ಈಗ ಎಲ್ಲಾ ಕಡೆಯೂ ಮದುವೆ ಸೀಸನ್ ಶುರುವಾಗಿದೆ. ಬೇಸಿಗೆ ರಜೆಯ ಸಂದರ್ಭದಲ್ಲಿ ಸಾಲು ಸಾಲು ಶುಭ ಸಮಾರಂಭಗಳು ಸದಾ ಇದ್ದೇ ಇರುತ್ತವೆ. ಇದಕ್ಕೆ ನಮ್ಮ ಸ್ಯಾಂಡಲ್ವುಡ್ ಕೂಡಾ ಹೊರತಲ್ಲ. ಟಗರುಪುಟ್ಟಿ ಮಾನ್ವಿತಾ ಕಾಮತ್ ಹಸೆಮಣೆ ಏರೋಕೆ ರೆಡಿಯಾಗಿರೋದು ಈಗಾಗಲೇ ಗೊತ್ತಾಗಿದೆ.
ತಾವೇ ಖುದ್ದಾಗಿ ಮದುವೆ ಆಮಂತ್ರಣ ಕೊಟ್ಟು ಮಾನ್ವಿತಾ ಸಂತಸಪಡ್ತಿದ್ದಾರೆ. ಆದರೆ, ಇದೂವರಗೆ ಈ ಮುದ್ದು ಹುಡುಗಿಯನ್ನು ಕೈ ಹಿಡಿಯುತ್ತಿರೋ ಅದೃಷ್ಟವಂತ ಯಾರು ಅನ್ನೋ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಈಗ ಅಭಿಮಾನಿಗಳ ಈ ಕುತೂಹಲವನ್ನು ಖುದ್ದು ಮಾನ್ವಿತಾ ದೂರ ಮಾಡಿದ್ದಾರೆ.
ಅಂದ್ಹಾಗೆ, ಮಾನ್ವಿತಾ ಕೈ ಹಿಡಿಯುತ್ತಿರುವ ಲಕ್ಕಿ ಮ್ಯಾನ್ ಹೆಸರು ಅರುಣ್ ಕುಮಾರ್.
ಕಂಪನಿಯೊಂದರಲ್ಲಿ ಮ್ಯೂಸಿಕ್ ಪ್ರೊಡ್ಯೂಸರ್ ಆಗಿರುವ ಅರುಣ್ ಕುಟುಂಬಕ್ಕೆ ಮಾನ್ವಿತಾ ತಾಯಿ ಸುಜಾತಾ ಕಾಮತ್ ಪರಿಚಯ ಇತ್ತು. ಮಗಳಿಗೆ ಮದುವೆ ಮಾಡ್ಬೇಕು, ಒಳ್ಳೆ ಹುಡುಗ ಇದ್ದರೆ ತಿಳಿಸಿ ಎಂದು ಅನೇಕ ಸಂಬಂಧಿಕರು, ಆಪ್ತರ ಬಳಿ ಹೇಳಿದ್ದರು. ಅವರಲ್ಲಿ ಅರುಣ್ ಕುಮಾರ್ ತಾಯಿ ಕೂಡಾ ಒಬ್ಬರು. ಆದರೆ, ದುರಾದೃಷ್ಟವಶಾತ್ ಅನಾರೋಗ್ಯದಿಂದ ಮಾನ್ವಿತಾ ತಾಯಿಯನ್ನು ಕಳೆದುಕೊಂಡರು. ನಂತರ ಈ ವಿಚಾರ ತಿಳಿದು ಅರುಣ್ ಕುಮಾರ್ ಕುಟುಂಬ ಮಾನ್ವಿತಾರನ್ನು ಸಂಪರ್ಕಿಸಿದೆ. ಆಮೇಲೆ ಎರಡೂ ಕುಟುಂಬಗಳು ಭೇಟಿಯಾಗಿ, ಮಾತುಕತೆ ನಡೆದು ಈಗ ಮದುವೆ ನಿಶ್ಚಯವಾಗಿದೆ.