ಬೆಂಗಳೂರು: ಸಿಮೆಂಟ್ ಮಿಕ್ಸರ್ ಲಾರಿಗೆ ವಿದ್ಯುತ್ ವೈರಿಂಗ್ ತಂತಿ ತಗುಲಿ ಎಳೆದೊಯ್ದ ಪರಿಣಾಮ, ಮನೆಯ ಗೋಡೆ ಕುಸಿದು ಮಗು ಸಾವನ್ನಪ್ಪಿದ ಘಟನೆ ಕುಂದಲಹಳ್ಳಿ ಕಾಲೋನಿಯಲ್ಲಿ ನಡೆದಿದೆ. ಮೃತ ಮಗುವನ್ನು ಸಿದ್ದಪ್ಪ ಹಾಗೂ ಲಾವಣ್ಯ ದಂಪತಿಯ ಪುತ್ರ ಪ್ರಣವ್ (೧ ವರ್ಷ ೮ ತಿಂಗಳು) ಎಂದು ಗುರುತಿಸಲಾಗಿದೆ. ನ.೭ರ ಸಂಜೆ ಹೊಸ ಮನೆಯೊಂದರ ಮೋಲ್ಡಿಂಗ್ ಕೆಲಸ ಮುಗಿಸಿ ಸಿಮೆಂಟ್ ಮಿಕ್ಸರ್ ಲಾರಿ ಹೋಗುತ್ತಿತ್ತು.
ಈ ವೇಳೆ ಮೇಲೆ ಹಾದು ಹೋಗಿರುವ ವೈರಿಂಗ್ ವಿದ್ಯುತ್ ತಂತಿ ಲಾರಿಗೆ ಸಿಲುಕಿಕೊಂಡಿದೆ. ತಕ್ಷಣ ಸ್ಥಳೀಯರು ಕೂಗಿಕೊಂಡಿದ್ದಾರೆ. ಆದರೆ ಚಾಲಕ ಗಮನಿಸದೇ ಲಾರಿ ಚಲಾಯಿಸಿದ್ದರಿಂದ ವೈರಿಂಗ್ ಕಂಬ ಕಿತ್ತು ಬಂದಿದೆ. ಅಲ್ಲದೇ ಮನೆಯ ಗೋಡೆ ಕುಸಿದು ಆಟ ಆಡುತ್ತಿದ್ದ ಮಗುವಿನ ಮೇಲೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಸಾವನ್ನಪ್ಪಿದೆ. ಮಗುವಿನ ಶವವನ್ನು ಬೌರಿಂಗ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಮೃತ ಮಗುವಿನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬAಧ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ.



