧಿಕರಿಗೆ ತಿಳಿಸಿ, ಬಳಿಕ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ವಿನೋದ್ ಜಾಟ್ಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.



