ಕಳೆದ ವರ್ಷ ಚೊಚ್ಚಲ ಬಾರಿ ಐಪಿಎಲ್ ಪ್ರಶಸ್ತಿ ಜಯಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಮತ್ತೊಮ್ಮೆ ಇತಿಹಾಸ ನಿರ್ಮಿಸಿದೆ. ರಸಿಕ್ ಸಲಾಂ, ಭುವನೇಶ್ವರ ಕುಮಾರ್ ಅವರ ಬಿಗು ಬೌಲಿಂಗ್, ಬಳಿಕ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಅವರ ಆಕರ್ಷಕ ಅಜೇಯ ಅರ್ಧಶತಕದ ನೆರವನಿಂದ ಗುಜರಾತ್ ಟೈಟಾನ್ಸ್ ತಂಡವವನ್ನು 5 ವಿಕೆಟ್ ಗಳಿಂದ ಪರಾಭವಗೊಳಿಸಿದ ರಜತ್ ಪಾಟೀದಾರ್ ಬಳಗ ನಿರಂತರ 2ನೇ ಬಾರಿಗೆ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಬಳಿಕ ಐಪಿಎಲ್ ಟ್ರೋಫಿ ಉಳಿಸಿಕೊಂಡ ಕೇವಲ 3ನೇ ತಂಡವಾಗಿ ಹೊರಹೊಮ್ಮಿದೆ.ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೇ 31ರ ಭಾನುವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿತು. ಇದಕ್ಕುತ್ತರವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇನ್ನೂ 12 ಎಸೆತಗಳು ಬಾಕಿ ಉಳಿದಿರುವಾಗಲೇ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.ಸಾಧಾರಣ ಮೊತ್ತ ಬೆಂಬತ್ತಿ ಹೊರಟ ಆರ್ ಸಿಗೆ ವೆಂಕಟೇಶ್ ಅಯ್ಯರ್ (16 ಎಸೆತದಲ್ಲಿ 32 ರನ್) ಮತ್ತು ವಿರಾಟ್ ಕೊಹ್ಲಿ ಅವರು ಉತ್ತಮ ಆರಂಭ ಒದಗಿಸಿದರು. ಈ ಪಂದ್ಯದಲ್ಲೂ ಫಿಲ್ ಸಾಲ್ಟ್ ಅವರು ಆಡದ್ದು ತಂಡದ ಮೇಲೆ ಪರಿಣಾಮ ಬೀರಲಿಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಈ ಜೋಡಿ ಕೇವಲ 4.3 ರನ್ ಗಳಲ್ಲಿ 62 ರನ್ ಗಳಿಸಿದರು. ಹೀಗಾಗಿ ಆರ್ ಸಿಬಿ ಹಾದಿ ಸುಗಮವಾಯಿತು. ರಜತ್ ಪಾಟೀದಾರ್(13 ಎಸೆತಗಳಲ್ಲಿ 15 ರನ್), ಟಿಮ್ ಡೇವಿಡ್(17 ಎಸೆತಗಳಲ್ಲಿ 24 ರನ್ ) ಮತ್ತು ಅಂತಿಮವಾಗಿ ಜಿತೇಶ್ ಶರ್ಮಾ(14 ಎಸೆತಗಳಲ್ಲಿ ನಾಟೌಟ್ 11 ರನ್) ಅವರೊಂದಿಗೆ ವಿವಿಧ ಜೊತೆಯಾಟಗಳಲ್ಲಿ ಭಾಗಿಯಾದ ವಿರಾಟ್ ಕೊಹ್ಲಿ ಅವರು 75 ರನ್ ಗಳಿಸಿ ತಂಡವನ್ನು ಜಯದ ದಡ ತಲುಪಿಸಿದರು. ಕೇವಲ 42 ಎಸೆತಗಳನ್ನು ಎದುರಿಸಿದ ಅವರು 9 ಬೌಂಡರಿ ಮತ್ತು 9 ಸಿಕ್ಸರ್ ಗಳಿದ್ದ 75 ರನ್ ಗಳಿಸಿ ಅಜೇಯರಾಗಿ ಉಳಿದರು.ರಸಿಕ್ ಸಲಾಂ 3 ವಿಕೆಟ್ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಶುಭಮನ್ ಗಿಲ್ ಬಳಗ ಆರ್ ಸಿಬಿ ವೇಗಿಗಳ ಕರಾರುವಾಕ್ ಬೌಲಿಂಗ್ ದಾಳಿಯ ಮುಂದೆ ನಿರುತ್ತರವಾಯಿತು. ತಂಡದ ಮೊತ್ತ 4ನೇ ಓವರ್ ನಲ್ಲಿ 28 ಆಗಿರಬೇಕಾದರೆ ನಾಯಕ ಗಿಲ್ (8 ಎಸೆತದಲ್ಲಿ 10 ರನ್) ಮತ್ತು ಸಾಯಿ ಸುದರ್ಶನ್ (12 ಎಸೆತದಲ್ಲಿ 12 ರನ್) ಅವರ ವಿಕೆಟ್ ಗಳನ್ನು ಹೇಜಲ್ ವುಡ್ ಮತ್ತು ಭುವನೇಶ್ವರ್ ಕುಮಾರ್ ಅವರು ಎಗರಿಸಿದರು. ಆ ಬಳಿಕ ನಿಶಾಂತ್ ಸಂಧು(18 ಎಸೆತದಲ್ಲಿ 20 ರನ್), ಜೋಸ್ ಬಟ್ಲರ್(23 ಎಸೆತದಲ್ಲಿ 19 ರನ್) ಸಹ ತಂಡವನ್ನು ವಿಕೆಟ್ ಬೀಳುವುದನ್ನು ತಡೆದರೂ ರನ್ ರೇಟ್ ಕುಸಿದು ಹೋಗಿತ್ತು. ಮಧ್ಯಮ ಕ್ರಮಾಂಕದಲ್ಲಿ ವಾಶಿಂಗ್ಟನ್ ಸುಂದರ್ (37 ಎಸೆತದಲ್ಲಿ ಅಜೇಯ 50 ರನ್) ಮಾತ್ರ ಏಕಾಂಗಿಯಾಗಿ ತಂಡದ ರನ್ ಗಳಿಕೆಯನ್ನು ಮೇಲೆತ್ತಲು ಪ್ರಯತ್ನಿಸುತ್ತಲೇ ಇದ್ದರು. ಆದರೆ ಮತ್ತೊಂದು ತುದಿಯಿಂದ ಸರಿಯಾದ ಬೆಂಬಲ ಸಿಗದ್ದರಿಂದ ಅವರ ಪ್ರಯತ್ನ ಯಶಸ್ವಿಯಾಗಲಿಲ್ಲ. ಆರ್ ಸಿಬಿ ಪರ ರಸಿಕ್ ಸಲಾಂ 3 ವಿಕೆಟ್ ಪಡೆದರು. ಹೇಜಲ್ ವುಡ್ ಮತ್ತು ಭುವನೇಶ್ವರ್ ಕುಮಾರ್ ತಲಾ 2 ವಿಕೆಟ್ ಕಬಳಿಸಿದರು. ಉಳಿದೊಂದು ವಿಕೆಟ್ ಕೃನಾಲ್ ಪಾಂಡ್ಯ ಪಾಲಾಯಿತು.



