ಚಾಮರಾಜನಗರ: ಅಕ್ರಮ ವಿದ್ಯುತ್ ತಂತಿ ಸ್ಪರ್ಶಿಸಿ ಹುಲಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಬಳಿ ನಡೆದಿದೆ.
ಕೇರಳ ಮೂಲದವರು ಜಮೀನಿಗೆ ಅಳವಡಿಸಿದ್ದ ಅಕ್ರಮ ವಿದ್ಯುತ್ ತಂತಿ ಸ್ಪರ್ಶಿಸಿ ಸುಮಾರು ಎರಡು ವರ್ಷ ವಯಸ್ಸಿನ ಹುಲಿ ಸಾವಿಗೀಡಾಗಿದೆ. ಸ್ಥಳಕ್ಕೆ ಪೊಲೀಸ್, ಅರಣ್ಯ ಹಾಗೂ ಸೆಸ್ಕ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೇರಳ ಮೂಲದ ಪರಮೇಶ್ ಎಂಬವರು ಸ್ಥಳೀಯರ ಜಮೀನನ್ನು ಗುತ್ತಿಗೆ ಪಡೆದಿದ್ದರು. ಈ ಭಾಗದಲ್ಲಿ ಹುಲಿ, ಚಿರತೆ ಸಂಚಾರ ಹೆಚ್ಚಿದೆ. ಈ ಹಿನ್ನೆಲೆ ಅಧಿಕಾರಿಗಳು ಥರ್ಮಲ್ ಡ್ರೋನ್ ಹಾರಿಸುವಾಗ ಹುಲಿ ಸತ್ತು ಬಿದ್ದಿರೋದು ಗೊತ್ತಾಗಿದೆ.
ಹಿಂದೆ ಮಲೆ ಮಹದೇಶ್ವರ ವನ್ಯಧಾಮದಲ್ಲಿ ವಿಷಕ್ಕೆ ೬ ಹುಲಿ, ಬಿಆರ್ಟಿ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಉರುಳಿಗೆ ಒಂದು ಹುಲಿ ಸಾವನ್ನಪ್ಪಿತ್ತು. ಇದೀಗ ಗುಂಡ್ಲುಪೇಟೆ ಭಾಗದಲ್ಲಿ ಸಹಜವಾಗಿ ಹುಲಿ ಸಾವನ್ನಪ್ಪಿದೆ.



