ರಾಮನಗರ: ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರ ಮಾತಿನಲ್ಲಿ ಶಕ್ತಿ ಇಲ್ಲ. ಅವರದು ಒಂದು ರೀತಿಯ ಎಳಸು ಸ್ಟೇಟ್ ಮೆಂಟ್ ಎಂದು ಶಾಸಕ ಹೆಚ್.ಎ.ಇಕ್ಬಾಲ್ ಹುಸೇನ್ ತಿರುಗೇಟು ನೀಡಿದರು. ತಾಲೂಕಿನ ಕೈಲಾಂಚ ಹೋಬಳಿಯ ಗ್ರಾಮಗಳಲ್ಲಿ ವಿವಿಧಿ
ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ದೊಡ್ಡ ಮನೆತನದಲ್ಲಿ, ದೊಡ್ಡ ಸ್ಥಾನದಲ್ಲಿದ್ದೀರಿ. ತಾವಾಗಿ ತಾವು ಕೆಳಗಡೆ ಬೀಳೋದು ನಮಗೆ ಇಷ್ಟವಿಲ್ಲ. ಗೌರವಯುತವಾಗಿ ಹೇಳಿಕೆಗಳನ್ನು ಕೊಡಬೇಕು ಎಂದರು. ರಾಜ್ಯದಲ್ಲಿ ಸಿದ್ದರಾಮಯ್ಯ ಬಳಿಕ ಸತೀಶ್ ಜಾರಕಿಹೋಳಿ ಅವರಿಗೆ ಜವಾಬ್ದಾರಿ ಎಂಬ ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಇಕ್ಬಾಲ್ ಹುಸೇನ್ ರವರು, ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರು, ಜವಾಬ್ದಾರಿಯುತ ಸ್ಥಾನದಲ್ಲಿದ್ದು ಪಕ್ಷ ಸಂಘಟನೆ ಮಾಡುತ್ತಿದ್ದಾರೆ.
ನಮಗೆಲ್ಲ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಯುವ ಕಾಂಗ್ರೆಸ್ ನಿಂದ ಬಂದಂತಹ ಡಿ.ಕೆ.ಶಿವಕುಮಾರ್ ಅವರು ಅನೇಕ ಹುದ್ದೆಗಳನ್ನು ನಿಭಾಯಿಸುವ ಜೊತೆಗೆ ಸಂಕಷ್ಟಗಳನ್ನು ಎದುರಿಸಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯಾರೂ ಗೊಂದಲದ ಹೇಳಿಕೆ ಕೊಡಬಾರದು. ಯತೀಂದ್ರ ಅವರು
ತಿದ್ದುಕೊಳ್ಳುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು. ಕೆಪಿಸಿಸಿಯಿಂದ ಯತೀಂದ್ರ ಅವರಿಗೆ ನೋಟೀಸ್ ನೀಡದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಮಾಡಿದರೆ ಬಲತ್ಕಾರ, ಬೇರೆಯವರು ಮಾಡಿದರೆ ಚಮತ್ಕಾರ ಅನ್ನುವ ಪರಿಸ್ಥಿತಿ ಇದೆ. ಅವೆಲ್ಲವನ್ನೂ ಹೇಳಬಾರದು, ಅವರು ತಿದ್ದುಕೊಳ್ಳುತ್ತಾರೆ. ಇನ್ನು
ಮುಂದಾದರು ಯಾವುದೇ ರೀತಿಯ ಹೇಳಿಕೆ ನೀಡಿ ಗೊಂದಲ ಸೃಷ್ಟಿ ಮಾಡುವುದು ಬೇಡ ಎಂದು ತಿಳಿಸಿದರು.



