ಬೆಂಗಳೂರು: ರಾಜ್ಯಪಾಲರ ಭಾಷಣ ಸರ್ಕಾರದ ಸಾಧನೆ ಬಗ್ಗೆ ಇರಬೇಕು. ಸರ್ಕಾರದ ಭಾಷಣದಲ್ಲಿ ರಾಜಕೀಯ ಇರಬಾರದು. ಭಾಷಣದಲ್ಲಿ ರಾಜಕೀಯ ಇದ್ದರೆ ರಾಜ್ಯಪಾಲರು ತಮ್ಮ ವಿವೇಚನಾಧಿಕಾರ ಬಳಸಬಹುದು. ನಮ್ಮ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಈ ಬಿಕ್ಕಟ್ಟು ಬಂದಿದೆ. ರಾಜ್ಯಪಾಲರು ಯಾವ ಅಂಶಕ್ಕೆ ಆಕ್ಷೇಪ ಎತ್ತಿದ್ದಾರೋ ಗೊತ್ತಿಲ್ಲ. ಆದರೆ ರಾಜ್ಯಪಾಲರನ್ನ ಮನವೊಲಿಕೆ ಮಾಡೋ ಜವಾಬ್ದಾರಿ ಸರ್ಕಾರದ್ದಾಗಿದೆ ಎಂದು ಶಾಸಕ ಸುರೇಶ್ ಕುಮಾರ್ ತಿಳಿಸಿದರು.
ಮಾಧ್ಯಮದ ಜೊತೆಗೆ ಮಾತನಾಡಿ ಅವರು, ಸಂವಿಧಾನದ ೧೭೬ ನೇ ವಿಧಿ ಬಗ್ಗೆ ಕಾಂಗ್ರೆಸ್ ನವುö್ರ ಹೇಳುತ್ತಿದ್ದಾರೆ, ಇದರ ಪ್ರಕಾರ ರಾಜ್ಯಪಾಲರು ಭಾಷಣ ಓದಲೇಬೇಕಾಗುತ್ತೆ ಎನ್ನುತಿದ್ದಾರೆ. ಸಂವಿಧಾನದ ಈ ವಿಧಿಯು ಬಂದಾಗ ಈ ರೀತಿಯ ಪರಿಸ್ಥಿತಿ ಬರುತ್ತೆ ಅಂತ ಸಂವಿಧಾನ ಸಭೆಯೂ ಯೋಚಿಸಿರಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯಪಾಲರ ಬಳಿ ನನ್ನ ಸರ್ಕಾರ ಎಂದು ಭಾಷಣದಲ್ಲಿ ಹೇಳಿಸಲಾಗುತ್ತೆ, ನನ್ನ ಸರ್ಕಾರ ಎಂದು ಬಂದಾಗ ಸರ್ಕಾರದ ಸಾಧನೆಗಳು, ಫಲಶೃತಿ, ಮುಂದಿನ ಯೋಜನೆಗಳು ಬರುತ್ತವೆ. ಆದರೆ ನನ್ನ ಸರ್ಕಾರ ಅಂತ ಹೇಳಿಸಿ ಅದರಲ್ಲಿ ರಾಜಕೀಯದ ವಿಚಾರಗಳು ನುಸುಳಿದರೆ, ಆಡಳಿತ ಪಕ್ಷದ ಭಾವನೆಗಳು ಭಾಷಣದಲ್ಲಿ ಬಂದರೆ ಬಿಕ್ಕಟ್ಟು ಉಂಟಾಗಲಿದೆ ಎಂದರು.
ರಾಜ್ಯಪಾಲರು ಆಕ್ಷೇಪ ಎತ್ತಿದ ಅಂಶಗಳನ್ನ ತೆಗೆದು ಸರ್ಕಾರ ಭಾಷಣ ಮಾಡಿಸಲಿ. ರಾಜ್ಯಪಾಲರು ಅಧಿವೇಶನಕ್ಕೆ ಬಂದು ಭಾಷಣ ಓದಬೇಕೋ ಬೇಡವೋ ಅಂತ ನಿರ್ಧಾರ ಅವರ ವಿವೇಚನೆಗೆ ಬಿಟ್ಟಿದ್ದು. ರಾಜ್ಯಪಾಲರಿಂದ ಸರ್ಕಾರ ಏನು ಹೇಳಿಸಲು ಹೊರಟಿದೆ ಅನ್ನೋದು ಮುಖ್ಯ. ಸರ್ಕಾರದ ಸಾಧನೆಗಳಿದ್ರೆ ಅದನ್ನು ರಾಜ್ಯಪಾಲರು ಖಂಡಿತ ಓದಲೇಬೇಕು. ಆದ್ರೆ ಆಡಳಿತ ಪಕ್ಷದ ಭಾವನೆ ಭಾಷಣದಲ್ಲಿ ಬಂದಾಗ ಈ ಬಿಕ್ಕಟ್ಟು ಬರುತ್ತೆ, ಆಗ ರಾಜ್ಯಪಾಲರಿಗೆ ಭಾಷಣ ಓದಲು ಆಗಲ್ಲ. ರಾಜ್ಯಪಾಲರಿಗೆ ಏನು ಓದಬೇಕು ಏನು ಓದಬಾರದು ಅಂತ ವಿವೇಚನೆ ಅಧಿಕಾರ ಇದೆ. ಸರ್ಕಾರಕ್ಕೂ ಏನು ಹೇಳಿಸಬೇಕು ಅನ್ನೋ ವಿವೇಕ ಇರಬೇಕು. ಇದು ವಿವೇಚನೆ ಮತ್ತು ವಿವೇಕದ ತಾಕಲಾಟ ಎಂದು ಟೀಕಿಸಿದರು.
ಸರ್ಕಾರದ ಭಾಷಣದ ೧೧ ಪ್ಯಾರಾ ನಾವು ಬರೆಸಿಲ್ಲ. ನಾವು ರಾಜ್ಯಪಾಲರಿಗೆ ಭಾಷಣ ವಿರೋಧಿಸಿ ಅಂತ ಹೇಳಿಲ್ಲ. ನಾವೂ ರಾಜ್ಯಪಾಲರ ಭಾಷಣದಲ್ಲಿ ಏನಿರುತ್ತೆ ಅಂತ ನೋಡ್ತಿದೀವಿ. ವಿಪಕ್ಷ ಆಗಿ ರಾಜ್ಯಪಾಲರ ಭಾಷಣ ಓದುವಿಕೆಯಲ್ಲಿ ನಮ್ಮ ಪಾತ್ರ ಇರಲ್ಲ. ವಿಬಿ ಜಿ ರಾಮ್ ಜಿ ಕಾಯ್ದೆ ಬಗ್ಗೆ ಸರ್ಕಾರ ರಾಜಕೀಯ ಮಾಡ್ತಿದೆ. ಇವರಿಗೆ ತೊಂದರೆ ಆಗುವ ಅಂಶ ಹೇಳ್ತಿದ್ದಾರೆ. ರಾಜ್ಯಪಾಲರ ಭಾಷಣದಲ್ಲಿ ವಿಬಿಜಿರಾಮ್ಜಿ ವಿರುದ್ಧ ಹೇಳಿಸಿದರೆ ಅದು ಪಕ್ಕಾ ರಾಜಕೀಯದ ನಡೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ಭಾಷಣದಲ್ಲಿ ರಾಜಕಾರಣವಿರಬಾರದು



